ರಾಣಿಬೆನ್ನೂರು: ಮಣ್ಣು ಮತ್ತು ನೀರು ಭೂಮಿ ಮೇಲಿನ ಜೀವಿಗಳಿಗೆ ಅತ್ಯಾವಶ್ಯಕವಾಗಿದ್ದು, ನಾವೆಲ್ಲರೂ ನೀರು ಮತ್ತು ಮಣ್ಣಿನ ಸಂರಕ್ಷಣೆ ಮಾಡಬೇಕು ಎಂದು ಕೃಷಿ ಇಲಾಖೆ ಉಪ ನಿರ್ದೇಶಕ ಡಾ. ಕರಿಯಲ್ಲಪ್ಪ ಕೆ. ಹೇಳಿದರು. ತಾಲೂಕಿನ ಕಾಕೋಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರ ಹಾಗೂ ದಿ ಫರ್ಟಿಲೈಜರ್ಸ್ ಆ್ಯಂಡ್ ಕೆಮಿಕಲ್ಸ್ ಟ್ರಾವಂಕೂರ್ ಲಿ. ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ವಿಶ್ವ ಮಣ್ಣು ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ ಡಾ. ಎ. ಎಚ್. ಬಿರಾದಾರ ಮಾತನಾಡಿ, ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಕಡಿಮೆಯಾಗುತ್ತಿರುವ ಕೃಷಿ ಭೂಮಿಯಲ್ಲಿ ಫಲವತ್ತತೆ ಕಾಪಾಡಿಕೊಂಡು ಉತ್ತಮ ಗುಣಮಟ್ಟದ ಆಹಾರ ಉತ್ಪಾದಿಸುವ ಬಗ್ಗೆ ಚಿಂತನ ಮಂಥನ ನಡೆಸುವ ಅಗತ್ಯವಿದೆ ಎಂದರು. ಬೆಳಗಾವಿ ವಲಯ ಫ್ಯಾಕ್ಟ್ ಲಿ. ಸಹಾಯಕ ಮಹಾಪ್ರಬಂಧಕ ಜನಾರ್ಧನ ಭಟ್ ಮಾತನಾಡಿ, ಜೀವಕ್ಕೆ ಮತ್ತು ಜೀವನಕ್ಕೆ ಮಣ್ಣೇ ಆಧಾರ. ಅದಕ್ಕಾಗಿ ಮಣ್ಣಿನ ಫಲವತ್ತತೆ ಮತ್ತು ಜೀವ ವೈವಿಧ್ಯತೆಯನ್ನು ಕಾಪಾಡುವ ಅವಶ್ಯಕತೆಯಿದೆ. ಮಣ್ಣಿನ ಆರೋಗ್ಯಕ್ಕೆ ಬೇಕಾದ ಪೋಷಕಾಂಶಗಳನ್ನು ಒದಗಿಸುವುದು ನಮ್ಮ ಕರ್ತವ್ಯ ಹಾಗೂ ಅವೈಜ್ಞಾನಿಕ ರಾಸಾಯನಿಕಗಳ ಬಳಕೆಯಿಂದ ಮಣ್ಣಿನ ಫಲವತ್ತತೆಯನ್ನು ನಾವು ಹಾಳುಮಾಡುತ್ತಿದ್ದೇವೆ. ಆದ್ದರಿಂದ ಮಣ್ಣಿನ ಜೀವಂತಿಕೆಯನ್ನು ಹೆಚ್ಚಿಸಲು ಸಾವಯವ ಗೊಬ್ಬರದ ಬಳಕೆಯನ್ನು ಹೆಚ್ಚಿಸಬೇಕು ಎಂದರು.