ಮಂಗಳೂರು: ಪಕ್ಷಾಂತರ ನಿಷೇಧ ಕಾನೂನು ಪರಿಶೀಲನೆಗೆ ಲೋಕಸಭೆಯ ಸ್ಪೀಕರ್ ಅವರಿಂದ ರಚಿಸಲ್ಪಟ್ಟ ನಾಲ್ಕು ರಾಜ್ಯಗಳ ಸ್ಪೀಕರ್ಗಳ ಉನ್ನತ ಮಟ್ಟದ ಸಮಿತಿಯ ಎರಡು ಸಭೆಗಳು ಈಗಾಗಲೇ ನಡೆದು, ವಿವಿಧ ವಿಚಾರಗಳನ್ನು ಚರ್ಚಿಸಲಾಗಿದ್ದು, ಸಮಿತಿಯ ಅಂತಿಮ ಹಂತದ ಸಭೆ ಕರ್ನಾಟಕದಲ್ಲಿ ಜೂನ್ ಕೊನೆಯಲ್ಲಿ ನಡೆಯಲಿದೆ ಎಂದು ಸಮಿತಿಯ ಸದಸ್ಯರಾಗಿರುವ, ಕರ್ನಾಟಕ ವಿಧಾನ ಸಭೆಯ ಸ್ಪೀಕರ್ ಯು.ಟಿ.ಖಾದರ್ ಹೇಳಿದರು.ಅವರು ಬುಧವಾರ ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಹಾರಾಷ್ಟ್ರ ವಿಧಾನ ಸಭೆಯ ಸ್ಪೀಕರ್ ಅಧ್ಯಕ್ಷತೆಯಲ್ಲಿ ಕರ್ನಾಟಕ, ಒರಿಸ್ಸಾ, ನಾಗಲ್ಯಾಂಡ್ ರಾಜ್ಯಗಳ ಸ್ಪೀಕರ್ಗಳ ಸಮಿತಿ ಇದಾಗಿದ್ದು, ಈ ಸಮಿತಿಯ ಒಂದು ಸಭೆ ಮಹಾರಾಷ್ಟ್ರದಲ್ಲಿ ಹಾಗೂ ಎರಡನೇ ಸಭೆ ಒಡಿಸ್ಸಾದಲ್ಲಿ ನಡೆದಿದೆ. ಚುನಾಯಿತ ಪ್ರತಿನಿಧಿಗಳು ಪದೇ ಪದೇ ಪಕ್ಷಾಂತರ ಮಾಡುವುದನ್ನು ತಡೆಯಲು ಭಾರತದ ಸಂವಿಧಾನದ 10ನೇ ವಿಧಿಯನ್ನು ಬಲಿಷ್ಠಗೊಳಿಸುವ ನಿಟ್ಟಿಯಲ್ಲಿ ಈ ಸಮಿತಿ ರಚಿಸಲಾಗಿದೆ ಎಂದರು. ಚುನಾಯಿತ ಜನಪ್ರತಿನಿಧಿ ಪಕ್ಷಾಂತರಗೊಂಡ ವೇಳೆ ಅವರ ಅರ್ಹತೆಯನ್ನು ಖಾತ್ರಿ ಮಾಡುವುದು, ಪಕ್ಷದ ಜೊತೆಯಲ್ಲಿ ಇಲ್ಲದ ಸಂದರ್ಭದಲ್ಲಿ ವಿಶ್ವಾಸ ಮತದಲ್ಲಿ ಭಾಗವಹಿಸುವ ಅವಕಾಶವನ್ನು ನಿರಾಕರಿಸುವುದು, ಪಕ್ಷಾಂರಗೊಂಡ ಶಾಸಕರಿಗೆ ಸಚಿವ ಸ್ಥಾನ ಅಥವಾ ನಿಗಮ, ಮಂಡಳಿ ಸ್ಥಾನ-ಮಾನ ನೀಡದಂತೆ ಮುಂತಾದ ವಿಚಾರಗಳ ಬಗ್ಗೆ ಚರ್ಚಿಸಲಾಗಿದೆ. ಜೂನ್ ಅಂತ್ಯಕ್ಕೆ ಸಮಿತಿ ಕರ್ನಾಟಕದಲ್ಲಿ ಅಂತಿಮ ಸಭೆ ನಡೆಸಿ, ಬಳಿಕ ಸಮಿತಿ ತನ್ನ ವರದಿ ಲೋಕಸಭೆಗೆ ಮಂಡಿಸಲಿದೆ ಎಂದರು.