ಮಕ್ಕಳಿಗೆ ಆಸ್ತಿಯೇ ಶ್ರೇಷ್ಠವಲ್ಲ. ಇದರ ಬದಲಿಗೆ ಸೂಕ್ತವಾದ ಬದುಕು ಕಲಿಸಿ ಎಂದು ನಿವೃತ್ತ ಪ್ರಾಂಶುಪಾಲ ಮಲ್ಲೇಶ್ ಗೌಡ ಹೇಳಿದರು.
ಕನ್ನಡಪ್ರಭ ವಾರ್ತೆ ಶನಿವಾರಸಂತೆ
ಮಕ್ಕಳಿಗೆ ಆಸ್ತಿಯೇ ಶ್ರೇಷ್ಠವಲ್ಲ ಇದರ ಬದಲಿಗೆ ಮಕ್ಕಳಿಗೆ ಸೂಕ್ತವಾದ ಸಂಸ್ಕಾರಯುಕ್ತ ಬದುಕನ್ನು ಕಲಿಸಿ ಎಂದು ಹಾಸನದ ನಿವೃತ್ತ ಪ್ರಾಂಶುಪಾಲ ಮಲ್ಲೇಶ್ ಗೌಡ ಅಭಿಪ್ರಾಯ ಪಟ್ಟರು.
ಅವರು ಇಲ್ಲಿಗೆ ಸಮೀಪದ ಹಾರೋಹಳ್ಳಿ, ತೊಯಳ್ಳಿ, ಗಂಗನಹಳ್ಳಿ, ಹಾಲ್ಕೆನೆ ಗ್ರಾಮಸ್ಥರು ನೂತನವಾಗಿ ನಿರ್ಮಿಸಿರುವ ಶ್ರೀ ವೆಂಕಟರಮಣ ದೇವಸ್ಥಾನದ ಪುನರ್ ಪ್ರತಿಷ್ಠಾಪನಾ ಪೂಜಾ ಮಹೋತ್ಸವದ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪೋಷಕರು ತಮ್ಮ ಮಕ್ಕಳಿಗೆ ಆಸ್ತಿ-ಪಾಸ್ತಿ ಮಾಡಿಕೊಡುವುದಕ್ಕಿಂತ ಉತ್ತಮ ಶಿಕ್ಷಣ, ಸಂಸ್ಕಾರ, ವಿನಯತೆ ಸಂಸ್ಕಾರಯುತ ಜೀವನ ನಡೆಸುವ ಮೌಲ್ಯಗಳನ್ನು ಕಲಿಸಿಕೊಡಬೇಕು. ಆಸ್ತಿ ಹಣ ಸಂಪಾದನೆಕ್ಕಿಂತ ವಿದ್ಯೆ, ವಿನಯತೆ, ಸಂಸ್ಕಾರವೇ ಶ್ರೇಷ್ಠವಾದದ್ದು ಎಂದರು.
ಸಮಾಜದಲ್ಲಿ ಶಾಂತಿ ಮತ್ತು ನೆಮ್ಮದಿ ಬದುಕು ಸಾಗಿಸಲು ದೇಗುಲ ಧಾರ್ಮಿಕ ಕೇಂದ್ರಗಳು ಬೇಕಾಗುತ್ತದೆ. ಅದೇ ರೀತಿಯಲ್ಲಿ ಪ್ರತಿಯೊಬ್ಬರು ಆಧ್ಯಾತ್ಮಿಕ ಚಿಂತನೆ ಬೆಳೆಸಿಕೊಂಡರೆ ತನ್ನ ಜೀವನದಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಕಾಣಬಹುದು ಎಂದರು.
ದೇವಸ್ಥಾನ ಸಮಿತಿ ಅಧ್ಯಕ್ಷ ಕೇಶವಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪ್ರಮುಖರಾದ ಕಳಲೆ ಕೃಷ್ಣೇಗೌಡ, ಮರೀಗೌಡ, ಬ್ಯಾಡಗೊಟ್ಟ ಗ್ರಾ.ಪಂ.ಸದಸ್ಯ ಬಿ.ಕೆ.ದಿನೇಶ್, ರೇಣುಕಾ, ಭಾರತಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಇ.ಇ.ದಯಾನಂದ್, ಹಾರೋಹಳ್ಳಿ ಎಚ್.ಟಿ.ಗಿರೀಶ್, ತಮ್ಮಯ್ಯ, ಮೂದರವಳ್ಳಿ ಗುರುಲಿಂಗಯ್ಯ, ವೆಂಕಟೇಶ್ ಮೂರ್ತಿ, ಪ್ರವೀಣ್ ಮುಂತಾದವರು ಭಾಗವಹಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.