-ಕನ್ನಡಪ್ರಭ ವಾರ್ತೆ ಮೈಸೂರು
ವಿಧಾನಪರಿಷತ್ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿಯಲ್ಲಿ ಗೊಂದಲ ಸೃಷ್ಟಿಸಿದ್ದ ಮೈತ್ರಿ ಅಭ್ಯರ್ಥಿಯ ಕಗ್ಗಂಟು ಇತ್ಯರ್ಥವಾಗಿದ್ದು, ಬಿಜೆಪಿ ಘೋಷಿತ ಡಾ.ಈ.ಸಿ. ನಿಂಗರಾಜಗೌಡ ಅವರು ಕಣದಿಂದ ಹಿಂದೆ ಸರಿದಿದ್ದಾರೆ. ಅಲ್ಲದೆ,ಎನ್ಡಿಎ ಮೈತ್ರಿಕೂಟದ ಅಭ್ಯರ್ಥಿಯಾಗಿರುವ ಜೆಡಿಎಸ್ನ ಕೆ. ವಿವೇಕಾನಂದ ಅವರಿಗೆ ಬೆಂಬಲ ಘೋಷಿಸಿದ್ದಾರೆ.ಮೈಸೂರಿನ ಬಿಜೆಪಿ ಕಚೇರಿಯಲ್ಲಿ ಜೆಡಿಎಸ್ ರಾಜ್ಯ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ. ದೇವೇಗೌಡ, ಬಿಜೆಪಿ ನಗರಾಧ್ಯಕ್ಷ ಎಲ್. ನಾಗೇಂದ್ರ, ಜಿಲ್ಲಾಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ, ರಾಜ್ಯ ಕಾರ್ಯದರ್ಶಿ ತಮ್ಮೇಶ್ ಗೌಡ ಸಮ್ಮುಖದಲ್ಲಿ ಶುಕ್ರವಾರ ಸಂಜೆ ನಡೆದ ಸುದ್ದಿಗೋಷ್ಠಿಯಲ್ಲಿ ಕಣದಿಂದ ಹಿಂದೆ ಸರಿಯುವ ನಿರ್ಧಾರವನ್ನು ಡಾ.ಈ.ಸಿ. ನಿಂಗರಾಜಗೌಡ ಪ್ರಕಟಿಸಿದರು.
ಅಲ್ಲದೆ, ವ್ಯಕ್ತಿಗಿಂತ ಪಕ್ಷ ಮುಖ್ಯ, ಪಕ್ಷಕ್ಕಿಂತ ರಾಷ್ಟ್ರ ಮುಖ್ಯ ಎಂಬುದನ್ನು ಸಂಘ ಪರಿವಾರ ಮತ್ತು ಬಿಜೆಪಿ ನನಗೆ ಕಲಿಸಿದೆ. ಹೀಗಾಗಿ ಮೈತ್ರಿ ಧರ್ಮ ಪಾಲನೆಯ ದೃಷ್ಟಿಯಿಂದ ಯಾವುದೇ ಷರತ್ತಿಲ್ಲದೇ ನಾಮಪತ್ರ ವಾಪಸ್ ಪಡೆದು ಮೈತ್ರಿ ಅಭ್ಯರ್ಥಿ ಕೆ. ವಿವೇಕಾನಂದ ಅವರಿಗೆ ಬೆಂಬಲ ನೀಡುವುದಾಗಿ ಅವರು ತಿಳಿಸಿದರು.2018 ರಲ್ಲಿ ವರ್ಷದ ಹಿಂದೆ ಶಿಕ್ಷಕರ ಕ್ಷೇತ್ರದಿಂದ ಟಿಕೆಟ್ ಕೇಳಿದ್ದೆ. ಆದರೆ, ನಿರಂಜನಮೂರ್ತಿ ಅವರಿಗೆ ಟಿಕೆಟ್ ನೀಡಲಾಗಿತ್ತು. ಬಳಿಕ ಪದವೀಧರರ ಕ್ಷೇತ್ರದಿಂದ ಅವಕಾಶವಾಗಲಿಲ್ಲ. ಆ ಸಂದರ್ಭದಲ್ಲಿ ಶಿಕ್ಷಕರ ಕ್ಷೇತ್ರದಲ್ಲಿ ಸಕ್ರಿಯವಾಗಿ ಕೆಲಸ ಮಾಡುವಂತೆ ಸೂಚನೆ ನೀಡಿತು. ಅದರಂತೆ ಪಕ್ಷ ನನಗೆ ಟಿಕೆಟ್ ನೀಡಿತ್ತು. ಆದರೆ, ರಾಜ್ಯಾಧ್ಯಕ್ಷರು ಕರೆ ಮಾಡಿ ದೇಶದ ಹಿತಕ್ಕಾಗಿ ಅನಿರೀಕ್ಷಿತವಾಗಿ ಜೆಡಿಎಸ್ ಹೊಂದಾಣಿಕೆ ಮಾಡಿಕೊಳ್ಳಲಾಗಿದ್ದು, ಮೈತ್ರಿ ಧರ್ಮ ಪಾಲಿಸೋಣ ಎಂದು ಮನವಿ ಮಾಡಿದರು. ಹೀಗಾಗಿ, ನಾನು ಏನನ್ನೂ ಮಾತನಾಡದೆ ಪಕ್ಷದ ನಿರ್ಧಾರಕ್ಕೆ ಗೌರವ ಕೊಟ್ಟು, ಬಿ.ವೈ. ವಿಜಯೆಂದ್ರ ಅವರ ಕೈ ಬಲಪಡಿಸುವ ಉದ್ದೇಶದಿಂದ ಮೈತ್ರಿ ಅಭ್ಯರ್ಥಿಗೆ ಬೆಂಬಲ ಘೋಷಿಸಿದ್ದೇನೆ. ಮೇ 18 ರಂದು ಚುನಾವಣೆಯಿಂದ ನಾಮಪತ್ರ ವಾಪಸ್ ಪಡೆಯುವುದಾಗಿ ಅವರು ಹೇಳಿದರು.
ಟಿಕೆಟ್ ಘೋಷಣೆಯಾದ ಸಂದರ್ಭದಲ್ಲಿ ನನಗೆ ಬೆಂಬಲ ನೀಡಿದ ಜೆಡಿಎಸ್, ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರು, ಶಿಕ್ಷಕರು ಎಲ್ಲರಿಗೂ ನಾನು ಚಿರ ಋಣಿ ಎಂದರು.ಮೈತ್ರಿ ಅಭ್ಯರ್ಥಿಯ ಪರವಾಗಿ ಕೆಲಸ
ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ. ದೇವೇಗೌಡ ಮಾತನಾಡಿ, ಕಾಂಗ್ರೆಸ್ ಪಕ್ಷ ದಿನ ನಿತ್ಯ ಮೈತ್ರಿ ಮುರಿಯುವ ಹೇಳಿಕೆ ನೀಡುತ್ತಿದ್ದು, ಮೈತ್ರಿ ಬಾಂಧವ್ಯ ಗಟ್ಟಿಯಾಗಿದೆ ಎಂಬುದನ್ನು ಈ ಸಭೆ ಉತ್ತರ ನೀಡಿದೆ. ಟಿಕೆಟ್ ವಂಚಿತ ನಿಂಗರಾಜ್ ಗೌಡ, ಕೆ.ಟಿ. ಶ್ರೀಕಂಠೇಗೌಡ ಹಾಗೂ ಬಿ. ನಿರಂಜನಮೂರ್ತಿ ಅವರು ಮೈತ್ರಿ ಅಭ್ಯರ್ಥಿಯ ಪರವಾಗಿ ಕೆಲಸ ಮಾಡಲಿದ್ದು, ಅವರ ಮುಂದಾಳತ್ವದಲ್ಲೇ ಚುನಾವಣೆ ನಡೆಯಲಿದೆ ಎಂದು ತಿಳಿಸಿದರು.ಶ್ರೀಕಂಠೇಗೌಡ ಅವರು ಎರಡು ಬಾರಿ ಎಂಎಲ್ಸಿ ಆಗಿದ್ದಾರೆ. ಜತೆಗೆ ಎರಡು ಬಾರಿ ಸೋತಿದ್ದಾರೆ. ಈಗ ಅವರಿಗೆ ರಾಜ್ಯ ಮಟ್ಟದಲ್ಲಿ ಪ್ರಮುಖ ಸ್ಥಾನ ನೀಡಲಾಗಿದೆ. ಸಾಮಾನ್ಯರಿಗೂ ಅವಕಾಶ ನೀಡುವುದಕ್ಕಾಗಿ ಪಕ್ಷ ವಿವೇಕಾನಂದ ಅವರಿಗೆ ಮಣೆ ಹಾಕಿದೆ. ಅತ್ಯಂತ ಹೆಚ್ಚಿನ ಮತಗಳಿಂದ ಅವರನ್ನು ಗೆಲ್ಲಿಸಬೇಕು ಎಂದು ಅವರು ಮನವಿ ಮಾಡಿದರು.
