ಬಳ್ಳಾರಿಯ ಶ್ರೀರಾಮಕೃಷ್ಣ ವಿವೇಕಾನಂದ ಕೇಂದ್ರ ಕೊಲ್ಕತ್ತಾದ ರಾಮಕೃಷ್ಣ ಮಿಷನ್‌ಗೆ ಹಸ್ತಾಂತರ

KannadaprabhaNewsNetwork |  
Published : Apr 22, 2026, 02:15 AM IST
ಬಳ್ಳಾರಿಯ ಶ್ರೀರಾಮಕೃಷ್ಣ ವಿವೇಕಾನಂದ ಕೇಂದ್ರವನ್ನು ರಾಮಕೃಷ್ಣ ಮಿಷನ್‌ಗೆ ಸೋಮವಾರ ಸಂಜೆ ಹಸ್ತಾಂತರಿಸಲಾಯಿತು. ಬೇಲೂರು ಮಠದ ಶ್ರೀ ಸ್ವಾಮಿ ಸತ್ಯೇಶಾನಂದಜೀ ಮಹಾರಾಜ್, ಸ್ವಾಮಿ ಮಂಗಳನಾಥಾನಂದಜೀ ಮಹಾರಾಜ್, ಮಾಜಿ ಸಂಸದ ಕೆ.ಸಿ.ಕೊಂಡಯ್ಯ, ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ, ಶಾಸಕ ನಾರಾ ಭರತ್ ರೆಡ್ಡಿ, ಮಾಜಿ ಶಾಸಕ ಜಿ.ಸೋಮಶೇಖರ ರೆಡ್ಡಿ, ಮೇಯರ್ ಗಾದೆಪ್ಪ, ಶ್ರೀಧರ ಬೋನಗೇರಿ ಮತ್ತಿತರರಿದ್ದರು.  | Kannada Prabha

ಸಾರಾಂಶ

ಬಳ್ಳಾರಿಯ ಶ್ರೀ ರಾಮಕೃಷ್ಣ ಆಶ್ರಮ ಉತ್ತರ ಕರ್ನಾಟಕದ ಬೇಲೂರು ಮಠವಾಗಬೇಕು. ಪಶ್ಚಿಮಬಂಗಾಳದ ಬೇಲೂರು ಮಠದಲ್ಲಿ ಜರುಗುವ ಆಧ್ಯಾತ್ಮಿಕ ಹಾಗೂ ಸೇವಾ ಚಟುವಟಿಕೆ ಬಳ್ಳಾರಿಯ ಆಶ್ರಮದಲ್ಲೂ ನಿರಂತರವಾಗಿ ನಡೆಯುವಂತಾಗಬೇಕು ಎಂದು ಬೇಲೂರು ಮಠದ ಸಹ ಪ್ರಧಾನ ಕಾರ್ಯದರ್ಶಿ ಶ್ರೀ ಸ್ವಾಮಿ ಸತ್ಯೇಶಾನಂದಜೀ ಮಹಾರಾಜ್ ಅವರು ತಿಳಿಸಿದರು.

ಬಳ್ಳಾರಿ: ಬಳ್ಳಾರಿಯ ಶ್ರೀ ರಾಮಕೃಷ್ಣ ಆಶ್ರಮ ಉತ್ತರ ಕರ್ನಾಟಕದ ಬೇಲೂರು ಮಠವಾಗಬೇಕು. ಪಶ್ಚಿಮಬಂಗಾಳದ ಬೇಲೂರು ಮಠದಲ್ಲಿ ಜರುಗುವ ಆಧ್ಯಾತ್ಮಿಕ ಹಾಗೂ ಸೇವಾ ಚಟುವಟಿಕೆ ಬಳ್ಳಾರಿಯ ಆಶ್ರಮದಲ್ಲೂ ನಿರಂತರವಾಗಿ ನಡೆಯುವಂತಾಗಬೇಕು ಎಂದು ಬೇಲೂರು ಮಠದ ಸಹ ಪ್ರಧಾನ ಕಾರ್ಯದರ್ಶಿ ಶ್ರೀ ಸ್ವಾಮಿ ಸತ್ಯೇಶಾನಂದಜೀ ಮಹಾರಾಜ್ ಅವರು ತಿಳಿಸಿದರು.

