ನರಗುಂದ: ಮಠಗಳು ಸರ್ವ ಧರ್ಮದ ಶ್ರದ್ಧಾ ಕೇಂದ್ರಗಳು. ಗತಕಾಲದಿಂದಲೂ ಮಠ-ಮಾನ್ಯಗಳಿಂದ ಸಾಮಾಜಿಕ-ಶೈಕ್ಷಣಿಕ ಕಾರ್ಯಗಳು ನಿರಂತರವಾಗಿ ನಡೆದುಕೊಂಡು ಬರುತ್ತಿವೆ. ಆ ಮೂಲಕ ಸಮಾಜದಲ್ಲಿ ಜಾಗೃತಿ ಸಂದೇಶ ಸಾರುತ್ತಿರುವ ಕರ್ನಾಟಕದ ಅಧ್ಯಾತ್ಮಿಕ ಪರಂಪರೆ ಇಂದು ವಿಶ್ವಭೂಪಟದಲ್ಲಿ ಕಂಗೊಳಿಸುತ್ತಿದೆ ಎಂದು ಕೇಂದ್ರ ಸರಕಾರದ ಆಹಾರ ನಾಗರಿಕ ಸರಬರಾಜು ನಿಗಮದ ಸದಸ್ಯ ರವಿ ದಂಡಿನ ಹೇಳಿದರು.
ಅವರು ತಾಲೂಕಿನ ಭೈರನಹಟ್ಟಿ ಗ್ರಾಮದ ದೊರೆಸ್ವಾಮಿ ವಿರಕ್ತಮಠದಲ್ಲಿ ಶ್ರೀ ಗುರು ಬ್ರಹ್ಮಾನಂದ ಶಿವಾನುಭವ ಧರ್ಮ ಸಂಸ್ಥೆ, ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಹಾಗೂ ಆಶ್ರಯದಲ್ಲಿ ಹಮ್ಮಿಕೊಂಡಿದ್ದ 372ನೇ ಮಾಸಿಕ ಶಿವಾನುಭವ ಹಾಗೂ ಸಾಹಿತ್ಯ ಶ್ರಾವಣ -2025ರ ನಿಮಿತ್ತ ಕನ್ನಡ ಸಾಲುದೀಪಗಳು ವಿಶೇಷ ಉಪನ್ಯಾಸ ಮಾಲಿಕೆ-14 ಕಾರ್ಯಕ್ರಮದಲ್ಲಿ ಮಾತನಾಡಿದರು.ಕನ್ನಡ ಸಾಹಿತ್ಯ ಲೋಕದಲ್ಲಿ ಸಾವಿರಾರು ಕವಿಗಳು, ಸಾಹಿತಿಗಳು ತಮ್ಮ ಸಾಹಿತ್ಯ ಮೂಲಕ ಕನ್ನಡ ಮಾತೆಗೆ ಅಕ್ಷರ ನುಡಿಯನ್ನು ತುಂಬಿದ್ದಾರೆ. ಅಂತಹ ಆಯ್ದ ಪುಣ್ಯಪುರುಷರ ಜೀವನ ಚರಿತ್ರೆಯನ್ನು 30 ದಿನಗಳ ಕಾಲ ಸಾಹಿತ್ಯ ಶ್ರಾವಣದ ಮೂಲಕ ಜನಮಾನಸಕ್ಕೆ ತಿಳಿಸುತ್ತಿರುವ ಶ್ರೀಮಠದ ಕೈಂಕರ್ಯ ಶ್ಲಾಘನೀಯವಾದುದು ಎಂದರು.
ಇಂದು ನಮಗೆಲ್ಲ ಓದುವ ಅಭಿರುಚಿ ಕ್ಷೀಣಿಸುತ್ತಿದೆ. ಆ ಹಿನ್ನೆಲೆಯಲ್ಲಿ ಕವಿಗಳ ಕುರಿತು ಉಪನ್ಯಾಸ ನೀಡುವುದರ ಮೂಲಕ ಸಾಹಿತ್ಯಾಭಿಮಾನ ಮೂಡಿಸುತ್ತಿರುವುದು ಅಭಿನಂದನೀಯ ಎಂದು ಹೇಳಿದರು.ಶಾಂತಲಿಂಗ ಶ್ರೀಗಳು ಮಾತನಾಡಿ, ಜಾನಪದ ಸಾಹಿತ್ಯ ಲೋಕದಲ್ಲಿ ಅದ್ವಿತೀಯ ಕೊಡುಗೆ ನೀಡಿದ ಡಾ. ಚಂದ್ರಶೇಖರ ಕಂಬಾರ ಅವರು ಈ ನಾಡಿನ ಅನರ್ಘ್ಯ ರತ್ನ. ಕಾಡು ಕುದುರೆ, ಸಿಂಗಾರವ್ವ ಮತ್ತು ಅರಮನೆ, ಕರಿಮಾಯಿಯಂತಹ ಪ್ರಸಿದ್ಧ ಕಾದಂಬರಿಗಳು ಸೇರಿದಂತೆ ಹಲವಾರು ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ ಕಂಬಾರರು ಕನ್ನಡ ಸಾಹಿತ್ಯದ ನಡುಗಂಬವಿದ್ದಂತೆ ಎಂದು ಹೇಳಿದರು. ಈ ಸಂದರ್ಭದಲ್ಲಿ ನೂತನವಾಗಿ ಕೇಂದ್ರ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಸದಸ್ಯರಾಗಿ ಆಯ್ಕೆಯಾದ ಕನಕದಾಸ ಶಿಕ್ಷಣ ಸಮಿತಿ ಕಾರ್ಯದರ್ಶಿ ರವಿ ದಂಡಿನ ಅವರನ್ನು ಶ್ರೀಮಠದಿಂದ ಶಾಂತಲಿಂಗ ಶ್ರೀಗಳು ಇವರನ್ನು ಅಭಿನಂದಿಸಿ ಸತ್ಕರಿಸಲಾಯಿತು. ವೇದಿಕೆ ಮೇಲೆ ಪ್ರಥಮ ದರ್ಜೆ ಗುತ್ತಿಗೆದಾರ ಬಸವರಾಜ ಬಿಂಗಿ, ಸುರೇಶ ಕುಲಕರ್ಣಿ, ಅನಂತ ದೇಶಪಾಂಡೆ, ಡಾ. ಸಂಗಮೇಶ ತಮ್ಮನಗೌಡ್ರ, ಬಿ.ಎಂ. ಗೊಜನೂರ, ಶಿವಾನಂದ ಮಣ್ಣೂರಮಠ, ಪ್ರೊ. ಆರ್. ಕೆ. ಐನಾಪೂರ, ಬಿ. ಬಿ. ಐನಾಪೂರ, ಡಾ. ಎ. ಆಯ್. ಹುಯಿಲಗೋಳ, ಮಹಾಂತೇಶ ಸಾಲಿಮಠ, ಮಂಗಳಾ ಪಾಟೀಲ, ಸೇರಿದಂತೆ ಮುಂತಾದವರು ಇದ್ದರು. ಶಿಕ್ಷಕ ಮಹಾಂತೇಶ ಹಿರೇಮಠ ಸ್ವಾಗತಿಸಿದರು. ಪ್ರೊ.ಆರ್.ಬಿ. ಚಿನಿವಾಲರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.