ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣಭಕ್ತಿ, ಶ್ರದ್ಧೆ ಹಾಗೂ ಸಾಮಾಜಿಕ ಕಾರ್ಯ ಚಟುವಟಿಕೆಗಳಿಗೆ ಚನ್ನರಾಯಪಟ್ಟಣ ಪ್ರಸನ್ನ ಗಣಪತಿ ಸೇವಾ ಸಮಿತಿ ಹೆಸರುವಾಸಿಯಾಗಿದೆ. ಅರ್ಥಪೂರ್ಣ ಕಾರ್ಯಕ್ರಮದ ಅಂಗವಾಗಿ ಆರಂಭಿಕವಾಗಿ ಮಣ್ಣಿಗೆ ಪೂಜೆ ನೆರವೇರಿಸಲಾಗಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.ಪಟ್ಟಣದ ಶ್ರೀ ಪ್ರಸನ್ನ ಗಣಪತಿ ಆಸ್ಥಾನ ಮಂಟಪದಲ್ಲಿ ಸೆಪ್ಟೆಂಬರ್ನಲ್ಲಿ ನಡೆಯಲಿರುವ ೭೫ನೇ ವರ್ಷದ ಗಣೇಶೋತ್ಸವ ಹಿನ್ನೆಲೆಯಲ್ಲಿ ಗಣೇಶ ಮೂರ್ತಿ ತಯಾರಿಕೆಯ ಮಣ್ಣಿನ ಪೂಜೆಯನ್ನು ನೆರವೇರಿಸಿ ಮಾತನಾಡಿದರು. ಪಟ್ಟಣದ ಗಣಪತಿ ಸೇವಾ ಸಮಿತಿಗೆ ರಾಜ್ಯದಲ್ಲೇ ವಿಶೇಷ ಸ್ಥಾನಮಾನವಿದೆ. ಜಾತ್ಯತೀತವಾಗಿ ಗಣೇಶ ಹಬ್ಬವನ್ನು ಆಚರಣೆ ಮಾಡಿಕೊಂಡು ಸರ್ವಧರ್ಮಗಳು ಒಂದೇ ಎಂಬ ಭಾವೈಕ್ಯತೆ ಸಾರಲಾಗುತ್ತಿದೆ. ಸತತ ೭೪ ವರ್ಷಗಳಿಂದ ಗಣೇಶ ಮೂರ್ತಿಯನ್ನು ಪ್ರತಿ?ಪಿಸಿಕೊಂಡು ಬಂದಿರುವ ಸೇವಾ ಸಮಿತಿಯು ೭೫ನೇ ವರ್ಷದ ಮಹೋತ್ಸವಕ್ಕಾಗಿ ಏಕಾದಶಿ ಶುಭದಿನದಂದು ಮಣ್ಣಿನ ಪೂಜೆ ನೆರವೇರಿಸಲಾಗಿದೆ ಎಂದು ತಿಳಿಸಿದರು.೫೦ ದಿನ ಗಣೇಶ ಮೂರ್ತಿಯನ್ನು ಇಟ್ಟು ಪೂಜೆ ಪುನಸ್ಕಾರಗಳನ್ನು ಕೈಗೊಂಡು ನಿತ್ಯ ಅನ್ನ ದಾಸೋಹ ಸೇರಿ ನಾಡು, ನುಡಿ, ಕಲೆ, ಸಾಹಿತಿ, ಸಂಸ್ಕೃತಿಗೆ ಹತ್ತಿರವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ತಾಲ್ಲೂಕು ಪಂಚಾಯಿತಿ ಸದಸ್ಯನಾದಾಗಿನಿಂದಲೂ ಪ್ರತಿವರ್ಷ ನೆರವೇರುವ ಗಣೇಶ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ಕೆ ತನು, ಮನ, ಧನ ಸಹಕಾರ ನೀಡುತ್ತಿದ್ದು, ಇದು ಈ ಬಾರಿಯೂ ಮುಂದುವರಿಯುತ್ತದೆ ಎಂದರು.ಪ್ರಸನ್ನ ಗಣಪತಿ ಆಸ್ಥಾನ ಮಠದ ಛಾವಣಿಯ ದುರಸ್ತಿಗೆ ಪುರಸಭೆ ವತಿಯಿಂದ ಆರ್ಥಿಕ ನೆರವು ಒದಗಿಸಿ ದುರಸ್ತಿ ಕಾರ್ಯ ಪೂರ್ಣಗೊಂಡಿದೆ. ಮುಂಗಾರು ಮಳೆ ಕೈ ಕೊಟ್ಟ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ತೀವ್ರ ಮಳೆಯ ಕೊರತೆ ಉಂಟಾಗಿ ಬರಗಾಲದ ಪರಿಸ್ಥಿತಿ ಎದುರಾಗಿದೆ. ರೈತರು ಸಂಕಷ್ಟದಲ್ಲಿದ್ದು ಗಣಪತಿ ಕೃಪೆಯಿಂದ ಉತ್ತಮ ಮಳೆಯಾಗಿ ಬೆಳೆ ಉತ್ತಮವಾಗಿರಲಿ, ನಾಡು ಸುಭಿಕ್ಷವಾಗಿರಲಿ ಎಂದು ಪ್ರಾರ್ಥಿಸಿದರು. ಗಣಪತಿ ಸೇವಾ ಸಮಿತಿ ಅಧ್ಯಕ್ಷ ಸಿ.ಎನ್. ಅಶೋಕ್ ಮಾತನಾಡಿ, ಕಳೆದ ಸಾಲಿನಂತೆ ಈ ಬಾರಿ ೪೮ ದಿನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುವುದು. ಪ್ರತಿದಿನ ಅನ್ನ ಸಂತರ್ಪಣೆ, ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಯೊಂದಿಗೆ ಕಾರ್ಯಕ್ರಮವನ್ನು ರೂಪಿಸುವ ಸಂಕಲ್ಪ ಮಾಡಲಾಗಿದೆ. ರಜತ ಮಹೋತ್ಸವ ಹಿನ್ನಲೆಯಲ್ಲಿ ಅದ್ಧೂರಿ ಕಾರ್ಯಕ್ರಮವನ್ನು ನಡೆಸಲು ಆಲೋಚಿಸಿರುವುದರಿಂದ ಪಟ್ಟಣದ ಸಂಘ ಸಂಸ್ಥೆಗಳು ಸಹಕಾರ ನೀಡಿ ಯಶಸ್ಸಿಗೆ ಸಹಕರಿಸಬೇಕೆಂದು ಮನವಿ ಮಾಡಿದರು.