ರೈತನಿಂದ ಏಕಾಂಗಿ ಪ್ರತಿಭಟನೆ: ಸ್ಥಳಕ್ಕೆ ಬಾರದ ಅಧಿಕಾರಿಗಳು

KannadaprabhaNewsNetwork | Published : Mar 29, 2025 12:33 AM

ಸಾರಾಂಶ

ಶ್ರೀರಂಗಪಟ್ಟಣ ತಾಲೂಕಿನ ಕಿರಂಗೂರು ಗ್ರಾಮದ ಬಳಿ ನಾಲಾ ಏರಿ, ಸಾರ್ವಜನಿಕ ರಸ್ತೆ ಒತ್ತುವರಿ ತೆರವಿಗಾಗಿ ಕಳೆದ 12 ದಿನಗಳಿಂದ ರೈತ ಪ್ರಭಾಕರ್ ಏಕಾಂಗಿಯಾಗಿ ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಯಾವೊಬ್ಬ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಆಗಮಿಸಿ ಸಮಸ್ಯೆ ಕೇಳದಿರುವುದು ದುರಂತ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ತಾಲೂಕಿನ ಕಿರಂಗೂರು ಗ್ರಾಮದ ಬಳಿ ನಾಲಾ ಏರಿ, ಸಾರ್ವಜನಿಕ ರಸ್ತೆ ಒತ್ತುವರಿ ತೆರವಿಗಾಗಿ ಕಳೆದ 12 ದಿನಗಳಿಂದ ರೈತ ಪ್ರಭಾಕರ್ ಏಕಾಂಗಿಯಾಗಿ ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಯಾವೊಬ್ಬ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಆಗಮಿಸಿ ಸಮಸ್ಯೆ ಕೇಳದಿರುವುದು ದುರಂತ ಎಂದು ಮಂಡ್ಯ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಶಂಕರ್‌ಬಾಬು ಬೇಸರ ವ್ಯಕ್ತಪಡಿಸಿದರು.

ಪಟ್ಟಣ ತಾಲೂಕು ಕಚೇರಿ ಎದುರು ರೈತ ಪ್ರಭಾಕರ್ ನಡೆಸುತ್ತಿರುವ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಪ್ರತಿಭಟನೆಗೆ ಕೈಜೋಡಿಸಿ, ದಿ.ಡಾ.ಶಿವಕುಮಾರ್‌ಸ್ವಾಮಿ ರವರ 118ನೇ ವರ್ಷದ ಜನ್ಮದಿನದ ಆಹ್ವಾನ ಪತ್ರಿಕೆಯನ್ನು ಧರಣಿ ನಿರತ ರೈತ ಪ್ರಭಾಕರ್ ಅವರಿಂದ ಬಿಡುಗಡೆಗೊಳಿಸಿ ಮಾತನಾಡಿದರು.

ತಮ್ಮ ಸ್ವಾರ್ಥವನ್ನು ಬದಿಗಿಟ್ಟು, ಸಮಾಜ ಹಾಗೂ ಇತರರಿಗೆ ಒಳಿತಾಗುವ ನಿಟ್ಟಿನಲ್ಲಿ ಕಳೆದ 12 ದಿನಗಳಿಂದ ಏಕಾಂಗಿಯಾಗಿ ನಡೆಸುತ್ತಿದ್ದಾರೆ. ಹೋರಾಟದ ಸ್ಥಳಕ್ಕೆ ತಹಸೀಲ್ದಾರ್ ಸೇರಿದಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು ಆಗಮಿಸಿ ಸಮಸ್ಯೆ ಆಲಿಸದಿರುವುದು ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ ಎಂದರು.

ಡಾ.ಶಿವಕುಮಾರ್‌ಸ್ವಾಮಿ ರವರ 118ನೇ ವರ್ಷದ ವೇದಿಕೆಯಿಂದ ಮುದ್ರಣಗೊಂಡ ಜನ್ಮದಿನದ ಆಹ್ವಾನ ಪತ್ರಿಕೆಯನ್ನು ಹಿರಿಯ ಹಾಗೂ ರೈತರ ಪರ ಕಾಳಜಿಹೊಂದಿರುವ ಪ್ರಭಾಕರ್ ಅವರಿಂದ ಬಿಡುಗಡೆ ಮಾಡಿಸಿದ್ದೇವೆ. ಡಾ. ಶಿವಕುಮಾರ್‌ ಸ್ವಾಮೀಜಿ ಅವರ ದಿವ್ಯದೃಷ್ಠಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಮೇಲೆ ಬಿದ್ದು, ರೈತ ಪ್ರಭಾಕರ್ ಅವರ ಹೋರಾಟಕ್ಕೆ ಒಳ್ಳೆಯದಾಗಲಿ ಎಂದರು.

ರೈತ ಪ್ರಭಾಕರ್ ಮಾತನಾಡಿ, ನನಗೆ ಸತತವಾಗಿ 21 ವರ್ಷಗಳಿಂದ ಅನ್ಯಾಯವಾಗಿ ಅಗತ್ಯ ದಾಖಲೆಗಳೊಂದಿಗೆ ಕಚೇರಿಯಿಂದ ಕಚೇರಿಗೆ ತಿರುಗಿದ್ದೇನೆ ವಿನಃ ನ್ಯಾಯಸಿಕ್ಕಿಲ್ಲ. ಸಾರ್ವಜನಿಕ ರಸ್ತೆ, ನಾಲಾ ಏರಿ ಒತ್ತುವರಿ ತೆರವುಗೊಳಿಸುವಂತೆ ಹೋರಾಟ ನಡೆಸುತ್ತಿದ್ದ ನನ್ನ ಮೇಲೆ ಹಲ್ಲೆ ಸಹ ನಡೆದಿದೆ. ಹಾಗಾಗಿ ನ್ಯಾಯಾಲಯದಲ್ಲಿ ಉನ್ನತಮಟ್ಟದ ತನಿಖೆ ನಡೆಸುವಂತೆ ಒತ್ತಾಯಿಸಿದರು.

Share this article