ಬೀಮ್ಸ್‌ನಲ್ಲಿ ಶೀಘ್ರ ಮಿಲ್ಕ್ ಬ್ಯಾಂಕ್‌ ಆರಂಭ

KannadaprabhaNewsNetwork |  
Published : May 20, 2024, 01:42 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಬೆಳಗಾವಿ ನವಜಾತ ಶಿಶುಗಳು ಸದೃಢವಾಗಿ ಬೆಳವಣಿಯುವ ನಿಟ್ಟಿನಲ್ಲಿ ತಾಯಿ ಎದೆ ಹಾಲಿನ ಕೊರತೆ ಕಾಡದಂತೆ ಬೆಳಗಾವಿ ವೈದ್ಯಕೀಯ ಸಂಶೋಧನಾ ಸಂಸ್ಥೆ (ಬಿಮ್ಸ್‌) ಮಿಲ್ಕ್‌ ಬ್ಯಾಂಕ್‌ ಸ್ಥಾಪನೆಗೆ ಮುಂದಾಗಿದೆ. ಇತ್ತೀಚೆಗೆ ಬಾಣಂತಿಯರಲ್ಲಿ ಹಿಮೋಗ್ಲೊಬಿನ್‌ ಪ್ರಮಾಣ ಕಡಿಮೆಯಾಗುತ್ತಿದೆ. ಅಲ್ಲದೆ, ಹೆರಿಗೆ ನಂತರ ತಾಯಂದಿರಲ್ಲಿ ಎದೆಹಾಲು ಕೂಡ ಕಡಿಮೆಯಾಗುತ್ತಿರುವುದು ಕಂಡುಬಂದಿದೆ.

ಜಗದೀಶ ವಿರಕ್ತಮಠ

ಕನ್ನಡಪ್ರಭ ವಾರ್ತೆ ಬೆಳಗಾವಿ

ನವಜಾತ ಶಿಶುಗಳು ಸದೃಢವಾಗಿ ಬೆಳವಣಿಯುವ ನಿಟ್ಟಿನಲ್ಲಿ ತಾಯಿ ಎದೆ ಹಾಲಿನ ಕೊರತೆ ಕಾಡದಂತೆ ಬೆಳಗಾವಿ ವೈದ್ಯಕೀಯ ಸಂಶೋಧನಾ ಸಂಸ್ಥೆ (ಬಿಮ್ಸ್‌) ಮಿಲ್ಕ್‌ ಬ್ಯಾಂಕ್‌ ಸ್ಥಾಪನೆಗೆ ಮುಂದಾಗಿದೆ. ಇತ್ತೀಚೆಗೆ ಬಾಣಂತಿಯರಲ್ಲಿ ಹಿಮೋಗ್ಲೊಬಿನ್‌ ಪ್ರಮಾಣ ಕಡಿಮೆಯಾಗುತ್ತಿದೆ. ಅಲ್ಲದೆ, ಹೆರಿಗೆ ನಂತರ ತಾಯಂದಿರಲ್ಲಿ ಎದೆಹಾಲು ಕೂಡ ಕಡಿಮೆಯಾಗುತ್ತಿರುವುದು ಕಂಡುಬಂದಿದೆ. ಹೀಗಾಗಿ ಶಿಶುಗಳಿಗೆ ಸಮರ್ಪಕ ಎದೆಹಾಲು ಲಭ್ಯವಾಗದ ಹಿನ್ನೆಲೆಯಲ್ಲಿ ಅವು ಆರೋಗ್ಯ ಸಮಸ್ಯೆ ಎದುರಿಸುತ್ತಿವೆ. ಈ ಹಿನ್ನೆಲೆಯಲ್ಲಿ ಬಿಮ್ಸ್‌ ಮಿಲ್ಕ್‌ ಬ್ಯಾಂಕ್‌ ಆರಂಭಿಸಲು ಕ್ರಮಕೈಗೊಂಡಿದೆ. ಈಗಾಗಲೇ ಅದಕ್ಕೆ ಪೂರಕವಾದ ಅಗತ್ಯ ಕಾರ್ಯ ಮುಕ್ತಾಯವಾಗಿದ್ದು, ಕೇವಲ ಬಾಟಲಿ ಪ್ಯಾಕಿಂಗ್‌ ಮಷಿನ್‌ ಕಾರ್ಯಾರಂಭ ಮಾಡುವುದಷ್ಟೆ ಬಾಕಿ ಇದೆ. ಇನ್ನೇನು ಶೀಘ್ರವೇ ಇದರ ಕಾರ್ಯಾಚರಣೆ ನಡೆಯುವ ಸಾಧ್ಯತೆ ಇದೆ. ತಾಯಿಯ ಎದೆಹಾಲು ಮಗುವಿಗೆ ಅಮೃತ. ನವಜಾತ ಶಿಶುವಿನ ಎಲ್ಲ ಅಗತ್ಯ ಪೋಷಕಾಂಶ ಮತ್ತು ರಕ್ಷಣಾತ್ಮಕ ಸೋಂಕುನಿವಾರಕವಾಗಿ ಶಿಶುಗಳಿಗೆ ಕಾರ್ಯನಿರ್ವಹಿಸುತ್ತದೆ.

