ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ಪರಿಸರದ ಅಭಿವೃದ್ಧಿ ಕುರಿತು ವಿಶೇಷ ಕಾಳಜಿ ಅಗತ್ಯ: ಅಮೋಲ ಹಿರೇಕುಡಿ

KannadaprabhaNewsNetwork | Published : Jun 8, 2025 2:12 AM

ಬ್ಯಾಡಗಿ ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ನ್ಯಾಯಾಧೀಶರು, ವಕೀಲರು ಉಪಸ್ಥಿತರಿದ್ದರು.

ಬ್ಯಾಡಗಿ: ಪರಿಸರದ ಅಭಿವೃದ್ಧಿಯ ಕುರಿತು ವಿಶೇಷ ಕಾಳಜಿ ಹಾಗೂ ರಕ್ಷಿತ ಅರಣ್ಯ ಪ್ರದೇಶಗಳ ಅಭಿವೃದ್ಧಿ ವಿಷಯದಲ್ಲಿ ಸಾಮೂಹಿಕ ಹೊಣೆಗಾರಿಕೆ ಹಾಗೂ ಪಾರದರ್ಶಕ ಚಿಂತನೆಗಳು ನಡೆಯದಿದ್ದರೆ ಮನುಷ್ಯ ಸೇರಿದಂತೆ ಜೀವ ಸಂಕುಲಗಳ ಅವನತಿಗೆ ನಾವೇ ಹೊಣೆಗಾರರಾಗಲಿದ್ದೇವೆ ಎಂದು ಹಿರಿಯ ಶ್ರೇಣಿ ದಿವಾಣಿ ನ್ಯಾಯಾಧೀಶ ಅಮೋಲ ಹಿರೇಕುಡಿ ಕಳವಳ ವ್ಯಕ್ತಪಡಿಸಿದರು.

ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ನ್ಯಾಯವಾದಿಗಳ ಸಂಘ, ಅರಣ್ಯ ಇಲಾಖೆ ಸಂಯುಕ್ತಾಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪರಿಸರದ ಮೇಲೆ ಜಾಗತಿಕ ಮಟ್ಟದಲ್ಲಿ ಗಮನಾರ್ಹವಾದ ದುಷ್ಪರಿಣಾಮ ಬೀರುತ್ತದೆ. ಪರಿಸರದಲ್ಲಿನ ವ್ಯವಸ್ಥೆ ಬಿಟ್ಟು ಯಾವುದೇ ಜೀವ ಸಂಕುಲ ಬದುಕಲು ಸಾಧ್ಯವಿಲ್ಲ. ಅತಿಯಾದ ಕೈಗಾರಿಕೀಕರಣ, ಅರಣ್ಯನಾಶ, ಮಾಲಿನ್ಯ ಅದರಲ್ಲಿನ ಸಂಪನ್ಮೂಲಗಳ ಅತಿಯಾದ ಶೋಷಣೆ ಮಾನವ ಆರೋಗ್ಯ ಮತ್ತು ಆರ್ಥಿಕ ಸ್ಥಿರತೆ ಮೇಲೆ ಬಹಳಷ್ಟು ಪರಿಣಾಮ ಬೀರಲಿದೆ ಎಂದರು.

ಸಿವಿಲ್ ನ್ಯಾಯಾಧೀಶ ಸುರೇಶ ವಗ್ಗನವರ ಮಾತನಾಡಿ, ನೀರು, ಇಂಧನ, ಮರಳು, ಅರಣ್ಯ ಪ್ರದೇಶದಲ್ಲಿರುವ ಗಿಡ ಮರಗಳು ಸೇರಿದಂತೆ ಖನಿಜಗಳು ನಮ್ಮೆಲ್ಲರ ಪ್ರಾಕೃತಿಕ ಸಂಪತ್ತು. ಆದರೆ ತಿಳಿದೋ ತಿಳಿಯದೆಯೋ ಸಂಪನ್ಮೂಲಗಳ ಅತಿಯಾದ ಬಳಕೆಯಿಂದಾಗಿ ಕೊರತೆಯಾಗುತ್ತಿದೆಯಲ್ಲದೇ ಸದ್ದಿಲ್ಲದೇ ನಮ್ಮ ಅರಿವಿಗೆ ಬಾರದಂತೆ ಖಾಲಿಯಾಗುತ್ತಿದೆ. ಇದರಿಂದಾಗುವ ದುಷ್ಪರಿಣಾಮಗಳನ್ನು ನಾವೆಲ್ಲರೂ ಎದುರಿಸಬೇಕಾಗುತ್ತದೆ ಎಂದರು.