ಬಿಜೆಪಿ ರಾಜ್ಯ ಕಾರ್ಯದರ್ಶಿ ತಮ್ಮೇಶ್ ಗೌಡ ಮಾತನಾಡಿ, ಬಿಜೆಪಿ ಅಭ್ಯರ್ಥಿ ಆಯ್ಕೆ ಏಕಪಕ್ಷೀಯವಾಗಿ ನಡೆಯುವುದಿಲ್ಲ. ಡಾ.ಈ.ಸಿ. ನಿಂಗರಾಜ್ ಗೌಡ ಅವರಿಗೆ ಮುಂದಿನ ದಿನಗಳಲ್ಲಿ ಸೂಕ್ತ ಅವಕಾಶ ಸಿಗಲಿದೆ. ಕಾಂಗ್ರೆಸ್ ದುರಾಡಳಿತ, ಶಿಕ್ಷಕರ ಪರವಾಗಿ ಏನೂ ಕೆಲಸ ಮಾಡದ ಮರಿತಿಬ್ಬೇಗೌಡ ಅವರಿಗೆ ಪ್ರಬುದ್ಧ ಮತದಾರರು ಈ ಚುನಾವಣೆಯಲ್ಲಿ ಪಾಠ ಕಲಿಸುತ್ತಾರೆ. ಕಾಂಗ್ರೆಸ್ ಸೋಲಿಸುವುದು ಮೈತ್ರಿಯ ಉದ್ದೇಶವಾಗಿದ್ದು, ವಿಧಾನಪರಿಷತ್ ಚುನಾವಣೆಯಲ್ಲೂ ನಮ್ಮ ಮೈತ್ರಿ ಮುಂದುವರೆಯಲಿದೆ ಎಂದು ತಿಳಿಸಿದರು.ಶಾಸಕ ಟಿ.ಎಸ್. ಶ್ರೀವತ್ಸ, ಬಿಜೆಪಿ ನಗರಾಧ್ಯಕ್ಷ ಎಲ್. ನಾಗೇಂದ್ರ, ಜಿಲ್ಲಾಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ, ಮುಖಂಡರಾದ ನಿರಂಜನಮೂರ್ತಿ, ಮೈತ್ರಿ ಅಭ್ಯರ್ಥಿ ಕೆ. ವಿವೇಕಾನಂದ, ಮೋಹನ್ ಮೊದಲಾದವರು ಇದ್ದರು.
----ಕೋಟ್...
ನನ್ನ ಮತ್ತು ನಿಂಗರಾಜ್ ಗೌಡ ಅವರ ಒಡನಾಟ 20 ವರ್ಷದ್ದು, ಚುನಾವಣೆಗೆ ಅವರ ಬೆಂಬಲ ಕೋರಿದ್ದು, ಅವರು ಒಪ್ಪಿಕೊಂಡಿದ್ದಾರೆ. ಶಿಕ್ಷಕರ ಕ್ಷೇತ್ರ ಚುನಾವಣೆ ಸಂಬಂಧ ಕಳೆದ ಎರಡು ವರ್ಷಗಳಿಂದ ನಾಲ್ಕು ಜಿಲ್ಲೆಯ ಶಿಕ್ಷಕರೊಂದಿಗೆ ಸಂಪರ್ಕ ಇರಿಸಿಕೊಂಡಿದ್ದು, ಸುಮಾರು 18 ಸಾವಿರ ಶಿಕ್ಷಕರನ್ನು ಭೇಟಿ ಮಾಡಿದ್ದೇನೆ.- ಕೆ. ವಿವೇಕಾನಂದ, ಮೈತ್ರಿ ಅಭ್ಯರ್ಥಿ, ದಕ್ಷಿಣ ಶಿಕ್ಷಕರ ಕ್ಷೇತ್ರ