ಕನ್ನಡಪ್ರಭ ವಾರ್ತೆ ಕುಮಟಾ
ಆಶ್ರಮ ಎಂದರೆ ಆಧ್ಯಾತ್ಮಿಕ ಆಶ್ರಯ ಸ್ಥಳ. ಜೀವನದ ಪ್ರತಿಯೊಂದು ಹಂತವು ತೊಟ್ಟಿಲಿನಿಂದ ಸಮಾಧಿಯವರೆಗಿನ ಪ್ರಯಾಣದ ನೈಸರ್ಗಿಕ ಭಾಗವಲ್ಲ, ಆದರೆ ಆಧ್ಯಾತ್ಮಿಕತೆ ಅಭಿವೃದ್ಧಿಪಡಿಸುವ ಸಮಯ ಎಂದು ಆದಿಚುಂಚನಗಿರಿ ಮಿರ್ಜಾನ ಶಾಖಾಮಠದ ಶ್ರೀನಿಶ್ಚಲಾನಂದನಾಥ ಸ್ವಾಮೀಜಿ ನುಡಿದರು. ತಾಲೂಕಿನ ಮಿರ್ಜಾನದಲ್ಲಿರುವ ಆದಿಚುಂಚನಗಿರಿ ಶಾಖಾ ಮಠದಲ್ಲಿ ಶ್ರೀಪ್ರಸನ್ನನಾಥ ಸ್ವಾಮೀಜಿಯವರ ವರ್ಧಂತ್ಯೋತ್ಸವಕ್ಕೆ ಚಾಲನೆ ನೀಡಿ ಆಶೀರ್ವಚನ ಮಾಡಿದರು. ನಮ್ಮ ಜೀವನದಲ್ಲಿ ಉತ್ತಮ ಕಾರ್ಯ ಮತ್ತು ಭಗವಂತನ ಸ್ಮರಣೆ ಮೂಲಕ ನಮ್ಮ ಜೀವನ ಸಾರ್ಥಕ ಪಡಿಸಿಕೊಳ್ಳಬೇಕು, ಜಗದ್ಗುರು ಶ್ರೀ ಡಾ.ಬಾಲಗಂಗಾಧರನಾಥ ಮಹಾಸ್ವಾಮೀಜಿ ಪರಮ ಶಿಷ್ಯರಾಗಿರುವ ಶ್ರೀಪ್ರಸನ್ನನಾಥ ಸ್ವಾಮೀಯವರ ಕ್ರಿಯಾಶೀಲತೆ ಮತ್ತು ಕಾರ್ಯತತ್ಪರತೆ ನಮಗೆಲ್ಲರಿಗೂ ಅನುಕರಣೀಯ ಎಂದರು.ಆಡಳಿತಾಧಿಕಾರಿ ಜಿ. ಮಂಜುನಾಥ ಮಾತನಾಡಿ, ಅರಿಷಡ್ವರ್ಗಗಳನ್ನು ತ್ಯಜಿಸಿ ದೈವ ಸಾಕ್ಷಾತ್ಕಾರ ಪಡೆದು ಜನರನ್ನು ಅಜ್ಞಾನದ ಕತ್ತಲೆಯಿಂದ ಜ್ಞಾನದ ಬೆಳಕಿನೆಡೆಗೆ ಕರೆದೊಯ್ಯುವವನೇ ಸದ್ಗುರು ಎಂದರು.
ಶ್ರೀ ಪ್ರಸನ್ನನಾಥ ಸ್ವಾಮೀಜಿಯವರ ಆಧ್ಯಾತ್ಮಿಕ,ಶೈಕ್ಷಣಿಕ,ಸಾಮಾಜಿಕ,ಸಾಂಸ್ಕೃತಿಕ ಕೊಡುಗೆ ಬಗ್ಗೆ ವಿವರಿಸಿದರು.ಶಿಕ್ಷಕ ಎಂ.ಜಿ. ಹಿರೇಕುಡಿ ವೇದಿಕೆಯಲ್ಲಿದ್ದರು. ಪ್ರಾಚಾರ್ಯೆ ಲೀನಾ ಗೊನೇಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.ಶ್ರೀಕ್ಷೇತ್ರ ಆದಿಚುಂಚನಗಿರಿಯಲ್ಲಿ ನಡೆದ ಕ್ರೀಡೋತ್ಸವದಲ್ಲಿ ೨೦೦ಮೀ ಓಟದಲ್ಲಿ ಪ್ರಥಮ ಸ್ಥಾನ ಗಳಿಸಿದ ಬಿಜಿಎಸ್ ಸೆಂಟ್ರಲ್ ಸ್ಕೂಲಿನ ವಿದ್ಯಾರ್ಥಿ ಎನ್. ಸನ್ಮಿತ್ ನಿಗೆ ಸನ್ಮಾನಿಸಿದರು.
ನಕುಲ್ ಸಂಗಡಿಗರು ವೇದಘೋಷ ಪಠಿಸಿದರು. ಆರ್ಯಾ ಸಂಗಡಿಗರು ಪ್ರಾರ್ಥಿಸಿದರು. ಕಿಶನ್ ಮತ್ತು ಸುಮನ್ ಪ್ರಸನ್ನನಾಥರ ಕುರಿತು ಮಾತನಾಡಿದರು. ಎಚ್.ಆರ್.ಈಶಾನಿ, ಪೃಥ್ವಿ ಪ್ರಭು ನಿರೂಪಿಸಿದರು, ಸೃಷ್ಟಿ ಪಟಗಾರ ವಂದಿಸಿದಳು. ವಿದ್ಯಾರ್ಥಿಗಳು ಗುರುವಿನ ಮಹಿಮೆ ಸಾರುವ ಭಜನೆ ಮಾಡಿದರು.ಬಳಿಕ ಶಿಕ್ಷಕರಿಗಾಗಿ ಅಭಿಪ್ರೇರಣಾ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದ್ದು, ಸಂಪನ್ಮೂಲ ವ್ಯಕ್ತಿಯಾಗಿ ಕಮಲಾ ಬಾಳಿಗಾ ಕಾಲೇಜಿನ ಪ್ರೊ.ಸುಬ್ರಹ್ಮಣ್ಯ. ಕೆ.ಹೆಗಡೆ ಮಾಹಿತಿ ನೀಡಿದರು.