ಇಲ್ಲಿನ ಗಾಂಧಿನಗರದ ಶ್ರೀರಾಮಕೃಷ್ಣ ವಿವೇಕಾನಂದ ಕೇಂದ್ರವನ್ನು ರಾಮಕೃಷ್ಣ ಮಿಷನ್‌ಗೆ ಹಸ್ತಾಂತರಿಸುವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಬಳ್ಳಾರಿಯ ಶ್ರೀ ರಾಮಕೃಷ್ಣ ಆಶ್ರಮ ಬೇಲೂರು ಮಠಕ್ಕೆ ಹಸ್ತಾಂತರಗೊಂಡಿರುವುದು ಅತ್ಯಂತ ಸಂತಸ ತಂದಿದೆ. ಅಲ್ಲಂ ಕರಿಬಸಪ್ಪ, ಎಚ್‌. ಸೀತಾರಾಮ ರೆಡ್ಡಿಯವರು ಸೇರಿದಂತೆ ಈ ಊರಿನ ಅನೇಕರು ಆಶ್ರಮದ ಬೆಳವಣಿಗೆಗೆ ಶ್ರಮಿಸಿದ್ದಾರೆ. ಆ ಎಲ್ಲ ಮಹನೀಯರ ಸೇವಾ ಕೈಂಕರ್ಯ ಸದಾ ಸ್ಮರಣೀಯ. ರಾಮಕೃಷ್ಣ ಮಿಷನ್ ಆಧ್ಯಾತ್ಮಿಕ ಚಟುವಟಿಕೆಗಳ ಜೊತೆಗೆ ಸಾಮಾಜಿಕ ಸೇವಾ ಕೈಂಕರ್ಯದಲ್ಲೂ ತೊಡಗಿಸಿಕೊಳ್ಳುತ್ತದೆ. ಬಳ್ಳಾರಿಯ ಆಶ್ರಮದ ಮೂಲಕ ಸಹ ಶೈಕ್ಷಣಿಕ, ವೈದ್ಯಕೀಯ ಸೇರಿದಂತೆ ವಿವಿಧ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತಾಗಲಿ. ಈ ಭಾಗದ ಜನರ ಕಲ್ಯಾಣಕ್ಕಾಗಿ ಆಶ್ರಮ ಹೆಚ್ಚು ಸಕ್ರೀಯವಾಗಿ ಕಾರ್ಯನಿರ್ವಹಿಸುವಂತಾಗಲಿ ಎಂದು ಆಶಿಸಿದರು.

ಭಾರತದ ಕಲ್ಯಾಣದಲ್ಲಿ ಜಗತ್ತಿನ ಕಲ್ಯಾಣವಿದೆ. ಭಾರತ ಉಳಿದರೆ ಜಗತ್ತು ಉಳಿಯುತ್ತದೆ ಎಂದು ಸ್ವಾಮಿ ವಿವೇಕಾನಂದರು ಹೇಳುತ್ತಿದ್ದರು. ಸಮಾಜದ ಕಲ್ಯಾಣವೇ ರಾಷ್ಟ್ರದ ಕಲ್ಯಾಣ. ಆತ್ಮದರ್ಶನ, ಆತ್ಮಜ್ಞಾನವೇ ನಮ್ಮೆಲ್ಲರ ಗುರಿಯಾಗಿದೆ. ಗೃಹಸ್ಥಾಶ್ರಮವಾಗಲೀ, ಸನ್ಯಾಸಾಶ್ರಮವಾಗಲೀ ನಾವೆಲ್ಲರೂ ಆತ್ಮಜ್ಞಾನಿಗಳಾಗಬೇಕು. ಯೋಗಿಗಳಾಗಬೇಕು ಎಂದರು.

