ಕನ್ನಡಪ್ರಭ ವಾರ್ತೆ ಉಡುಪಿ
ಅಭಿಪ್ರಾಯವನ್ನು ವ್ಯಕ್ತಪಡಿಸಲು ಇರುವ ಸೂಕ್ತ ಮಾಧ್ಯಮ ಎಂದರೇ ಭಾಷಣ. ಈ ಮೂಲಕ ಯಾವುದೇ ರೀತಿಯ ಜಾಗೃತಿ ಮೂಡಿಸಲು ಸಾಧ್ಯವಾಗುತ್ತದೆ ಎಂದು ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ಕುಲಪತಿ ವಂ|ಡಾ| ರೋಶನ್ ಡಿಸೋಜಾ ಹೇಳಿದರು.ಅವರು ಭಾನುವಾರ ಕಥೊಲಿಕ್ ಸಭಾ ಉಡುಪಿ ಪ್ರದೇಶ ಇದರ ವತಿಯಿಂದ ಕಕ್ಕುಂಜೆ ಅನುಗ್ರಹ ಪಾಲನಾ ಕೇಂದ್ರದಲ್ಲಿ ಆಯೋಜಿಸಿದ್ದ ಧರ್ಮಪ್ರಾಂತ್ಯ ಮಟ್ಟದ ಕೊಂಕಣಿ ಮತ್ತು ಕನ್ನಡ ಭಾಷಣ ಸ್ಪರ್ಧೆಗಳ ಬಹುಮಾನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.ಸಾಮಾಜಿಕ, ರಾಜಕೀಯ, ಧಾರ್ಮಿಕ ವಿಚಾರಗಳ ಮೇಲೆ ನಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ಒಂದು ವೇದಿಕೆ ಭಾಷಣದ ಮೂಲಕ ರೂಪುಗೊಳ್ಳುತ್ತದೆ. ಈ ಮೂಲಕ ನಮ್ಮ ಮಕ್ಕಳಿಗೆ ತಮ್ಮ ನಾಯಕತ್ವವನ್ನು ಬೆಳೆಸಲು ಅವಕಾಶ ಲಭಿಸುತ್ತದೆ ಮತ್ತು ಅವರು ಧೈರ್ಯದಿಂದ ಸಾರ್ವಜನಿಕವಾಗಿ ಮಾತನಾಡಲು ಶಕ್ತರಾಗುತ್ತಾರೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಥೊಲಿಕ್ ಸಭಾ ಅಧ್ಯಕ್ಷರಾದ ಸಂತೋಶ್ ಕರ್ನೆಲಿಯೋ ಮಾತನಾಡಿ ಭಾಷಣದಿಂದಾಗಿ ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಮೂಡಿಸುವ ಜೊತೆಗೆ ಸಮಾಜದಲ್ಲಿ ಭಯವಿಲ್ಲದೆ ಮಾತನಾಡುವ ಮೂಲಕ ನಾಯಕರಾಗಿ ರೂಪುಗೊಳ್ಳಲು ಸಹಕಾರಿಯಾಗುತ್ತದೆ. ಭಾಷಣ ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ನಮ್ಮ ವೈಯುಕ್ತಿಕ ವಿಕಸನ ಮಾಡಿಕೊಳ್ಳಲು ಉತ್ತಮ ಅವಕಾಶವಾಗುತ್ತದೆ ಎಂದರು.ಭಾಷಣ ಸ್ಪರ್ಧೆ ಕೊಂಕಣಿ ಮತ್ತು ಕನ್ನಡ ನಡೆದಿದ್ದು ನಾಲ್ಕು ಪ್ರತ್ಯೇಕ ವಿಭಾಗಗಳಲ್ಲಿ ಗೆದ್ದವರಿಗೆ ಪ್ರಥಮ ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ವಿತರಿಸಲಾಯಿತು. ಐದು ವಲಯಗಳಿಂದ ವಿಜೇತರಾಗಿ ಕೇಂದ್ರೀಯ ಹಂತಕ್ಕೆ ತೇರ್ಗಡೆಗೊಂಡ ಸುಮಾರು 60 ಮಂದಿ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.ಕಥೊಲಿಕ್ ಸಭಾ ಉಡುಪಿ ಪ್ರದೇಶ ಆಧ್ಯಾತ್ಮಿಕ ನಿರ್ದೇಶಕ ಹಾಗೂ ಧರ್ಮಪ್ರಾಂತ್ಯದ ಶ್ರೇಷ್ಠ ಗುರು ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್, ಕಥೊಲಿಕ್ ಸಭಾ ಕೋಶಾಧಿಕಾರಿ ಜೆರಾಲ್ಡ್ ರೊಡ್ರಿಗಸ್, ನಿಯೋಜಿತ ಅಧ್ಯಕ್ಷರಾದ ರೊನಾಲ್ಡ್ ಡಿ ಆಲ್ಮೇಡಾ, ಮಾಜಿ ಅಧ್ಯಕ್ಷರಾದ ವಲೇರಿಯನ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.ಕಾರ್ಯಕ್ರಮದ ಸಂಚಾಲಕರಾದ ಎಡ್ವರ್ಡ್ ಲಾರ್ಸನ್ ಡಿಸೋಜಾ ಸ್ವಾಗತಿಸಿ, ಕಾರ್ಯದರ್ಶಿ ಒಲಿವೀಯಾ ಡಿಮೆಲ್ಲೊ ವಂದಿಸಿದರು. ಶಾಂತಿ ಪಿರೇರಾ ಕಾರ್ಯಕ್ರಮ ನಿರೂಪಿಸಿದರು.