ಭೀಮಾ ಕಪ್ ಗ್ರಾಮೀಣ ಮಟ್ಟದ ವಾಲಿಬಾಲ್ ಪಂದ್ಯಾವಳಿ
ಯುವಕರು, ವಿದ್ಯಾರ್ಥಿಗಳು ಮೊಬೈಲ್ ಹಾವಳಿಗೆ ಸಿಲುಕಿ ಕ್ರೀಡೆಗಳಿಂದ ದೂರ ಉಳಿಯುತ್ತಿದ್ದು ಗ್ರಾಮಗಳಲ್ಲಿ ಇಂತಹ ಕ್ರೀಡೆಗಳನ್ನು ಆಯೋಜಿಸುವುದು ಮುಂದಿನ ಪೀಳಿಗೆಗೆ ಆದರ್ಶವಾಗಲಿದೆ ಎಂದು ಟಿಎಪಿಎಂಸಿ ಸದಸ್ಯ ಮತ್ತು ಕಾಂಗ್ರೆಸ್ ಮುಖಂಡ ತೀರ್ಥಕುಮಾರ್ ಹೇಳಿದರು.
ತಾಲೂಕಿನ ಶಂಭುಗನಹಳ್ಳಿ ಗ್ರಾಮದಲ್ಲಿ ಜಾಲಿ ಬಾಯ್ಸ್ ಯುವಕರ ಬಳಗ ಆಯೋಜಿಸಿದ ಹೂನಲು ಬೆಳಕಿನ ಭೀಮಾ ಕಪ್ ವಾಲಿಬಾಲ್ ಪಂದ್ಯಾವಳಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ತಾಲೂಕಿನ ಅತಿ ಚಿಕ್ಕ ಗ್ರಾಮವಾದ ಶಂಭುಗನಹಳ್ಳಿ ಗ್ರಾಮದಲ್ಲಿ ವಾಲಿಬಾಲ್ ಪಂದ್ಯಾವಳಿಯನ್ನು ಆಯೋಜಿಸಿರುವುದು ಅತ್ಯಂತ ಸಂತೋಷಕರವಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಅಂತಾರಾಷ್ಟ್ರೀಯ ಪಂದ್ಯಾವಳಿಗಳನ್ನು ಆಯೋಜಿಸಿ ಗ್ರಾಮಗಳ ಯುವಕರು ಮತ್ತು ಇತರೆ ಗ್ರಾಮದ ಯುವಕರು ಒಗ್ಗಟ್ಟಿನಿಂದ ಪಂದ್ಯಾವಳಿಗಳಲ್ಲಿ ಭಾಗವಹಿಸುತ್ತಿರುವುದು ಇಂದಿನ ಯುವ ಪೀಳಿಗೆಗೆ ಮಾದರಿ ಆಗಬೇಕಿದೆ ಎಂದು ಹೇಳಿದರು.
ಮಾನವ ಹಕ್ಕುಗಳ ಹೋರಾಟ ಸಮಿತಿಯ ಹಾಸನ ಜಿಲ್ಲಾಧ್ಯಕ್ಷ ಎಂ.ಜಿ.ನಿಂಗರಾಜ್ ಮಾತನಾಡಿ, ತಾಲೂಕಿನ ಕುಗ್ರಾಮಗಳಲ್ಲಿ ಒಂದಾದ ಶಂಭುಗನಹಳ್ಳಿ ಗ್ರಾಮದಲ್ಲಿ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ ವೀಕ್ಷಣೆ ಮಾಡಲು ಅತ್ಯಂತ ಸಂತಸ ತಂದಿದೆ. ಕಾರಣ ನಗರಗಳಲ್ಲೇ ಕ್ರೀಡೆಯ ಬಗ್ಗೆ ಯುವಕರು ಹಿಂಜರಿಯುತ್ತಿದ್ದಾರೆ. ಗ್ರಾಮಗಳಲ್ಲಿ ಇಂತಹ ಕ್ರೀಡಾ ಸ್ಪರ್ಧೆಗಳು ಆಯೋಜನೆಯಿಂದ ಯುವಕರಲ್ಲಿ ಹೊಸ ಚೈತನ್ಯ ಹುಟ್ಟುಹಾಕಿದ್ದು ಯುವಕರ ಆರೋಗ್ಯ ವೃದ್ಧಿಸಲಿದೆ ಮತ್ತು ಮಾನಸಿಕ ಒತ್ತಡವು ದೂರವಾಗುತ್ತದೆ ಎಂದರು.
ವಾಲಿಬಾಲ್ ಪಂದ್ಯಾವಳಿಯಲ್ಲಿ ಜಿಲ್ಲೆಯ ಮತ್ತು ಇತರೆ ಜಿಲ್ಲೆಯ 27 ತಂಡಗಳು ಪಾಲ್ಗೊಂಡಿದ್ದರು. ಮಾಜಿ ಗ್ರಾಮ ಪಂಚಾಯತ್ ಸದಸ್ಯ ರಂಗನಾಥ್, ಪ್ರಗತಿಪರ ಚಿಂತಕ ರಘ ನಾರಾಯಣಪುರ, ಮಾನವ ಹಕ್ಕು ಹೋರಾಟ ಸಮಿತಿ ತಾಲೂಕು ಕಾರ್ಯದರ್ಶಿ ಲಕ್ಷ್ಮೀನಾರಾಯಣ್, ಪ್ರಾರ್ಥನಾ ಅಕಾಡೆಮಿ ಬಿವಿಎಸ್ ತಾಲೂಕು ಅಧ್ಯಕ್ಷ ರಾಜು, ಭದ್ರಯ್ಯ, ದಲಿತ ಮುಖಂಡ ರೇಣುಕಯ್ಯ, ಗ್ರಾಮ ಪಂಚಾಯಿತಿ ಸದಸ್ಯ ಮಹೇಶ್, ಶಂಭುಗನಹಳ್ಳಿ ಯುವಕರು, ಗ್ರಾಮಸ್ಥರು ಹಾಜರಿದ್ದರು.