ಇಂದಿನಿಂದ ನಾಲ್ಕು ದಿನಗಳ ಕಾಲ ಸಂಭ್ರಮದ ಶ್ರೀರಂಗಪಟ್ಟಣ ದಸರಾ

KannadaprabhaNewsNetwork |  
Published : Sep 25, 2025, 01:00 AM IST
24ಕೆಎಂಎನ್ ಡಿ27,28,29,30,31 | Kannada Prabha

ಸಾರಾಂಶ

ಸೆ.25ರಿಂದ 28ರವರೆಗೆ 4 ದಿನಗಳ ಕಾಲ ನಡೆಯುವ ಶ್ರೀರಂಗಪಟ್ಟಣ ದಸರಾಗೆ ಚಲನಚಿತ್ರ ನಿರ್ದೇಶಕ ಟಿ.ಎಸ್. ನಾಗಾಭರಣ ಕಿರಂಗೂರು ಬನ್ನಿ ಮಂಟಪದ ಬಳಿ ಮಧ್ಯಾಹ್ನ 3 ಗಂಟೆಗೆ ಶ್ರೀಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡುವ ಮೂಲಕ ವಿಧ್ಯುಕ್ತವಾಗಿ ಚಾಲನೆ ನೀಡಲಿದ್ದಾರೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಶ್ರೀರಂಗಪಟ್ಟಣ ದಸರಾ ಅಂಗವಾಗಿ ಸೆ.25ರಂದು ನಡೆಯುವ ಅಂಬಾರಿ ಮೆರವಣಿಗೆಗೆ ಮೈಸೂರು ಅರಮನೆಯಿಂದ ಆಗಮಿಸಿದ ಗಜಪಡೆಗಳಿಗೆ ಶಾಸಕ ರಮೇಶ್‌ ಬಂಡಿಸಿದ್ದೇಗೌಡ ಪೂಜೆ ಸಲ್ಲಿಸಿ ಸಾಂಪ್ರದಾಯಕವಾಗಿ ಬುಧವಾರ ಬರ ಮಾಡಿಕೊಂಡರು.

ಮಹೇಂದ್ರ, ಲಕ್ಷ್ಮಿ ಹಾಗೂ ಕಾವೇರಿ ಆನೆಗಳು ಆಗಮಿಸಿದ್ದು, ಶ್ರೀರಂಗ ವೇದಿಕೆ ಬಳಿ ಶಾಸಕರು, ಅಧಿಕಾರಿಗಳ ಸಮ್ಮುಖದಲ್ಲಿ ಸ್ವಾಗತಿಸಲಾಯಿತು. ಬಳಿಕ ಶ್ರೀರಂಗನಾಥಸ್ವಾಮಿ ದೇಗುಲಕ್ಕೆ ತೆರಳಿದ ಗಜಪಡೆಗಳು ದೇವಾಲಯದ ಪ್ರಧಾನ ಅರ್ಚಕ ವಿಜಯ ಸಾರಥಿ ದೇವಾಲಯದ ಸಂಪ್ರದಾಯದಂತೆ ಪೂಜೆ ಸಲ್ಲಿಸಿದರು.

ನಂತರ ದೇವಾಲಯದ ಪರಾಂಗಣದ ಸುತ್ತಲೂ ಪ್ರದಕ್ಷಣೆ ನಡೆಸಿದರು. ನಂತರ ದೇವಾಲಯದ ಬಲ ಭಾಗದ ಕಲ್ಯಾಣಿಯಲ್ಲಿ ನೀರು ಕುಡಿದ ಆನೆಗಳು ದಣಿವು ಹಾರಿಸಿಕೊಂಡವು. ಗಜಪಡೆಗಳೊಂದಿಗೆ ಮಾವುತರು ಹಾಗೂ ಕಾವಾಡಿಗರು ಆಗಮಿಸಿದ್ದರು. ಅಂಬಾರಿ ಮೆರವಣಿಗೆಗೆ ಸಿದ್ಧತೆ ಕೈಗೊಂಡಿದ್ದಾರೆ.

