ಬ್ರಹ್ಮಾವರ: ಇಲ್ಲಿನ ಬೈಕಾಡಿ ಗ್ರಾಮದ ಗಾಂಧಿನಗರದಲ್ಲಿ ಯುವಕನೊಬ್ಬ ತನ್ನ ಹೆತ್ತವರನ್ನೇ ಸುತ್ತಿಗೆ ಹೊಡೆದು ಬರ್ಭರವಾಗಿ ಕೊಲೆ ಮಾಡಿದ ಅಮಾನುಷ ಘಟನೆ ನಡೆದಿದೆ.ಕೊಲೆ ಆರೋಪಿ ಶಾಹಿದ್ ಅಲಿ (31), ಕೊಲೆಯಾದವರು ಈತನ ತಂದೆ ಮೆಹಬೂಬ್ ಅಲಿ (55) ಮತ್ತು ತಾಯಿ ಸಂಶದ್ ಬೇಗಂ (50) ವಿಚಿತ್ರ ಎಂದರೆ ಈತ ತನ್ನ ತಂದೆತಾಯಿಯನ್ನು ಮನೆಯಲ್ಲಿ ಭಾನುವಾರ ರಾತ್ರಿ 7 ಗಂಟೆಗೆ ಕೊಲೆ ಮಾಡಿದ್ದು, ಶವಗಳಿರುವ ಅದೇ ಮನೆಯಲ್ಲಿ ಮಲಗಿದ್ದು, ಸುಮಾರು 14 ಗಂಟೆಗಳ ನಂತರ. ಸೋಮವಾರ ಬೆಳಗ್ಗೆ 9 ಗಂಟೆಗೆ ಪೊಲೀಸರಿಗೆ 112ಕ್ಕೆ ಕರೆ ಮಾಡಿ ನಾನು ನಿನ್ನೆ ರಾತ್ರಿ ನನ್ನ ತಂದೆತಾಯಿಯನ್ನು ಕೊಲೆ ಮಾಡಿದ್ದೇನೆ ಎಂದು ಹೇಳಿದ್ದಾನೆ.ತಕ್ಷಣ ಸ್ಥಳಕ್ಕೆ ಧಾವಿಸಿದ ಬ್ರಹ್ಮಾವರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ವಿಚಾರಣೆಯ ಸಂದರ್ಭದಲ್ಲಿ, ನನ್ನ ತಂದೆತಾಯಿ ಪ್ರತಿನಿತ್ಯ ನನಗೆ ಮಾನಸಿಕ ಹಿಂಸೆ ನೀಡುತ್ತಿದ್ದರು, ಅಲ್ಲದೆ ಹೊಡೆಯುತ್ತಿದ್ದರು, ನಿನಗೆ 31 ವರ್ಷ ಆಗಿದೆ, ಕೆಲಸ ಮಾಡುವುದಿಲ್ಲ, ಮದುವೆಯೂ ಆಗಿಲ್ಲ, ನೀನು ನಿಷ್ಪ್ರಯೋಜಕ ಎಂದೆಲ್ಲಾ ನಿಂದಿಸುತ್ತಿದ್ದರು, ಅದಕ್ಕೆ ನಾನು ಅವರನ್ನು ಕೊಲೆ ಮಾಡಿದೆ ಎಂದು ಒಪ್ಪಿಕೊಂಡಿದ್ದಾನೆ.ಮೊದಲು ಮನೆಯ ಹಾಲ್ನಲ್ಲಿರುವ ಸೋಫಾಬೆಡ್ ನಲ್ಲಿ ಮಲಗಿದ್ದ ತಂದೆಯ ತಲೆಗೆ ಸುತ್ತಿಗೆಯಿಂದ ಬಲವಾಗಿ ಹೊಡೆದು ಕೊಲೆ ಮಾಡಿದ್ದಾನೆ, ನಂತರ ಬೆಡ್ರೂಮ್ನಲ್ಲಿ ಮಲಗಿದ್ದ ತಾಯಿಯನ್ನೂ ಅದೇ ರೀತಿ ಕೊಲೆ ಮಾಡಿದ್ದಾನೆ.