ಯಾರಿಗೆ ಹಾಲು ಕೊಡಲಾಗುತ್ತದೆ?:

ಕೆಲವು ಅನಿವಾರ್ಯ ಸಂದರ್ಭಗಳಿಂದಾಗಿ, ಆಸ್ಪತ್ರೆಗಳಲ್ಲಿ ದಾಖಲಾಗುವ ಅವಧಿಪೂರ್ವ, ಕಡಿಮೆ ತೂಕದ ಮತ್ತು ಅನಾರೋಗ್ಯದ ಶಿಶುಗಳು ತಾಯಿಯ ಎದೆಹಾಲು ಪಡೆಯಲು ಸಾಧ್ಯವಾಗುವುದಿಲ್ಲ. ಇಂತಹ ಸಂದರ್ಭದಲ್ಲಿ ಪೌಡರ್‌ (ನಾನಾ ಕಂಪನಿಗಳು) ಹಾಲನ್ನೇ ಬಿಸಿನೀರಿನಲ್ಲಿ ಮಿಶ್ರಣ ಮಾಡಿ ನವಜಾತ ಶಿಶುಗಳಿಗೆ ನೀಡಲಾಗುತ್ತದೆ. ಆದರೆ, ಈ ಮಿಲ್ಕ್‌ ಬ್ಯಾಂಕ್‌ ಆರಂಭವಾದರೆ, ತಾಯಂದಿರರಿಂದ ನೈಸರ್ಗಿಕ ಹಾಲು ಪಡೆದು ಇಂತಹ ನವಜಾತ ಶಿಶುಗಳಿಗೆ ಹಾಲುಣಿಸಲು ಸಾಧ್ಯವಾಗುತ್ತದೆ. ಎಲ್ಲಾ ಶಿಶುಗಳಿಗೆ ಉಚಿತ, ಪಾಸ್ಟರೈಸ್ ಮಾಡಿದ ಎದೆಹಾಲನ್ನೇ ಒದಗಿಸುವ ಉದ್ದೇಶ ಬಿಮ್ಸ್‌ನದ್ದಾಗಿದೆ.

ಮಗುವಿಗೆ ಪೌಷ್ಟಿಕಾಂಶ ಮತ್ತು ಸರಿಯಾದ ಪೋಷಕಾಂಶ ದೊರೆಯಬೇಕಾದರೆ ತಾಯಿ ಎದೆಹಾಲು ಸೂಕ್ತ. ಆದರೆ, ಅಷ್ಟೊಂದು ಹೇರಳವಾದ ಪೌಷ್ಟಿಕಾಂಶ, ಪೋಷಕಾಂಶ ಹೊರಗಿನಿಂದ ಕೊಡುವ ಔಷಧದಲ್ಲಿ ಇರುವುದಿಲ್ಲ. ಹೀಗಾಗಿ ತಾಯಿ ಎದೆಹಾಲು ವಂಚಿತವಾಗಿರುವ ಶಿಶುಗಳಿಗೆ ಈ ಮಿಲ್ಕ್‌ ಬ್ಯಾಂಕ್‌ ಸಂಜೀವಿನಿ ಎಂಬುವುದರಲ್ಲಿ ಎರಡು ಮಾತಿಲ್ಲ.