ಈ ವೇಳೆ ಡೀಸಿ ಡಾ.ಕುಮಾರ್, ಎಡೀಸಿ ಶಿವಾನಂದ ಮೂರ್ತಿ, ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಎಎಸ್ಪಿ ತಿಮ್ಮಯ್ಯ, ಎಸಿ ಶ್ರೀನಿವಾಸ್, ತಹಸೀಲ್ದಾರ್ ಚೇತನಾ ಯಾದವ್, ಡಿವೈಎಸ್ಪಿ ಶಾಂತಮಲ್ಲಪ್ಪ, ತಾಪಂ ಇಒ ವೇಣು, ಶ್ರೀರಂಗನಾಥಸ್ವಾಮಿ ದೇವಾಲಯದ ಇಒ ಉಮಾ, ದೇವಾಲಯದ ಸಮಿತಿ ಅಧ್ಯಕ್ಷ ಸೋಮಶೇಖರ್, ನಿಮಿಷಾಂಬ ಸಮಿತಿ ಅಧ್ಯಕ್ಷ ದಯಾನಂದ, ಪುರಸಭೆ ಪ್ರಭಾರ ಅಧ್ಯಕ್ಷ ಎಂ.ಎಲ್ ದಿನೇಶ್, ಪುರಸಭೆ ಮುಖ್ಯಾಧಿಕಾರಿ ಸತೀಶ ಸೇರಿದಂತೆ ಇತರರು ಇದ್ದರು.

ಇಂದು ನಾಗಭರಣರಿಂದ ವಿದ್ಯುಕ್ತ ಚಾಲನೆ:

ಸೆ.25ರಿಂದ 28ರವರೆಗೆ 4 ದಿನಗಳ ಕಾಲ ನಡೆಯುವ ಶ್ರೀರಂಗಪಟ್ಟಣ ದಸರಾಗೆ ಚಲನಚಿತ್ರ ನಿರ್ದೇಶಕ ಟಿ.ಎಸ್. ನಾಗಾಭರಣ ಕಿರಂಗೂರು ಬನ್ನಿ ಮಂಟಪದ ಬಳಿ ಮಧ್ಯಾಹ್ನ 3 ಗಂಟೆಗೆ ಶ್ರೀಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡುವ ಮೂಲಕ ವಿಧ್ಯುಕ್ತವಾಗಿ ಚಾಲನೆ ನೀಡಲಿದ್ದಾರೆ.

ಮೈಸೂರು-ಬೆಂಗಳೂರು ಹೆದ್ದಾರಿ ಬಳಿಯ ಬನ್ನಿಮಂಟಪದ ಸಿದ್ಧತೆಗಳು ಸಹ ಭರದಿಂದ ಸಾಗಿದೆ. ದಸರಾ ಆರಂಭಕ್ಕೂ ಮುನ್ನ ದಸರಾ ಪೂರ್ವ ಸಿದ್ಧತಾ ಕಾಮಾಗಾರಿಯನ್ನು ಜಿಲ್ಲಾಡಳಿತ ನಡೆಸುವ ಮೂಲಕ ಶ್ರೀರಂಗಪಟ್ಟಣವನ್ನು ಅಲಂಕೃತಗೊಳಿಸುತ್ತಿದೆ.

ಕಿರಂಗೂರು ಬನ್ನಿ ಮಂಟಪದಲ್ಲಿ ಮಧ್ಯಾಹ್ನ 12 ರಿಂದ ಜ್ಯೋತಿಷಿ ಡಾ.ಭಾನುಪ್ರಕಾಶ್ ಶರ್ಮಾ ಅವರ ನೇತೃತ್ವದಲ್ಲಿ ವೈದಿಕರ ತಂಡ ದಸರಾ ಮಹೋತ್ಸವದ ಶ್ರೀಚಾಂಮುಂಡೇಶ್ವರಿ ಉತ್ಸವ ಮೂರ್ತಿಗೆ ವಿಶೇಷ ಅಲಂಕಾರ ಹಾಗೂ ಪೂಜಾ ಕಾರ್ಯವನ್ನು ನೆರೆವೇರಿಸುವರು.

