ಗ್ರಾಮೀಣ ಭಾಗದ ದಲಿತರ ಸ್ಮಶಾನ ಸಮಸ್ಯೆಗೆ ಪರಿಹಾರ: ಚಂದ್ರಕಾಂತ ನಂದರಡ್ಠಿ

KannadaprabhaNewsNetwork |  
Published : Jun 15, 2026, 04:00 AM IST
ಕುಂದು ಕೊರತೆ ಸಭೆ | Kannada Prabha

ಸಾರಾಂಶ

ಬಸವನಬಾಗೇವಾಡಿಯ ಯಾತ್ರಿ ನಿವಾಸದಲ್ಲಿ ಭಾನುವಾರ ಜರುಗಿದ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದವರ ಕುಂದು ಕೊರತೆ ಸಭೆಯಲ್ಲಿ ಡಿವೈಎಸ್ ಪಿ ಚಂದ್ರಕಾಂತ ನಂದರಡ್ಡಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ಗ್ರಾಮೀಣ ಪ್ರದೇಶಗಳಲ್ಲಿ ದಲಿತರಿಗೆ ಸ್ಮಶಾನ ಸಮಸ್ಯೆಯಿರುವ ಕುರಿತು ಮಾಹಿತಿ ನೀಡಿದರೆ ಇಲಾಖೆಯಿಂದ ಸಮಸ್ಯೆ ಪರಿಹರಿಸುವ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದು ಡಿವೈಎಸ್ ಪಿ ಚಂದ್ರಕಾಂತ ನಂದರಡ್ಠಿ ಭರವಸೆ ನೀಡಿದರು.

ಪಟ್ಟಣದ ಬಸವೇಶ್ವರ ಯಾತ್ರಿ ನಿವಾಸದಲ್ಲಿ ಭಾನುವಾರ ಬಸವನಬಾಗೇವಾಡಿ ಉಪ ವಿಭಾಗ ಪೊಲೀಸ್ ಠಾಣಾ ವ್ಯಾಪ್ತಿಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಕುಂದು ಕೊರತೆ ಸಭೆಯಲ್ಲಿ ಮಾತನಾಡಿದ ಅವರು, ಪಟ್ಟಣದ ಬಸವೇಶ್ವರ ವೃತ್ತ, ಅಂಬೇಡ್ಕರ್‌ ವೃತ್ತದಲ್ಲಿ ಸಿಗ್ನಲ್ ಹಾಕಲು ಸಾಧ್ಯವಾಗುವುದಿಲ್ಲ. ಪಟ್ಟಣಕ್ಕೆ ರಿಂಗ್ ರೋಡ್‌ ಆದಾಗ ಮಾತ್ರ ಪಟ್ಟಣದಲ್ಲಿನ ಟ್ರಾಫಿಕ್ ಸಮಸ್ಯೆ ತಡೆಯಬಹುದಾಗಿದೆ ಎಂದು ಹೇಳಿದರು.

ಜಾತಿ ನಿಂದನೆಯ ಪ್ರಕರಣ ಗಳಲ್ಲಿ ಕೌಂಟರ್ ಪ್ರಕರಣಗಳು ಆಗದಂತೆ ತಡೆಯುವ ಮೂಲಕ ದಲಿತ ಸಮುದಾಯಕ್ಕೆ ನ್ಯಾಯ ಒದಗಿಸಲಾಗಿದೆ ಎಂದ ಅವರು, ಏನಾದರೂ ಗುಪ್ತ ಮಾಹಿತಿ ಇದ್ದರೆ ಇಲಾಖೆ ಗಮನಕ್ಕೆ ತರಬೇಕು. ಗೌಪ್ಯತೆ ಕಾಪಾಡಲಾಗುವುದು ಎಂದು ಭರವಸೆ ನೀಡಿದರು.

ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದವರ ಕುಂದು ಕೊರತೆ ಸಭೆಯಲ್ಲಿ ಬೇರೆ ಇಲಾಖೆಯ ಸಮಸ್ಯೆಗಳನ್ನು ಚರ್ಚಿಸುವುದಕ್ಕಿಂತ ಹೆಚ್ಚಾಗಿ ಪೊಲೀಸ್ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಚರ್ಚೆ ಮಾಡುವಂತೆ ಸಲಹೆ ನೀಡಿದರು.

ಟಕ್ಕಳಕಿ ಮೊರಾರ್ಜಿ ಶಾಲೆಯ ಮುಂಭಾಗದಲ್ಲಿ ಬೀಟ್ ಪೊಲೀಸ್ ಅಳವಡಿಸುವಂತೆ ಡಿಎಸ್ಎಸ್ ಮುಖಂಡ ಅರವಿಂದ ಸಾಲವಾಡಗಿ ಒತ್ತಾಯಿಸಿದರು.