ಆರೋಗ್ಯದ ಮೇಲೆ ದುಷ್ಪರಿಣಾಮ: ಅಧ್ಯಕ್ಷತೆ ವಹಿಸಿದ್ದ ನ್ಯಾಯವಾದಿಗಳ ಸಂಘದ ಅಧ್ಯಕ್ಷ ರಾಜು ಶಿಡೇನೂರ ಮಾತನಾಡಿ, ಕೈಗಾರಿಕಾ ತ್ಯಾಜ್ಯದಿಂದ ಪರಿಸರ ಮಾಲಿನ್ಯ ಹಾಗೂ ಅರಣ್ಯ ನಾಶದಿಂದ ಆರೋಗ್ಯದಂತಹ ಸಮಸ್ಯೆಗಳು ಸಹಜವಾಗಿ ಉಲ್ಬಣಗೊಳ್ಳಲಿವೆ. ಹವಾಮಾನ ಬದಲಾವಣೆಯಿಂದ ಉಸಿರಾಟ ಮತ್ತು ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಕಲುಷಿತ ನೀರಿನಿಂದ ಮಾರಕವಾದ ಕಾಯಿಲೆಗಳಿಗೆ ಮನುಷ್ಯ ತುತ್ತಾಗಬಹುದು. ಅಷ್ಟೇ ಏಕೆ, ಪರಿಸರದ ಅವನತಿಯಿಂದಾಗಿ ಕೃಷಿ ಉತ್ಪಾದಕತೆಯಲ್ಲಿ ಹಿನ್ನೆಡೆಯಾಗಲಿದೆ ಎಂದರು.

ಸಹಾಯಕ ಸರ್ಕಾರಿ ಅಭಿಯೋಜಕರಾದ ರಾಜಣ್ಣ ನ್ಯಾಮತಿ ಹಾಗೂ ಕೆ.ಆರ್. ಲಮಾಣಿ, ವಲಯ ಅರಣ್ಯಾಧಿಕಾರಿ ಜಿ.ಕೆ. ಗಿರಿಧರ, ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷ ಜಿ.ಬಿ. ಯಲಗಚ್ಚ, ಕಾರ್ಯದರ್ಶಿ ಎಚ್.ಜಿ. ಮುಳುಗುಂದ, ಸಹಕಾರ್ಯದರ್ಶಿ ಮಂಜುನಾಥ ಕುಮ್ಮೂರ, ಹಿರಿಯ ನ್ಯಾಯವಾದಿಗಳಾದ ಬಿ.ಎಸ್. ಚೂರಿ, ಎಂ.ಆರ್. ಹೊಮ್ಮರಡಿ, ಭಾರತಿ ಕುಲ್ಕರ್ಣಿ, ಮೃತ್ಯುಂಜಯ ಕಾಯ್ಕದ, ಎನ್.ಎಸ್. ಬಟ್ಟಲಕಟ್ಟಿ, ಬಿ.ಜಿ. ಹಿರೇಮಠ ಎಚ್.ಡಿ. ಮಡಿವಾಳರ ಹಾಗೂ ನ್ಯಾಯಾಲಯದ ಸಿಬ್ಬಂದಿ ಉಪಸ್ಥಿತರಿದ್ದರು.