ಬಳಿಕ 3 ಗಂಟೆಗೆ ಚಾಮುಂಡೇಶ್ವರಿ ವಿಗ್ರಹ ಹೊತ್ತ ಅಂಬಾರಿಗೆ ಚಲನಚಿತ್ರ ನಿರ್ದೇಶಕ ಟಿ.ಎಸ್ ನಾಗಾಭರಣ ಪುಷ್ಪಾರ್ಚನೆ ಮಾಡುವರು. ನಂತರ ಬನ್ನಿಮಂಟಪದಿಂದ ಕಿರಂಗೂರು ಗ್ರಾಮ, ಮೈಸೂರು-ಬೆಂಗಳೂರು ಹೆದ್ದಾರಿ ಮೂಲಕ ಪಟ್ಟಣದ ಪ್ರಮುಖ ಬೀದಿಯಲ್ಲಿ ದಸರಾ ಅಂಬಾರಿ ಮೆರವಣಿಗೆಗೆ ಚಾಲನೆ ದೊರೆಯಲಿದೆ.

ಮೆರವಣಿಗೆಯಲ್ಲಿ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ, ಸಚಿವರ ಆಪ್ತ ಕಾರ್ಯದರ್ಶಿ ಹೆಚ್.ಜಿ ಪ್ರಭಾಕರ್, ಸ್ಥಳೀಯ ಶಾಸಕ ಹಾಗೂ ಸೆಸ್ಕ್ ಅಧ್ಯಕ್ಷ ರಮೇಶಬಾಬು ಬಂಡಿಸಿದ್ದೇಗೌಡ ಸೇರಿದಂತೆ ಇತರೆ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಅಂಬಾರಿ ಮೆರವಣಿಗೆ ಹೆದ್ದಾರಿಯಿಂದ ಪಟ್ಟಣದ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ಸಾಗಿ ಶ್ರೀರಂಗನಾಥ ಮೈದಾನದಲ್ಲಿರುವ ವೇದಿಕೆ ತಲುಪಲಿದೆ.

ನಾಡದೇವತೆ ಶ್ರೀ ಚಾಮುಂಡೇಶ್ವರಿ ವಿಗ್ರಹ ಹೊತ್ತ ಗಜಪಡೆ ಸಾಗುವ ಕಿರಂಗೂರು ಗ್ರಾಮದ ರಸ್ತೆಯನ್ನು ದುರಸ್ಥಿಗೊಳಿಸಿ ಡಾಂಬಾರ್ ಹಾಕಲಾಗಿದೆ. ಜೊತೆಗೆ ರಸ್ತೆ ಇಕ್ಕೆಲಗಳಲ್ಲಿ ಮೆರವಣಿಗೆ ಸಾಗುವ ರಸ್ತೆ ಹಾಗೂ ಮೈ-ಬೆಂ ಹೆದ್ದಾರಿಯನ್ನು ಸಂಪೂರ್ಣ ಶುಚಿಗೊಳಿಸಿ ಬಣ್ಣ ಬಳಿದು ಹಸಿರು ತೋರಣಗಳು ಹಾಗೂ ವಿದ್ಯುತ್ ದೀಪಗಳಿಂದ ಶೃಂಗಾರಿಸಲಾಗಿದೆ. ತಾಲೂಕಿನ ಕಿರಂಗೂರು ಸೇರಿದಂತೆ ಪಟ್ಟಣವನ್ನು ಪೌರಕಾರ್ಮಿಕರು ಕಳೆದ ಮೂರ್‍ನಾಲ್ಕು ದಿನಗಳಿಂದ ಸ್ವಚ್ಚತಾ ಕಾರ್ಯಗಳಲ್ಲಿ ತೊಡಗಿದ್ದು, ಸಂಪೂರ್ಣವಾಗಿ ಸ್ವಚ್ಚಗೊಳಿಸಿದ್ದಾರೆ.

ವಿದ್ಯುತ್ ದೀಪಾಲಂಕಾರ:

