ಹರಪನಹಳ್ಳಿ: ಆರ್ಥಿಕತೆ, ಶಿಕ್ಷಣಕ್ಕೆ ಒತ್ತು ಕೊಟ್ಟರೆ ಸಮಾಜ ಬಲಿಷ್ಠ ಹಾಗೂ ಜಾಗೃತಿಯಾಗುತ್ತದೆ ಎಂದು ಕಾಗಿನೆಲೆಯ ಕನಕ ಗುರುಪೀಠದ ನಿರಂಜನಾನಂದಪುರಿ ಶ್ರೀ ತಿಳಿಸಿದರು.
ಉತ್ತಮ ಸಮಾಜ ನಿರ್ಮಾಣವಾಗಬೇಕಾದರೆ ಶಿಕ್ಷಣಕ್ಕೆ ಹಾಗೂ ದುಡಿಮೆಗೆ ಒತ್ತು ಕೊಡಬೇಕು. ನಾವು ದುಡಿದ ಹಣವನ್ನು ಯಾವ ರೀತಿಯಾಗಿ ಉಪಯೋಗ ಮಾಡಬೇಕೆಂಬುದು ಸಾಮಾನ್ಯ ಜ್ಞಾನವಿರಬೇಕು ಎಂದು ಹೇಳಿದರು.
ಕೌಟುಂಬಿಕ ಕಲಹಗಳು ಬಂದರೆ, ನಮಗೆ ಕಷ್ಟ ಬಂದರೆ ನಾವು ದೇವರಿಗೆ ಪ್ರಾರ್ಥನೆ ಸಲ್ಲಿಸುವುದಕ್ಕೆ ದೇವಸ್ಥಾನಗಳು ಬೇಕು. ಆದರೆ ಬರೀ ದೇವಸ್ಥಾನದ ಗಂಟೆ ಬಾರಿಸುವುದೊಂದೇ ಅಲ್ಲ. ಅದರ ಬದಲಾಗಿ ಶಾಲೆಗಳಲ್ಲಿ ಶಿಕ್ಷಣವೆಂಬ ಅತೀ ಹೆಚ್ಚು ಗಂಟೆ ಬಾರಿಸಿದರೆ ಊರು, ತಾಲೂಕು, ಜಿಲ್ಲೆ, ರಾಜ್ಯ, ದೇಶ ಅಭಿವೃದ್ಧಿಯಾಗುತ್ತದೆ ಎಂದು ನುಡಿದರು.ದೇವಸ್ಥಾನದಲ್ಲಿ ಬಾರಿಸುವ ಗಂಟೆ ಆಧ್ಯಾತ್ಮಿಕ ಆತ್ಮ ಚೈತನ್ಯ ನೀಡುತ್ತದೆ, ಆದರೆ ಶಾಲೆಗಳಲ್ಲಿ ಬಾರಿಸುವ ಗಂಟೆ ಜ್ಞಾನರ್ಜನೆ ನೀಡುತ್ತದೆ.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ ಮಾತನಾಡಿ, ನಿಮ್ಮ ಮಕ್ಕಳಿಗೆ ಆಸ್ತಿ ಮಾಡದೇ, ಅವರಿಗೆ ಒಳ್ಳೆಯ ಶಿಕ್ಷಣ ಕೊಟ್ಟು ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ. ನಾವು ಇವತ್ತು ಏನನ್ನಾದರು ಸಾಧಿಸಬೇಕಾದರೆ ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಹೇಳಿದರು.
ಹಗರಿಬೊಮ್ಮನಹಳ್ಳಿ ಉಪನ್ಯಾಸಕ ಗುಳೆಯಪ್ಪ ಹುಲಿಮನೆ ಮಾತನಾಡಿ, ಕಂಚಿಕೆರೆ ಗ್ರಾಮದ ಬಾಂಧವರ ಮಕ್ಕಳಿಗೆ ಶಿಕ್ಷಣದ ಕೊರತೆ ಎದ್ದು ಕಾಣುತ್ತದೆ. ನಮ್ಮ ಸಮಾಜದವರು ಕಷ್ಟಪಟ್ಟು ದುಡಿದರೂ ಸಹ ಅಭಿವೃದ್ಧಿಯಾಗಿಲ್ಲ ಎಂದರು.ಜಿಪಂ ಮಾಜಿ ಸದಸ್ಯ ಎಚ್.ಬಿ. ಪರಶುರಾಮಪ್ಪ ಡೊಳ್ಳು ಬಾರಿಸುವ ಮುಖಾಂತರ ಕಾರ್ಯಕ್ರಮ ಉದ್ಘಾಟಿಸಿದರು.
ಅಧ್ಯಕ್ಷತೆ ಎಚ್.ಪರುಸಪ್ಪ ವಹಿಸಿದ್ದರು. ಎಂ.ನಾಗರಾಜ್, ಜೆ. ಮಂಜಪ್ಪ, ಕೆ. ಕೆಂಚಪ್ಪ, ಎಂ. ಹನುಮಂತಪ್ಪ, ಬಿ.ಅಂಜಿನಪ್ಪ, ಕೆಂಚನಗೌಡ, ಕೊಟ್ರೇಶ್, ಅಲ್ಲಾಭಕ್ಷಿ ಸಾಹೇಬ್, ಡಿ.ದೇವೇಂದ್ರಪ್ಪ, ಮುತ್ತಿಗೆ ಜಂಭಣ್ಣ, ವಕೀಲ ಗೋಣಿಬಸಪ್ಪ, ಚಲವಾದಿ ಹನುಮಂತಪ್ಪ, ವೆಂಕಟೇಶ್, ಬಾರಿಕಾರ ಮಂಜಪ್ಪ, ಪಿಎಸ್ ಐ. ಕೆ. ರಂಗಯ್ಯ, ಸಮಾಜದ ಮುಖಂಡರು, ಊರಿನ ಗ್ರಾಮಸ್ಥರು ಇದ್ದರು.ಹರಪನಹಳ್ಳಿ ತಾಲೂಕಿನ ಕಂಚಿಕೇರಿಯಲ್ಲಿ ಬೀರೇಶ್ವರ ಜಾತ್ರೆ ಅಂಗವಾಗಿ ಆಯೋಜಿಸಿದ್ದ ದರ್ಮಸಭೆಯನ್ನು ಜಿಪಂ ಮಾಜಿ ಸದಸ್ಯ ಬಿ.ಪರಶುರಾಮಪ್ಪ ಉದ್ಘಾಟಿಸಿದರು.