ವ್ಯಕ್ತಿಯು ಜೀವನದಲ್ಲಿ ಎಷ್ಟೇ ಜ್ಞಾನ ಸಂಪಾದಿಸಿದರೂ ಆತ್ಮದ ಅರಿವಿಲ್ಲದಿದ್ದರೆ ಪ್ರಯೋಜನವಿಲ್ಲ. ಮೊದಲು ತನ್ನನ್ನು ತಾನು ಅರಿತು ಮುಕ್ತಿಯೆಡೆಗೆ ಸಾಗಬೇಕು.
ಕನ್ನಡಪ್ರಭ ವಾರ್ತೆ ಮೈಸೂರು
ಸ್ವ ಅರಿವಿನಿಂದ ಮುಕ್ತಿ ಸಾಧ್ಯ ಎಂದು ಬೆಳಗಾವಿ ಜಿಲ್ಲೆಯ ಪಿ.ಜಿ. ಹುಣಸ್ಯಾಳ ಕೈವಲ್ಯಾಶ್ರಮದ ಶ್ರೀ ನಿಜಗುಣ ದೇವರು ತಿಳಿಸಿದರು.
ಸುತ್ತೂರು ಕ್ಷೇತ್ರದಲ್ಲಿ ನಡೆದ ಅಧ್ಯಯನ ಶಿಬಿರದಲ್ಲಿ ವಸ್ತು-ಶಕ್ತಿ- ದ್ವಿತೀಯಂ ವಿಷಯ ಕುರಿತು ಉಪನ್ಯಾಸ ನೀಡಿ,
ವ್ಯಕ್ತಿಯು ಜೀವನದಲ್ಲಿ ಎಷ್ಟೇ ಜ್ಞಾನ ಸಂಪಾದಿಸಿದರೂ ಆತ್ಮದ ಅರಿವಿಲ್ಲದಿದ್ದರೆ ಪ್ರಯೋಜನವಿಲ್ಲ. ಮೊದಲು ತನ್ನನ್ನು ತಾನು ಅರಿತು ಮುಕ್ತಿಯೆಡೆಗೆ ಸಾಗಬೇಕು. ಎಂದರು.
ಜೀವನವು ಭವ- ಬಂಧನಗಳಿಂದ ಬಂಧಿತವಾಗಿದ್ದು, ಅದರಿಂದ ಹೊರಬರಬೇಕಾದರೆ ಗುರುವಿನ ಕೃಪೆ ಮುಖ್ಯ. ಗುರು ಮತ್ತು ಗುರಿಯನ್ನು ತೊರೆಯಬಾರದು. ಗುರುವಿನ ಕಾರುಣ್ಯದಿಂದ ಆತ್ಮಜ್ಞಾನ ಸಂಪಾದಿಸಬೇಕು. ನನ್ನದು ಎನ್ನುವುದು ದೇಹ ಹಾಗೂ ಮನಸ್ಸುಗಳಾದರೆ, ನಾನು ಎನ್ನುವುದು ಆತ್ಮ, ಇದು ನಿರ್ಗುಣ ಮತ್ತು ನಿರಾಕಾರ. ಶರೀರಕ್ಕೆ ಸ್ವತಃ ಚೈತನ್ಯ ಶಕ್ತಿ ಇಲ್ಲ. ಶರೀರ, ಮನಸ್ಸು, ಬುದ್ದಿಗಳು ಆತ್ಮದಿಂದಲೇ ಚೈತನ್ಯ ಪಡೆದು ಕಾರ್ಯನಿರ್ವಹಿಸುತ್ತವೆ. ಪರಮಾತ್ಮ ಎಂಬುದು ಅನಂತವಾದ ಆಕಾಶ, ಆತ್ಮ-ಪರಮಾತ್ಮ ಒಂದೆ ಎಂದು ಅವರು ತಿಳಿಸಿದರು.
ಮೈಸೂರಿನ ಶ್ರೀ ಸದಾಶಿವ ಗುರೂಜಿ ಅವರು ಭೂತ ಪಂಚೀಕರಣ ಕುರಿತು ಉಪನ್ಯಾಸ ನೀಡುತ್ತಾ, ಜಗತ್ತು ಭೂಮಿ, ಅಗ್ನಿ, ಜಲ, ವಾಯು, ಆಕಾಶಗಳೆಂಬ ಪಂಚಭೂತಗಳ ಮಿಶ್ರಣವಾಗಿದೆ. ಪಂಚಭೂತಗಳಲ್ಲಿ ಅತ್ಯಂತ ಸೂಕ್ಷ್ಮವಾದುದು ಆಕಾಶ ತತ್ವ. ಆಕಾಶದ ಒಂದಂಶವು ವಾಯುವನ್ನು ಸೇರಿದರೆ ಮನಸ್ಸು, ಅಗ್ನಿಯನ್ನು ಸೇರಿದರೆ ಬುದ್ಧಿ, ಜಲತತ್ವವನ್ನು ಸೇರಿದರೆ ಚಿತ್ತ, ಪೃಥ್ವಿ ಸೇರಿದರೆ ಅಹಂಕಾರ ಹುಟ್ಟುತ್ತದೆ ಎಂದು ವಚನಕಾರರು ವಿವರಿಸಿದ್ದಾರೆ. ಇದನ್ನರಿತು ನಾವು ಶರಣರ, ಸಂತರ ಸಹವಾಸದಿಂದ ಜೀವನವನ್ನು ಸರಳಗೊಳಿಸಿಕೊಳ್ಳಬೇಕು. ವೇದಾಂತವನ್ನು ಚಿಂತಿಸಿ, ಅಳವಡಿಸಿಕೊಳ್ಳಬೇಕು. ವೇದಾಂತವೇ ದೇವರು ಎಂದು ಅವರು ಹೇಳಿದರು.
ಶಿಬಿರದಲ್ಲಿ ಕರ್ನಾಟಕ, ಕೇರಳ ಹಾಗೂ ಮಹಾರಾಷ್ಟ್ರದಿಂದ ಆಗಮಿಸಿರುವ 120ಕ್ಕೂ ಹೆಚ್ಚು ಶಿಬಿರಾರ್ಥಿಗಳು ಪಾಲ್ಗೊಂಡಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.