ಭಾರತದಲ್ಲಿ ಜನಿಸಿದ ಪ್ರತಿಯೊಬ್ಬರೂ ಅನಂತ ಶಕ್ತಿಯುಳ್ಳವರು. ತ್ಯಾಗ ಮತ್ತು ಸೇವೆಯ ಮೂಲಕ ನಮ್ಮೊಳಗಿನ ಅನಂತತೆಯನ್ನು ವೃದ್ಧಿಸಿಕೊಳ್ಳಬೇಕು. ನಾನು ಭಗವಂತನ ಮಗು. ಅತುಲ ಆತ್ಮವಿಶ್ವಾಸದ ಆಗರ. ಎಲ್ಲವನ್ನೂ ಧೈರ್ಯದಿಂದ ಎದುರಿಸಬಲ್ಲೆ. ನನ್ನ ದೇವರು ನನ್ನನ್ನು ಎಂದೂ ಕೈಬಿಡುವುದಿಲ್ಲ ಎಂಬ ನಂಬಿಕೆಯನ್ನು ಇಟ್ಟುಕೊಳ್ಳಬೇಕು ಎಂದು ಶ್ರೀ ಸ್ವಾಮಿ ಸತ್ಯೇಶಾನಂದಜೀ ಮಹಾರಾಜ್ ತಿಳಿಸಿದರು.

ರಾಮಕೃಷ್ಣ ಮಿಷನ್ ಬಳ್ಳಾರಿಯ ಶಾಖೆಯ ಮುಖ್ಯಸ್ಥರಾದ ಸ್ವಾಮಿ ಮಂಗಳನಾಥಾನಂದಜೀ ಮಹಾರಾಜ್ ಮಾತನಾಡಿ, ಈ ಹಿಂದಿನಿಂದಲೂ ಭಾರತದಲ್ಲಿ ಸಂಘಟನೆಯ ಕೊರತೆಯಿದೆ. ಸಂಘಟನೆ ನ್ಯೂನತೆ ಸರಿಪಡಿಸಲು ಸ್ವಾಮಿ ವಿವೇಕಾನಂದರು 1897ರಲ್ಲಿ ರಾಮಕೃಷ್ಣ ಮಿಷನ್ ಸ್ಥಾಪಿಸಿದರು. ಮಿಷನ್‌ ಅಡಿಯಲ್ಲಿ ಪ್ರಪಂಚದಲ್ಲಿ 1600 ಸ್ವಾಮೀಜಿಗಳಿದ್ದು, ಶ್ರೀ ರಾಮಕೃಷ್ಣ ಪರಮಹಂಸರ ತತ್ವಗಳ ಪ್ರಚಾರ ಹಾಗೂ ನಿಸ್ವಾರ್ಥದಿಂದ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಬಳ್ಳಾರಿಯ ಶ್ರೀರಾಮಕೃಷ್ಣ ವಿವೇಕಾನಂದ ಕೇಂದ್ರವನ್ನು ರಾಮಕೃಷ್ಣ ಮಿಷನ್‌ಗೆ ಹಸ್ತಾಂತರಿಸಿದ ಬಳಿಕ ನನ್ನನ್ನು ಸೇವಾ ಕಾರ್ಯಕ್ಕೆ ನಿಯೋಜಿಸಲಾಗಿದೆ. ಈಗಾಗಲೇ ಧಾರ್ಮಿಕ ಉಪನ್ಯಾಸ ಶುರುಗೊಳಿಸಲಾಗಿದ್ದು ಭಜನೆ, ಸಮ್ಮರ್ ಕ್ಲಾಸ್, ಸ್ಟಡಿ ಸರ್ಕಲ್ ಮತ್ತಿತರ ಚಟುವಟಿಕೆಗಳನ್ನು ಶುರು ಮಾಡಲಿದ್ದೇವೆ ಎಂದು ತಿಳಿಸಿದರು. ಬೆಂಗಳೂರು ಶಿವನಹಳ್ಳಿ ಆಶ್ರಮದ ಮಹಾವಾಕ್ಯಾನಂದ ಮಹಾರಾಜ್ ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಹಾಜರಿದ್ದ ಮಾಜಿ ಸಂಸದ ಕೆ.ಸಿ. ಕೊಂಡಯ್ಯ ಅವರು ಆಧ್ಯಾತ್ಮಿಕ ಹಾಗೂ ಸೇವಾ ವಿಚಾರದಲ್ಲಿ ಬಳ್ಳಾರಿಯ ಎಲ್ಲ ಪಕ್ಷದವರು ಒಂದಾಗಿ ಕೆಲಸ ಮಾಡುತ್ತೇವೆ. ರಾಮಕೃಷ್ಣ ಮಿಷನ್‌ಗೆ ಬೇಕಾದ ಅಗತ್ಯ ನೆರವು ನೀಡಲು ನಾವು ಸಿದ್ಧರಿದ್ದೇವೆ ಎಂದರು. ಶಾಸಕ ನಾರಾ ಭರತ್ ರೆಡ್ಡಿ ಅವರು ₹10 ಲಕ್ಷ ದೇಣಿಗೆ ನೀಡುವುದಾಗಿ ಘೋಷಿಸಿದರು. ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ ಅವರು ಬದಲಾಗುತ್ತಿರುವ ಯುವಕರ ಆದ್ಯತೆ ಹಾಗೂ ದುಶ್ಚಟಗಳಿಂದ ತಪ್ಪಿಸಲು ಬಳ್ಳಾರಿಯ ರಾಮಕೃಷ್ಣ ಮಿಷನ್‌ನ ಪಾತ್ರ ಕುರಿತು ತಿಳಿಸಿದರು.