ಅಂಬೇಡ್ಕರ್‌ ವೃತ್ತದ ಸುತ್ತಮುತ್ತ ಅಕ್ರಮವಾಗಿ ಗಾಂಜಾ ಹಾಗೂ ಮದ್ಯ ಮಾರಾಟ ಮಾಡಲಾಗುತ್ತದೆ. ಈ ಕುರಿತು ಅಬಕಾರಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಪೊಲೀಸ್ ಇಲಾಖೆ ಈ ಕುರಿತು ಗಮನ ಹರಿಸುವಂತೆ, ನಂದಿ ಮಾರುಕಟ್ಟೆಯಲ್ಲಿ ಸಂಜೆ ಹೊತ್ತಲ್ಲಿ ಕೆಲ ಕಿಡಿಗೇಡಿಗಳು ಮದ್ಯಸೇವನೆ ಮಾಡಿ ಬಾಟಲಿಗಳನ್ನು ಒಡೆದು ಗಲಾಟೆ ಮಾಡುತ್ತಿದ್ದಾರೆ. ಪೊಲೀಸ್‌ ಅಧಿಕಾರಿಗಳು ಸಂಜೆ ಹೊತ್ತಲ್ಲಿ ಗಸ್ತು ತಿರುಗುವಂತೆ ಮನವಿ ಮಾಡಿದರು.

ನಂದಿ ತರಕಾರಿ ಮಾರುಕಟ್ಟೆಯಲ್ಲಿ ಸೋಮವಾರ ಮಾತ್ರ ಚಟುವಟಿಕೆ ನಡೆಯುತ್ತದೆ, ಉಳಿದಂತೆ ಯಾವುದೇ ಚಟುವಟಿಕೆ ನಡೆಯದ ಹಿನ್ನೆಲೆ ಕೆಲ ಕಿಡಿಗೇಡಿಗಳು ಗಲಾಟೆ ಮಾಡುತ್ತಿದ್ದಾರೆ. ನಂದಿ ತರಕಾರಿ ಮಾರುಕಟ್ಟೆಯಲ್ಲಿ ಸಿಸಿ ಕ್ಯಾಮರಾ ಅಳವಡಿಸುವಂತೆ ಪುರಸಭೆಗೆ ಮನವಿ ಮಾಡಿ. ನಂತರ ಯಾವುದೇ ಘಟನೆ ಸಂಭವಿಸಿದರೂ ಮುಲಾಜಿಲ್ಲದೆ ಅವರ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಡಿವೈಎಸ್‌ಪಿ ಚಂದ್ರಕಾಂತ ನಂದರಡ್ಠಿ ಭರವಸೆ ನೀಡಿದರು.

ಪಿಐ ಗುರುಶಾಂತ ದಾಶ್ಯಾಳ ಮಾತನಾಡಿ, ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಕುಂದುಕೊರತೆ ಸಭೆಯಲ್ಲಿ ನೂರಕ್ಕೂ ಅಧಿಕ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲಾಗಿದೆ ಎಂದರು.

ಗ್ರಾಮೀಣ ಭಾಗದಲ್ಲಿ ಹಾಲು ಸಿಗುವುದಿಲ್ಲ .ಆದರೆ ಮದ್ಯ ಯಥೇಚ್ಛವಾಗಿ ಸಿಗುತ್ತಿದೆ. ಈ ಕುರಿತು ಪೊಲೀಸ್‌ ಇಲಾಖೆ ಗಮನ ಹರಿಸಬೇಕು ಎಂದು ಮುಖಂಡ ಗುರುಗುಡಿಮನಿ ಸಭೆಯ ಗಮನಕ್ಕೆ ತಂದರು.

ಬಸವೇಶ್ವರ ವೃತ್ತ ಅಂಬೇಡ್ಕರ್‌ ವೃತ್ತದಲ್ಲಿ ಸಿಗ್ನಲ್ ಅಥವಾ ಒಬ್ಬ ಪೊಲೀಸ್ ಸಿಬ್ಬಂದಿ ನೇಮಿಸಬೇಕು. ಇದರಿಂದ ಟ್ರಾಫಿಕ್ ಸಮಸ್ಯೆ ತಡೆಯಬಹುದಾಗಿದೆ ಎಂದು ಮುಖಂಡ ಸಿದ್ರಾಮ ಪಾತರೊಟ್ಟಿ ಹೇಳಿದರು. ರಾತ್ರಿ ಹೊತ್ತಲ್ಲಿ ದಲಿತ ಕಾಲೋನಿಗಳಲ್ಲಿ ಪೊಲೀಸ್ ಗಸ್ತು ವ್ಯವಸ್ತೆ ಮಾಡುವಂತೆ ಮುಖಂಡ ಮಹಾಂತೇಶ ಸಾಸಾಬಾಳ ಒತ್ತಾಯಿಸಿದರು.

ಸಭೆಯಲ್ಲಿ ಮುಖಂಡರಾದ ಅಶೋಕ ಚಲವಾದಿ, ತಮ್ಮಣ್ಣ ಕಾನಾಗಡ್ಡಿ,, ಪರಶುರಾಮ ದಿಂಡವಾರ, ವೈ ಎಸ್ ಮ್ಯಾಗೇರಿ, ರವಿ ನಾಯ್ಕೋಡಿ, ಯಮನಪ್ಪ ಛಲವಾದಿ, ಭೀಮಾಶಂಕರ ಬಂಡಿವಡ್ಡರ, ಮಹಾಂತೇಶ ಚಲವಾದಿ, ಕಾಶಿನಾಥ ರಾಠೋಡ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಿತ್ತೂರು ಇತಿಹಾಸದ ಮೂಲ ಜಾನಪದ
ಮಕ್ಕಳು ಆಡುವ ಉದ್ಯಾನವನಗಳಲ್ಲಿ ಅದ್ವಾನ