ನಾಲತವಾಡ : ಮಾಲೀಕನ ಪುತ್ರನೇ ಪೆಟ್ರೋಲ್ ಬಂಕ್ನ್ನು ಸಂಪೂರ್ಣ ನಾಶಗೊಳಿಸಿದ ಘಟನೆ ಮಂಗಳವಾರ ತಡ ರಾತ್ರಿ ನಡೆದಿದೆ. ಅತ್ತ ಘಟನೆ ಹಿನ್ನೆಲೆ ಸ್ಥಳೀಯ ವಾಹನ ಸವಾರರು ಪೆಟ್ರೋಲ್, ಡಿಸೇಲ್ಗೆ ಪರದಾಡುವಂತಾಗಿದೆ.
ಸಂಗಣ್ಣ ಸಂಗಮ ಅವರಿಗೆ ಸೇರಿದ ಪಟ್ಟಣದ ನಾರಾಯಣಪೂರ ರಸ್ತೆಯ ಪವಾಡ ಬಸವೇಶ್ವರ ಇಂಡಿಯಲ್ ಆಯಿಲ್ ಬಂಕ್ನಲ್ಲಿ ಪುತ್ರ ಮುತ್ತಣ್ಣ ಎಂಬುವನಿಂದಲೇ ಈ ಘಟನೆ ನಡೆದಿದೆ. ರಾತ್ರಿ ಏಕಾಏಕಿ ನುಗ್ಗಿ ತನ್ನ ಆವೇಶ ಪ್ರದರ್ಶಿಸಿದ ಬಂಕ್ನ ಪುತ್ರ, ತೈಲ ಸರಬರಾಜು ಮಾಡುವ ಪೆಟ್ರೋಲ್ ಇಂಜಿನ್, ಗನ್, ಕಚೇರಿಯ ದಾಖಲೆಗಳು, ಲ್ಯಾಪ್ಟ್ಯಾಪ್ ಹಾಗೂ ಸಿಸಿ ಕ್ಯಾಮರಾಗಳನ್ನು ಮನಬಂದಂತೆ ದ್ವಂಸಗೊಳಸಿದ್ದಲ್ಲದೇ ಅಲ್ಲಲ್ಲಿ ನಿಲ್ಲಿಸಲಾಗಿದ್ದ ಹಲವು ವಾಹನಗಳಿಗೂ ಹಾನಿ ಮಾಡಿದ್ದಾನೆ.
ಘಟನೆಗೆ ಸಂಬಂಧಿಸಿದಂತೆ ಮುದ್ದೇಬಿಹಾಳ ಸಿಪಿಐ ಮಹ್ಮದ ಫಶೀವುದ್ದಿನ್ ಹಾಗೂ ಪಿಎಸ್ಐ ಸಂಜಯ ತಿಪ್ಪಾರಡ್ಡಿ ಬಂಕ್ನ ಧ್ವಂಸ ಸ್ಥಳಕ್ಕೆ ಭೇಟಿ ನೀಡಿ ಸಿಬ್ಬಂದಿ ವಿವರ ಪಡೆದುಕೊಂಡಿದ್ದು, ಘಟನೆ ನಡೆಸಿದ ಮುತ್ತಣ್ಣ ಎಂಬುವರ ವಿರುದ್ಧ ಪ್ರಕರಣ ದಾಖಲಿಸಿ, ವಶಕ್ಕೆ ಪಡೆದುಕೊಂಡಿದ್ದಾರೆ.
ಪಟ್ಟಣದಲ್ಲಿ ಒಂದೇ ಬಂಕ್ ಇರುವ ಪರಿಣಾಮ ವಾಹನಗಳ ಮಾಲೀಕರು ದೂರದ ಹಿರೇಮುರಾಳ ಹಾಗೂ ನಾರಾಯಣಪೂರ ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಸಂಪೂರ್ಣ ಹಾನಿಯಾದ ಹಿನ್ನೆಲೆ ಶೀಘ್ರವೇ ದುರಸ್ತಿಗೊಳ್ಳುವ ಲಕ್ಷಣ ಕಾಣುತ್ತಿಲ್ಲ. ಸದ್ಯ ಸ್ಥಳೀಯರೂ ಸೇರಿದಂತೆ ಸುತ್ತಲಿನ ಗ್ರಾಮದ ರೈತರು ಟ್ರ್ಯಾಕ್ಟರ್, ಟಂಟಂ ಬೈಕ್ ಹಾಗೂ ಲಾರಿಗಳಿಗೆ ತೈಲ ಭರಿಸಲು ಪರದಾಡುವಂತಾಗಿದೆ.
ಘಟನೆ ಗಮನಿಸಿದ ಸ್ಥಳೀಯ ಹಲವು ವ್ಯಾಪಾರಿಗಳು ಬೇರೆ ಕಡೆಯಿಂದ ಪೆಟ್ರೋಲ್-ಡಿಸೇಲ್ ತಂದು ದುಬಾರಿ ದರಕ್ಕೆ ಮಾರಾಟ ಮಾಡುತ್ತಿದ್ದಾರೆ. ಬಂಕ್ನ ದರಕ್ಕಿಂತಲೂ ₹30ಗಳ ಹೆಚ್ಚಿಗೆ ಸುಲಿಗೆ ಮಾಡಿ ವಾಹನಗಳಿಗೆ ತೈಲ ಮಾರುತ್ತಿದ್ದು, ಈ ಮೊದಲೇ ಕಳೆದೆರಡು ದಿನಗಳಿಂದ ದುಬಾರಿಯಾಗಿದ್ದ ತೈಲ ದರ ಖಾಸಗಿ ಮಾರಾಟಗಾರರ ಹೆಚ್ಚಿನ ದರ ಬಿಗ್ ಶಾಕ್ ನೀಡಿದೆ.
ಒತ್ತಾಯ: ಸುಮಾರು ಜನಸಂಖ್ಯೆ ಹೊಂದಿರುವ ಪಟ್ಟಣ ಹಾಗೂ ಸುತ್ತಲಿನ ಗ್ರಾಮಗಳಿಗೆ ಪೆಟ್ರೋಲ್ ಡಿಜೈಲ್ ಅವಶ್ಯಕತೆ ಇದೆ, ರೈತರಿಗೂ ಸಹ ತಮ್ಮ ವಾಹನಗಳಿಗೆ ನಿತ್ಯ ತೈಲದ ಅವಶ್ಯವಿದೆ. ಈಗಾಗಲೇ ತೈಲ ಖರೀದಿಗೆ ದೂರದ ಬಂಕ್ಗಳಿಗೆ ಮುಖ ಮಾಡಿದ್ದು, ಈ ಸಂಕಷ್ಟ ತಪ್ಪಿಸಲು ಸಂಬಂಧಿಸಿದ ಮಾಲೀಕರು ಹಾಗೂ ತೈಲ ಕಂಪನಿಯವರು ಶೀಘ್ರವೇ ದುರಸ್ತಿಗೊಳಿಸಿ ವಾಹನ ಮಾಲೀಕರ ಪರದಾಟ ತಪ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.