ಶೃಂಗೇರಿ ಆರಿದ್ರ ಮಳೆ ಆರ್ಭಟ: ನೆಮ್ಮಾರು ಬಳಿ ಗುಡ್ಡಕುಸಿತ ಸಂಚಾರ ಅಸ್ತವ್ಯಸ್ತ.

KannadaprabhaNewsNetwork | Published : Jun 25, 2025 11:47 PM

ಶೃಂಗೇರಿ, ತಾಲೂಕಿನಾದ್ಯಂತ ಬುಧವಾರವೂ ಆರಿದ್ರ ಮಳೆ ಹಗಲಿಡೀ ಎಡಬಿಡದೆ ಅಬ್ಬರಿಸಿತು. ಬೆಳಿಗ್ಗೆಯಿಂದಲೂ ಒಂದೇ ಸಮನೆ ಮಳೆ ಸುರಿಯುತ್ತಿದ್ದರಿಂದ ಶೃಂಗೇರಿ ಮಂಗಳೂರು ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 169ರ ನೆಮ್ಮಾರು ಸಾಲ್ಮರ ಬಳಿ ಮತ್ತೆ ಗುಡ್ಡಕುಸಿದು ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು.

- ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ತುಂಗೆ,ಶಾಲೆಗಳಿಗೆ ರಜೆ

ಕನ್ನಡಪ್ರಭ ವಾರ್ತೆ, ಶೃಂಗೇರಿ

ತಾಲೂಕಿನಾದ್ಯಂತ ಬುಧವಾರವೂ ಆರಿದ್ರ ಮಳೆ ಹಗಲಿಡೀ ಎಡಬಿಡದೆ ಅಬ್ಬರಿಸಿತು. ಬೆಳಿಗ್ಗೆಯಿಂದಲೂ ಒಂದೇ ಸಮನೆ ಮಳೆ ಸುರಿಯುತ್ತಿದ್ದರಿಂದ ಶೃಂಗೇರಿ ಮಂಗಳೂರು ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 169ರ ನೆಮ್ಮಾರು ಸಾಲ್ಮರ ಬಳಿ ಮತ್ತೆ ಗುಡ್ಡಕುಸಿದು ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು.

ಗುಡ್ಡ ರಸ್ತೆಯ ಮೇಲೆ ಬಿದ್ದ ಪರಿಮಾಣ ಶೃಂಗೇರಿ- ಕಾರ್ಕಳ ರಸ್ತೆ ಸಂಪರ್ಕ ಬಂದ್ ಆಯಿತು. ಮಳೆಯ ನಡುವೆಯೂ ಜೆಸಿಬಿಯಿಂದ ಕಾರ್ಯಾಚರಣೆ ನಡೆಸಿದ್ದರಿಂದ ಸಂಚಾರ ಪುನರಾಂಭಗೊಂಡಿತು.

ಮಂಗಳವಾರದಿಂದ ಸುರಿದ ಭಾರೀ ಗಾಳಿ ಮಳೆಯಿಂದ ಬುಧವಾರವೂ ತಾಲೂಕಿನ ಕೆಲ ಶಾಲೆಗಳಿಗೆ ರಜೆ ನೀಡಲಾಗಿತ್ತು. ಆದರೆ ಸರ್ಕಾರಿ ಶಾಲೆಗಳಿಗೆ ರಜೆ ನೀಡಿರಲಿಲ್ಲ. ಪಶ್ಚಿಮಘಟ್ಟಗಳ ತಪ್ಪಲಲ್ಲಿರುವ ಎಸ್.ಕೆ.ಬಾರ್ಡರ್, ಕೆರೆಕಟ್ಟೆ, ನರಸಿಂಹ ಪರ್ವತಗಳ ತಪ್ಪಲಿನ ಕಿಗ್ಗಾ ಸುತ್ತಮುತ್ತಲ ಪ್ರದೇಶಗಳಲ್ಲಿ ಮಂಗಳವಾರದಿಂದ ಎಡಬಿಡದೆ ಭಾರೀ ಮಳೆ ಸುರಿಯುತ್ತಿ ರುವುದರಿಂದ ತುಂಗಾ, ನಂದಿನಿ, ನಳಿನಿ ನದಿಗಳು ತುಂಬಿ ಅಪಾಯ ಮಟ್ಟಮೀರಿ ಹರಿಯುತ್ತಿದೆ. ತಗ್ಗು ಪ್ರದೇಶಗಳು, ಹೊಲಗೆದ್ದೆಗಳು ಜಲಾವೃತವಾಗಿ ತುಂಗಾ ನದಿಯಲ್ಲಿ ಪ್ರವಾಹದ ಭೀತಿ ಉಂಟಾಗಿದೆ.

ಶ್ರೀಮಠದ ತುಂಗಾ ನದಿ ತೀರದ ಕಪ್ಪೆಶಂಕರ ದೇವಾಲಯ ಮುಳುಗಿದ್ದು, ಪ್ರವಾಹ ಪೀಡಿತ ಗಾಂಧಿ ಮೈದಾನ, ಭಾರತೀ ಬೀದಿ ಕೆವಿಆರ್ ವೃತ್ತ ಸಂಪರ್ಕ ಬೈಪಾಸ್ ರಸ್ತೆ ಸಮೀಪದ ತುಂಗಾ ನದಿಯಲ್ಲಿ ಮಳೆ ಮುಂದುವರಿದಲ್ಲಿ ಪ್ರವಾಹ ಸಾಧ್ಯತೆಗಳಿವೆ. ಬುಧವಾರ ಮಳೆಯೊಂದಿಗೆ ಭಾರೀ ಗಾಳಿಯೂ ಜೋರಾಗಿದ್ದು ಮರಗಳು ರಸ್ತೆ, ವಿದ್ಯುತ್ ಲೈನ್ ಮೇಲೆ ಉರುಳಿ ಬೀಳುತ್ತಿವೆ. ಶೃಂಗೇರಿ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಸಂಜೆಯವೆಗೂ ಮಳೆ ಆರ್ಭಟ ಮುಂದುವರಿದಿತ್ತು.

25 ಶ್ರೀ ಚಿತ್ರ 1-

ಶೃಂಗೇರಿ ತಾಲೂಕಿನಲ್ಲಿ ಭಾರಿ ಮಳೆ ಸುರಿಯುತ್ತಿದ್ದರಿಂದ ಬುಧವಾರ ಮಂಗಳೂರು ಶೃಂಗೇರಿ ಸಂಪರ್ಕ ರಾ.ಹೆ.169 ರ ನೆಮ್ಮಾರು ಬಳಿ ಗುಡ್ಡಕುಸಿದಿದ್ದರಿಂದ ಜೆಸಿಬಿ ಕಾರ್ಯಾಚಣೆ ನಡೆಸಿ ತೆರವುಗೊಳಿಸುತ್ತಿರುವುದು.