-ಪುರುಷ-ಮಹಿಳೆಯರ ವಿ.ವಿ. ತಂಡದ ಆಯ್ಕೆ ಸಮಾರೋಪ । ವಿಜೇತರಿಗೆ ಬಹುಮಾನ
-----ಕನ್ನಡಪ್ರಭ ವಾರ್ತೆ ಹೊಳಲ್ಕೆರೆ
ಯಾವ ಕ್ರೀಡೆಯಲ್ಲಿ ನಿಮಗೆ ಹೆಚ್ಚು ಆಸಕ್ತಿಯಿದೆಯೋ ಅದರಲ್ಲಿ ತೊಡಗಿಕೊಂಡಾಗ ಎತ್ತರೆತ್ತರಕ್ಕೆ ಬೆಳೆಯಲು ಸಾಧ್ಯ ಎಂದು ಶಾಸಕ ಡಾ.ಎಂ.ಚಂದ್ರಪ್ಪ ಕ್ರೀಡಾಪಟುಗಳಿಗೆ ಕರೆ ನೀಡಿದರು.ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ದಾವಣಗೆರೆ ವಿಶ್ವವಿದ್ಯಾನಿಲಯದ ಅಂತರ ಕಾಲೇಜು ಮಟ್ಟದ ಪುರುಷರ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ಪುರುಷ ಮತ್ತು ಮಹಿಳೆಯರ ವಿಶ್ವವಿದ್ಯಾನಿಲಯ ತಂಡದ ಆಯ್ಕೆ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಕನ್ನಡ, ತೆಲುಗು, ಹಿಂದಿಯಲ್ಲಿ ದೊಡ್ಡ ದೊಡ್ಡ ಸಿನಿಮಾ ನಟರು ಭಾರತ ದೇಶಕ್ಕಷ್ಟೆ ಪರಿಚಿತರು. ಅದೇ ಕ್ರೀಡಾಪಟುಗಳು ಇಡಿ ವಿಶ್ವದಲ್ಲಿ ಹೆಸರು ಗಳಿಸಬಹುದು. ಅದಕ್ಕಾಗಿಯೇ ಕ್ರೀಡೆಗೆ ತನ್ನದೆ ಆದ ಮಹತ್ವವಿದೆ ಎಂದು ಹೇಳಿದರು.ಕ್ರೀಡಾ ಮನೋಭಾವ ಬೆಳೆಸಿಕೊಂಡಿರುವ ಭಾರತದಲ್ಲಿ ನೂರ ನಲವತ್ತು ಕೋಟಿ ಜನಸಂಖ್ಯೆಯಿದೆ. ಕ್ರೀಡಾಪಟುಗಳಿಗೆ ತರಬೇತಿ, ಪ್ರೋತ್ಸಾಹ ಮುಖ್ಯ. ಸರ್ಕಾರ ಎಷ್ಟೆ ಮೂಲಸೌಕರ್ಯ ಕೊಟ್ಟರೂ ನೀವುಗಳು ಪೂರಕ ಜವಾಬ್ದಾರಿ ಹೊತ್ತು ಶಿಕ್ಷಣದ ಜೊತೆ ಕ್ರೀಡೆಗೆ ಒತ್ತು ಕೊಟ್ಟಾಗ ಮಾತ್ರ ಚಿನ್ನ ಹಾಗೂ ಬೆಳ್ಳಿ ಪದಕ ಪಡೆದು ದೇಶಕ್ಕೆ ಕೀರ್ತಿ ತರಬಹುದಲ್ಲದೆ ಕ್ರೀಡೆಯಿಂದ ಆರೋಗ್ಯವಂತರಾಗಿರಬಹುದು. ನಿಮ್ಮ ಇಚ್ಚೆಗೆ ತಕ್ಕಂತೆ ಯಾವ ಕ್ರೀಡೆಯಲ್ಲಿ ಆಸಕ್ತಿಯಿದೆಯೋ ಅದರಲ್ಲಿ ತೊಡಗಿಕೊಳ್ಳುವುದರ ಜೊತೆಗೆ ನಿರಂತರ ಅಭ್ಯಾಸವಿರಬೇಕೆಂದರು.
ಪ್ರಾಂಶುಪಾಲ ಶಿವಮೂರ್ತಿನಾಯ್ಕ, ದಾವಣಗೆರೆ ವಿಶ್ವವಿದ್ಯಾನಿಲಯದ ಕ್ರೀಡಾಧಿಕಾರಿ ವೀರಪ್ಪ ಬಿ.ಹೆಚ್. ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಡಿ.ಸಿ.ಮೋಹನ್, ಕರಿಸಿದ್ದಯ್ಯ ಒಡೆಯರ್, ಬೋಧಕ, ಬೋಧಕೇತರ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ್ದರು.--
ಫೋಟೋ: ಅಂತರ ಕಾಲೇಜು ಮಟ್ಟದ ಪುರುಷರ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ಪುರುಷ ಮತ್ತು ಮಹಿಳೆಯರ ವಿ.ವಿ. ತಂಡದ ಆಯ್ಕೆ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಶಾಸಕ ಡಾ.ಎಂ.ಚಂದ್ರಪ್ಪ ಬಹುಮಾನ ವಿತರಿಸಿದರು.