ಮೈಸೂರಿನ ರಾಮಕೃಷ್ಣ ವಿದ್ಯಾಶಾಲೆ ಮಾದರಿಯಲ್ಲಿ ಬಳ್ಳಾರಿಯಲ್ಲೂ ಶಾಲೆ ಆರಂಭಿಸುವಂತಾಗಲಿ, ಬೇಕಾದ ನೆರವು ನೀಡಲಾಗುವುದು ಎಂದು ಮಾಜಿ ಶಾಸಕ ಜಿ. ಸೋಮಶೇಖರ ರೆಡ್ಡಿ ಮನವಿ ಮಾಡಿದರು.

ಮೇಯರ್ ಪಿ. ಗಾದೆಪ್ಪ ಮಾತನಾಡಿ, ರಾಮಕೃಷ್ಣ ಮಿಷನ್ ನ ಆಶ್ರಮ ಇರುವ ಈ ಹಿಂದೆಯೇ ನಾಮಕರಣಗೊಂಡಿರುವ ರಸ್ತೆಗೆ ಶ್ರೀರಾಮಕೃಷ್ಣ ವಿವೇಕಾನಂದ ರಸ್ತೆಗೆ ನಾಮಫಲಕ ಅಳವಡಿಸುವುದಾಗಿ ಭರವಸೆ ನೀಡಿದರು. ಶ್ರೀರಾಮಕೃಷ್ಣ ವಿವೇಕಾನಂದ ಕೇಂದ್ರದ ಅಧ್ಯಕ್ಷ ಶ್ರೀಧರ ಬೋನಗೇರಿ, ಕಾರ್ಯದರ್ಶಿ ಜಗನ್ನಾಥ, ಪೃಥ್ವಿರಾಜ್ ಭೂಪಾಲ್ ಸೇರಿದಂತೆ ಆಶ್ರಮದ ಭಕ್ತರು ಉಪಸ್ಥಿತರಿದ್ದರು. ಚಿಲ್ಕರಾಯಿ ಎರಿಸ್ವಾಮಿ, ರಾಜಶೇಖರ್ ಹಾಗೂ ಗಡಗಿ ರಾಕೇಶ್ ಅವರು ಕಾರ್ಯಕ್ರಮ ನಿರ್ವಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ವ ಜನಾಂಗದ ಏಳ್ಗೆಗೆ ಶ್ರಮಿಸುವ ರಾಜ್ಯ ಸರ್ಕಾರ
ಅಶಿಸ್ತು ಮುಂದುವರೆಸಿದರೆ ಸೂಕ್ತ ಕ್ರಮ