ಲ್ಯಾಕ್ಟೇರಿಯಮ್ ಎಂದೂ ಕರೆಯಲ್ಪಡುವ ಮಾನವ ಹಾಲಿನ ಬ್ಯಾಂಕ್ ಒಂದು ವಿಶೇಷ ಘಟಕವಾಗಿದೆ. ಈ ಘಟಕದಿಂದ ತಾಯಿ ಎದೆಹಾಲನ್ನು ಸಂಸ್ಕರಿಸಿ, ಸಂಗ್ರಹಿಸಿ ಇಡಲಾಗುತ್ತದೆ. ನಂತರ ಅಗತ್ಯವಿರುವ ಶಿಶುಗಳಿಗೆ ಒದಗಿಸಲಾಗುತ್ತದೆ. ಒಂದು ವೇಳೆ ಹೆಚ್ಚು ಹಾಲು ಸಂಗ್ರಹವಾಗಿದ್ದರೆ, ಹೊರಗಿನ ಶಿಶುಗಳಿಗೆ ಕೊಡಲು ಅವಕಾಶ ಕಲ್ಪಿಸಲಾಗಿದೆ.

ಹೀಗಾಗಿ ನಿರಂತರ ಪೂರೈಕೆ ಮಾಡಲಾಗುತ್ತದೆ. ಸಂಪೂರ್ಣ ಮೌಲ್ಯಮಾಪನದ ನಂತರ ಆರೋಗ್ಯವಂತ ದಾನಿಗಳಿಂದ ಹಾಲನ್ನು ಸಂಗ್ರಹಿಸಲಾಗುತ್ತದೆ ಮತ್ತು ನಾವು ಅದನ್ನು ನಿಮ್ಮ ಚಿಕ್ಕ ಮಕ್ಕಳಿಗೆ ಕೊಡುವ ಮೊದಲು ಸಂಸ್ಕರಿಸಿ ಶೇಖರಣೆ ಮಾಡಲಾಗುತ್ತದೆ.

ಅಲ್ಲದೇ, ಬಿಮ್ಸ್‌ ಆಸ್ಪತ್ರೆಯಲ್ಲಿ ದಾಖಲಾಗಿರುವ ಬಾಣಂತಿಯರು ಅಷ್ಟೇ ತಮ್ಮ ಎದೆ ಹಾಲು ಕೊಡುವುದಾಗಲಿ ಅಥವಾ ತೆಗೆದುಕೊಳ್ಳುವುದಾಗಲಿ ಎಂದೆನಿಲ್ಲ. ಹೊರಗಿನವರು ಹೆಚ್ಚಿನ ಹಾಲು ಕೊಡಬಹುದು, ಕಡಿಮೆ ಹಾಲು ಹೊಂದಿರುವವರು ಬಿಮ್ಸ್‌ನಿಂದ ಹಾಲು ತಗೆದುಕೊಂಡು ಹೋಗಬಹುದಾಗಿದೆ. ಎದೆಹಾಲು ಕೊಡುವುದಾಗಲಿ ಅಥವಾ ತಗೆದುಕೊಳ್ಳುವುದಾಗಿಲಿ ಉಚಿತವಾಗಿರಲಿದೆ.ಬಿಮ್ಸ್‌ನಲ್ಲಿ ಬಿಸಿನೀರು ಲಭ್ಯ

