ಸದೃಢ ಆರೋಗ್ಯಕ್ಕೆ ಕ್ರೀಡಾಕೂಟಗಳು ಸಹಕಾರಿ : ಶಾಸಕ ತಮ್ಮಯ್ಯ

KannadaprabhaNewsNetwork |  
Published : Sep 07, 2025, 01:00 AM IST
ಚಿಕ್ಕಮಗಳೂರಿನ ನೇತಾಜಿ ಸುಭಾಷ್‌ ಚಂದ್ರಬೋಸ್‌ ಜಿಲ್ಲಾ ಆಟದ ಮೈದಾನದಲ್ಲಿ ಶನಿವಾರ ನಡೆದ ದಸರಾ ಕ್ರೀಡಾಕೂಟವನ್ನು ಶಾಸಕ ಎಚ್‌.ಡಿ. ತಮ್ಮಯ್ಯ ಅವರು ಶನಿವಾರ ಉದ್ಘಾಟಿಸಿದರು. ವಿಧಾನಪರಿಷತ್‌ ಸದಸ್ಯರುಗಳಾದ ಎಸ್‌.ಎಲ್‌. ಭೋಜೇಗೌಡ, ಸಿ.ಟಿ. ರವಿ, ಯುವ ಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಉಪ ನಿರ್ದೇಶಕಿ ಡಾ. ಮಂಜುಳಾ ಹುಲ್ಲಳ್ಳಿ ಇದ್ದರು. | Kannada Prabha

ಸಾರಾಂಶ

ಚಿಕ್ಕಮಗಳೂರು, ವಿದ್ಯಾರ್ಥಿಗಳು ಕ್ರೀಡಾ ಮನೋಭಾವದಿಂದ ಕ್ರೀಡಾಕೂಟಗಳಲ್ಲಿ ಭಾಗವಹಿಸಿದಾಗ ಸದೃಢರಾಗಿ ಆರೋಗ್ಯವಂತರಾಗಲು ಸಹಕಾರಿಯಾಗಲಿದೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.

- ಜಿಲ್ಲಾ ಆಟದ ಮೈದಾನದಲ್ಲಿ ದಸರಾ ಕ್ರೀಡಾಕೂಟ,

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ವಿದ್ಯಾರ್ಥಿಗಳು ಕ್ರೀಡಾ ಮನೋಭಾವದಿಂದ ಕ್ರೀಡಾಕೂಟಗಳಲ್ಲಿ ಭಾಗವಹಿಸಿದಾಗ ಸದೃಢರಾಗಿ ಆರೋಗ್ಯವಂತರಾಗಲು ಸಹಕಾರಿಯಾಗಲಿದೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.

ನಗರದ ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಜಿಲ್ಲಾ ಆಟದ ಮೈದಾನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಶಿಕ್ಷಣ ಇಲಾಖೆ, ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಹಾಗೂ ಇತರೆ ಇಲಾಖೆಗಳ ಸಹಯೋಗ ದೊಂದಿಗೆ ಶನಿವಾರ ನಡೆದ ದಸರಾ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.

ಕಳೆದ 25 ವರ್ಷಗಳಿಂದ ವೈವಿಧ್ಯಮಯವಾಗಿ ವಿಜೃಂಭಣೆಯಿಂದ ನಡೆಯುತ್ತಿದ್ದ ದಸರಾ ಕ್ರೀಡಾಕೂಟ ಇತ್ತೀಚೆಗೆ ಕಳೆ ಗುಂದಿದೆ ಎಂದು ವಿಷಾಧಿಸಿದ ಅವರು, ಈ ಕ್ರೀಡಾಕೂಟ ತಾಲೂಕು, ಜಿಲ್ಲಾ , ವಿಭಾಗ ಮಟ್ಟದ ನಂತರ ರಾಜ್ಯಮಟ್ಟದ ಕ್ರೀಡಾಕೂಟ ದಸರಾ ಸಂದರ್ಭದಲ್ಲಿ ಮೈಸೂರಿನಲ್ಲಿ ನಡೆಯಲಿದೆ ಎಂದರು.