ಪ್ರಗತಿಪರ ರೈತ ಚನ್ನಬಸಪ್ಪ ಕೋಂಬಳಿ ಮಾತನಾಡಿ, ಆಧುನಿಕ ನಗರೀಕರಣದಿಂದ ಕೃಷಿ ಭೂಮಿ ಕಡಿಮೆಯಾಗಿದ್ದು ಉತ್ತಮ ಗುಣಮಟ್ಟದ ಆಹಾರ ಉತ್ಪಾದನೆಯಲ್ಲಿ ನಾವು ವಿಫಲರಾಗಿರುತ್ತಿದ್ದೇವೆ. ಆದ್ದರಿಂದ ಕೃಷಿ ಭೂಮಿಯನ್ನು ಉಳಿಸಲು ಸಾವಯವ ಕೃಷಿ ಪದ್ಧತಿಯನ್ನು ಬಳಸಿ ಕೃಷಿ ಚಟುವಟಿಕೆಯನ್ನು ಕೈಗೊಳ್ಳುವುದರಿಂದ ಭೂಮಿ ಆರೋಗ್ಯವನ್ನು ಕಾಪಾಡಬಹುದು ಎಂದರು. ರಾಣಿಬೆನ್ನೂರಿನ ವನಸಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮುಖ್ಯಸ್ಥ ಎಸ್. ಡಿ. ಬಳಿಗಾರ ಮಾತನಾಡಿ, ಮಣ್ಣಿನ ಪರೀಕ್ಷೆ ಆಧಾರದ ಮೇಲೆ ವೈಜ್ಞಾನಿಕವಾಗಿ ಆಯಾ ಬೆಳೆಗಳಿಗೆ ಶಿಫಾರಸ್ಸು ಮಾಡಿದ ರಸಗೊಬ್ಬರಗಳನ್ನು ಬಳಕೆ ಮಾಡುವುದು ಅವಶ್ಯಕ ಎಂದರು. ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳು ರೈತ/ ರೈತ ಮಹಿಳೆಯರ ವೇಷಧರಿಸಿ ನೃತ್ಯದ ಮೂಲಕ ರೈತ ಗೀತೆಯನ್ನು ಹಾಡಿದರು. ಶಾಲಾಮಕ್ಕಳು ಸಿರಿಧಾನ್ಯಗಳ ಮಹತ್ವದ ಕುರಿತು ವಿಶೇಷ ರೀತಿಯಲ್ಲಿ ವಿವಿಧ ಸಿರಿಧಾನ್ಯಗಳ ಬೆಳೆಗಳ ಚದ್ಮವೇಷ ಧರಿಸಿ ನಾಟಕದ ರೂಪದಲ್ಲಿ ರೈತರಿಗೆ ಬೆಳೆಗಳ ಕುರಿತು ಮಾಹಿತಿ ನೀಡಿ ರೈತರ ಗಮನ ಸೆಳೆದರು. ಕೃಷಿ ವಿಜ್ಞಾನ ಕೇಂದ್ರದ ಎಲ್ಲಾ ವಿಜ್ಞಾನಿಗಳಾದ ಡಾ. ಮಹೇಶ ಕಡಗಿ, ಡಾ. ಸಿದ್ಧಗಂಗಮ್ಮ ಕೆ. ಆರ್., ಡಾ. ಬಸಮ್ಮ ಹಾದಿಮನಿ, ಡಾ. ಅಕ್ಷತಾ ರಾಮಣ್ಣನವರ, ಹಿರಿಯ ತಾಂತ್ರಿಕ ಅಧಿಕಾರಿ ಚಂದ್ರಕಾಂತ ಕೊಟಬಾಗಿ, ತಾಂತ್ರಿಕ ಅಧಿಕಾರಿ ಡಾ. ಕೃಷ್ಣಾನಾಯಕ ಎಲ್., ಹಿರಿಯ ಸಂಶೋಧಕ ಡಾ. ಕಿರಣ ಎಮ್ಮಿಗನೂರ ಮತ್ತು ಸಿಬ್ಬಂದಿ ವರ್ಗ ಹಾಗೂ ಎಸ್ಡಿಎಂಸಿ ಅಧ್ಯಕ್ಷ ಶಿವಾನಂದ ಶಂಕರಪ್ಪ ಕಡೆಮನಿ, ಮುಖ್ಯ ಶಿಕ್ಷಕ ಬಸವರಾಜ ಎಲಿಗಾರ, ಶಿಕ್ಷಕರು ಮತ್ತು ಸಿಬ್ಬಂದಿ ವರ್ಗ, ಗ್ರಾಮದ ಪ್ರಗತಿಪರ ರೈತರಾದ ರಾಜುಗೌಡ ಪಾಟೀಲ, ಮಾಲತೇಶ ಶಿಡಗನಾಳ, ಭರಮಲಿಂಗಪ್ಪ ಅಸುಂಡಿ, ಜಗದೀಶ ಚಪ್ಪರದ, 100ಕ್ಕೂ ಹೆಚ್ಚು ರೈತ/ರೈತ ಮಹಿಳೆಯರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.