ಬಿಮ್ಸ್‌ನಲ್ಲಿ ಬಾಣಂತಿಯರು ಸ್ನಾನಕ್ಕೆ ತಣ್ಣಿರನ್ನೇ ಬಳಕೆ ಮಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಬಾಣಂತಿಯರು ಮತ್ತು ಅವರ ಕುಟುಂಬಸ್ಥರು ಬಿಮ್ಸ್‌ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದರು. ಇದೀಗ ಬಿಮ್ಸ್‌ನಲ್ಲಿ ಬಾಣಂತಿಯರಿಗೆ ಬಿಸಿ ನೀರು ಪೂರೈಕೆ ಮಾಡಲು ಕ್ರಮಕೈಗೊಂಡಿದೆ.----------------------

ಬಾಕ್ಸ್‌

ಉಚಿತವಾಗಿ ವಿತರಣೆಬೀಮ್ಸ್‌ ಆಸ್ಪತ್ರೆಯಲ್ಲಿ ಪ್ರತಿದಿನ 40 ರಿಂದ 60 ಹೆರಿಗೆ ಆಗುತ್ತಿವೆ. ಈ ಪೈಕಿ ಕೆಲವು ಜನರು ಅವಧಿ ಪೂರ್ಣ ಹೆರಿಗೆಯಿಂದ, ಹಿಮೋಗ್ಲೋಬಿನ್‌ ಪ್ರಮಾಣ ಕಡಿಮೆ ಇರುವುದರಿಂದ, ಹೆರಿಗೆ ಆದ ತಕ್ಷಣ ಬಾಣಂತಿಯರಲ್ಲಿ ಎದೆ ಹಾಲು ಪ್ರಮಾಣ ಕಡಿಮೆ ಇರುವುದರಿಂದ ಶಿಶುಗಳು ಆಹಾರದ ಕೊರತೆ ಅನುಭವಿಸುತ್ತಿವೆ. ಇನ್ನೂ ಕೆಲವು ಬಾಣಂತಿಯರಲ್ಲಿ ಹೆಚ್ಚಿನ ಪ್ರಮಾಣದಲ್ಲು ಎದೆ ಹಾಲು ಉತ್ಪತ್ತಿ ಆಗುತ್ತಿದ್ದು, ಮಗು ಸೇವಿಸಿದ ಬಳಿಕ ಎದೆಯಲ್ಲಿ ಹಾಲು ಉಳಿದುಕೊಳ್ಳುತ್ತಿದೆ. ಇದರಿಂದ ಬಾಣಂತಿಯರಲ್ಲಿ ಸ್ತನದಲ್ಲಿ ಗಂಟು ಬೆಳೆಯುತ್ತದೆ. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಬೀಮ್ಸ್‌ ಆಡಳಿತ ಮಂಡಳಿ ಮಿಲ್ಕ್‌ ಬ್ಯಾಂಕ್‌ ಸ್ಥಾಪನೆಗೆ ಮುಂದಾಗಿದೆ.

----------

ಕೋಟ್‌

ಕಡಿಮೆ ಎದೆಹಾಲು ಹೊಂದಿರುವ ಬಾಣಂತಿಯರ ಮಕ್ಕಳಲ್ಲಿ ಪೋಷಕಾಂಶದ ಕೊರತೆ ಕಾಣದಿರಲಿ ಎಂಬ ಉದ್ದೇಶದಿಂದ ಹೆಚ್ಚು ಹಾಲು ಹೊಂದಿರುವವರು ಕೊಡುವ ಹಾಲನ್ನು ಶೇಖರಿಸಿ ಉಚಿತವಾಗಿ ಕೊಡಲಾಗುವುದು. ಬಿಮ್ಸ್‌ ಆಸ್ಪತ್ರೆಯಲ್ಲಿನ ಬಾಣಂತಿಯರು ಅಷ್ಟೇ ಅಲ್ಲದೇ, ಹೊರಗಿನವರು ಹಾಲು ಕೊಡಬಹುದು ಅಥವಾ ತೆಗೆದುಕೊಂಡು ಹೋಗಬಹುದು.

- ಡಾ. ಅಶೋಕಕುಮಾರ ಶೆಟ್ಟಿ, ನಿರ್ದೇಶಕರು, ಬೀಮ್ಸ್‌ ಬೆಳಗಾವಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