ಧಾರ್ಮಿಕವಾಗಿ ಇತಿಹಾಸ ಇರುವ ದಸರಾ ಕ್ರೀಡಾಕೂಟ ಮೈಸೂರಿನಲ್ಲಿ ವಿಜಯದಶಮಿ ದಿನ ಚಾಮುಂಡೇಶ್ವರಿ ದಸರಾ ಮಹೋತ್ಸವದ ಅಂಗವಾಗಿ ರಾಜ್ಯಾದ್ಯಂತ ನಡೆಯುತ್ತಿದೆ. ತೀರ್ಪುಗಾರರು ಪ್ರಾಮಾಣಿಕವಾಗಿ ತೀರ್ಪು ನೀಡಿ, ಸಮಸ್ತರನ್ನು ಆಯ್ಕೆ ಮಾಡಬೇಕೆಂದು ಮನವಿ ಮಾಡಿದರು.ದುಷ್ಟ ಶಕ್ತಿಗಳನ್ನು ಸಂಹಾರ ಮಾಡಲು ಎಲ್ಲಾ ದೇವತೆಗಳು ತಮ್ಮ ಶಕ್ತಿಯನ್ನು ಧಾರೆಯೆರೆದು ಚಾಮುಂಡೇಶ್ವರಿಗೆ ಕೊಡುತ್ತಾರೆ. ಈ ದುಷ್ಟಶಕ್ತಿ ಸಂಹಾರ ಹಿಂದಿನ ಕಾಲದಲ್ಲಿ ಮಾತ್ರ ಇರದೆ ಈಗಾಲೂ ಬೇರೆ ಬೇರೆ ರೂಪದಲ್ಲಿ ನಮ್ಮ ನಡುವೆ ಇದ್ದಾರೆ ಎಂದು ಹೇಳಿದರು.ಗ್ರಾಮೀಣ ಕ್ರೀಡೆಗಳು ಈ ದಸರಾ ಕ್ರೀಡಾಕೂಟದಲ್ಲಿ ಹೆಚ್ಚು ಪ್ರೋತ್ಸಾಹಿಸುವ ಜೊತೆಗೆ ಕಬಡ್ಡಿ, ಖೋಖೋ, ಲಾಂಗ್‌ಜಂಪ್, ಹೈಜಂಪ್, ಗುಂಡು ಎಸೆತ ಮುಂತಾದವುಗಳು ನಶಿಸುತ್ತಿರುವ ಈ ಸಂದರ್ಭದಲ್ಲಿ ಅವುಗಳನ್ನು ಉಳಿಸಿ ಬೆಳೆಸಲು ಜಿಲ್ಲಾಡಳಿತ ಮತ್ತು ಕ್ರೀಡಾ ಇಲಾಖೆ ಮುಂದಾಗಬೇಕೆಂದು ಸೂಚಿಸಿದರು.ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಮಾತನಾಡಿ, ನಾಡಹಬ್ಬ ದಸರಾ ಉತ್ಸವಕ್ಕೆ ಧಾರ್ಮಿಕ, ಚಾರಿತ್ರಿಕ ಇತಿಹಾಸ ಇದೆ. ವಿಜಯನಗರ ಸಾಮ್ರಾಜ್ಯದ ಅವಧಿಯಲ್ಲಿ ದಸರೆ ಕೇಂದ್ರ ಬಿಂದುವಾಗಿದ್ದು, ಹೊರ ದೇಶಗಳಿಂದ ಸಾಂಸ್ಕೃತಿಕ ನಗರಿ ಮೈಸೂರಿಗೆ ಬಂದ ಪ್ರವಾಸಿಗರು ದಸರಾ ಕ್ರೀಡಾಕೂಟವನ್ನು ವೈಭವೀಕರಿಸಿದ್ದನ್ನು ನೋಡಿದ್ದೇವೆ ಎಂದರು.ನಮ್ಮೊಳಗಿರುವ ಅಸುರ ಶಕ್ತಿ ದಮನಗೊಳಿಸಲು ಸಜ್ಜನ ಶಕ್ತಿ ವಿಜಯವಾಗಬೇಕು. ಅಸುರ ದಹನವಾಗಬೇಕು. ಆ ರೀತಿ ಪೌರಾಣಿಕ, ಧಾರ್ಮಿಕ ಹಿನ್ನೆಲೆಯಾದರೆ ದಸರಾ ಕ್ರೀಡಾಕೂಟವನ್ನು ವಿಜಯನಗರ ಸಾಮ್ರಾಜ್ಯ ಪಥನದ ನಂತರ ಮೈಸೂರು ಅರಸರು ಅದರ ಪರಂಪರೆಯನ್ನು ದಸರಾ ಕ್ರೀಡಾಕೂಟದ ನೆಪದಲ್ಲಿ ನಡೆಸುತ್ತಿದ್ದಾರೆಂದು ಹೇಳಿದರು.ಯುವಕರು ಕುಸ್ತಿ ಸ್ಪರ್ಧೆಯಲ್ಲಿ ಭಾಗವಹಿಸಿ ಮನರಂಜನೆಯ ಜೊತೆಗೆ ಗರಡಿ ಮನೆಗಳಲ್ಲಿ ದೈಹಿಕ ಸಾಮರ್ಥ್ಯ ಹೆಚ್ಚಿಸಿ ಕೊಳ್ಳಲು ಕಾರಣವಾಗಿದೆ. ಈ ಮೂಲಕ ತರಬೇತಿ ನೀಡಿ ಸೈನ್ಯಕ್ಕೆ ಆಯ್ಕೆ ಮಾಡುವ ಪ್ರತೀತಿ ಇತ್ತು ಎಂದರು.ಪ್ರತಿಯೊಬ್ಬರಲ್ಲಿ ಗೆಲುವಿನ ಹಂಬಲ, ಆತ್ಮವಿಶ್ವಾಸ ಮೂಡಿಸುವ ಈ ದಸರಾ ಕ್ರೀಡಾಕೂಟ ಕ್ರೀಡೆಯ ಜೊತೆಗೆ ಬದುಕಿನಲ್ಲಿ ಹಂಬಲ ಮೂಡಿಸಲು ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.ವಿಧಾನ ಪರಿಷತ್ ಸದಸ್ಯ ಎಸ್.ಎಲ್‌. ಭೋಜೇಗೌಡ ಮಾತನಾಡಿ, ಸೋಲೇ ಗೆಲುವಿನ ಮೆಟ್ಟಿಲು ಎಂಬಂತೆ ತಮ್ಮ ಪ್ರತಿಭೆ ಹೊರಬರುವಲ್ಲಿ ಈ ಕ್ರೀಡಾಕೂಟ ಯಶಸ್ವಿಯಾಗಲಿ, ಎಲ್ಲಾ ಕ್ರೀಡಾಪಟುಗಳಲ್ಲಿ ಸಾಧನೆ ಮಾಡುತ್ತೇನೆ ಎಂಬ ಛಲದೊಂದಿಗೆ ಮುನ್ನಡೆಯಿರಿ ಎಂದು ಕಿವಿಮಾತು ಹೇಳಿದರು.ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಉಪ ನಿರ್ದೇಶಕಿ ಡಾ. ಮಂಜುಳಾ ಹುಲ್ಲಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು.

6 ಕೆಸಿಕೆಎಂ 1ಚಿಕ್ಕಮಗಳೂರಿನ ನೇತಾಜಿ ಸುಭಾಷ್‌ ಚಂದ್ರಬೋಸ್‌ ಜಿಲ್ಲಾ ಆಟದ ಮೈದಾನದಲ್ಲಿ ಶನಿವಾರ ನಡೆದ ದಸರಾ ಕ್ರೀಡಾಕೂಟ ವನ್ನು ಶಾಸಕ ಎಚ್‌.ಡಿ. ತಮ್ಮಯ್ಯ ಶನಿವಾರ ಉದ್ಘಾಟಿಸಿದರು. ವಿಧಾನಪರಿಷತ್‌ ಸದಸ್ಯರಾದ ಎಸ್‌.ಎಲ್‌. ಭೋಜೇಗೌಡ, ಸಿ.ಟಿ. ರವಿ, ಯುವ ಜನ ಸೇವಾ ಮತ್ತು ಕ್ರೀಡಾ ಇಲಾಖೆ ಉಪ ನಿರ್ದೇಶಕಿ ಡಾ. ಮಂಜುಳಾ ಹುಲ್ಲಳ್ಳಿ ಇದ್ದರು.

-----------------------------

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