ಸೆಸ್ಕಾಂ ಇಲಾಖೆಯಿಂದ ಕಿರಂಗೂರು ಗ್ರಾಮದಿಂದ ಪಶ್ಚಿಮವಾಹಿನಿ ವರೆವಿಗೂ ಹೆದ್ದಾರಿಯನ್ನು ಸಂಪೂರ್ಣ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುವಂತೆ ಮಾಡಿದೆ. ಪಟ್ಟಣದ ಕೋಟೆ ಪ್ರವೇಶದ್ವಾರ, ಶ್ರೀರಂಗನಾಥ ಮೈದಾನ, ಕುವೆಂಪು ವೃತ್ತ, ವೆಲ್ಲೆಸ್ಲಿ ಸೇತುವೆ, ಗಂಜಾಂ ರಸ್ತೆ, ಪಟ್ಟಣದ ಮುಖ್ಯ ಬೀದಿ, ಅಂಬೇಡ್ಕರ್ ವೃತ್ತ, ಶ್ರೀರಂಗನಾಥ ದೇವಾಲಯದ ಗಂಡು ಬೇರುಂಡ ವೃತ್ತ ಸೇರಿದಂತೆ ಇತರೆಡೆಗಳಲ್ಲಿ ಸ್ವಾಗತ ಕಮಾನುಗಳು ಅಳವಡಿಸಿ ವಿದ್ಯುತ್ ದೀಪಾಲಂಕಾರ ಮಾಡುವ ಮೂಲಕ ಐತಿಹಾಸಿಕ ಪಟ್ಟಣ ಬಣ್ಣಬಣ್ಣದ ದೀಪಗಳಿಂದ ಜಗಮಗಿಸುವಂತೆ ಮಾಡಲಾಗಿದೆ.

ಈ ಬಾರಿ ದಸರಾ ಕಾರ್ಯಕ್ರದಲ್ಲಿ ಸ್ಥಳೀಯರಿಗೆ ಹೆಚ್ಚಿನ ಅವಕಾಶ ನೀಡಲಾಗಿದೆ. ಸಾಂಸ್ಕೃತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಸ್ಥಳೀಯ ಕಲಾವಿದರು ಸೇರಿದಂತೆ ಹೆಸರಾಂತ ಚಲನಚಿತ್ರ ಗಾಯಕರು, ಕಿರುತೆರೆ ನಟರು ಹಾಗೂ ಹಿರಿಯ ಕಲಾವಿದರಿಂದ ವೇದಿಕೆಯಲ್ಲಿ ನಡೆಯುವ 4ದಿನಗಳ ಕಾರ್ಯಕ್ರಮದಲ್ಲಿ ಭಾಗವಸಲು ಅವಕಾಶ ನೀಡಲಾಗಿದೆ.

ಸ್ಥಳೀಯ ಗ್ರಾಮಗಳಲ್ಲಿ ತಯಾರಿಸುವ ಸಿದ್ಧ ಉಡುಪುಗಳು, ಮೈಸೂರು ಸಿಲ್ಕ್ ಡಿಜೈನರ್ ಸ್ಯಾರಿ, ಹಾಗೂ ಕೊಡಿಯಾಲದ ನೇಗೆಯವರು ತಯಾರಿಸುವ ಬಟ್ಟೆಗಳ ಪ್ರದರ್ಶನ, ಈಗೇ ಸ್ಥಳೀಯರಿಂದ ತಯಾರಾಗುವ ಕುಲ ಕಸಬುಗಳ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ದಸರಾ ಮೆರವಣಿಗೆ ಬಳಿಕ ಕ್ರೀಡೆಗಳು ಸೇರಿದಂತೆ ಸಾಂಸ್ಕೃತಿಕ ಹಾಗೂ ಮನೋರಂಜನಾ ಕಾರ್ಯಕ್ರಮಗಳು ಆರಂಭವಾಗುವ ಶ್ರೀರಂಗನಾಥ ಮೈದಾನದಲ್ಲಿ ಬೃಹತ್ ವೇದಿಕೆ ಸಿದ್ದತೆ ಪೂರ್ಣಗೊಂಡಿದ್ದು, ಜಿಲ್ಲಾಡಳಿತ ನೇತೃತ್ವದಲ್ಲಿ ಕಾರ್ಯಕರ್ತರು ಹಗಲು - ರಾತ್ರಿ ಕಾರ್ಯ ನಿರ್ವಸುತ್ತಿದ್ದಾರೆ. ಶಾಸಕರು, ವಿವಿಧ ಇಲಾಖೆ ಹಿರಿಯ ಅಧಿಕಾರಿಗಳು ಸ್ಥಳದಲ್ಲೆ ಮೊಕ್ತಾಂ ಹೂಡಿ ಅಗತ್ಯ ಕ್ರಮ ಕೈಗೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

PREV

Recommended Stories

ಪಾಲಿಕೆಗಳ ಚುನಾವಣೆ ಮುಗಿವವರೆಗೆ ಬೆಂಗಳೂರಲ್ಲಿ ಮತಪಟ್ಟಿ ಪರಿಷ್ಕರಣೆ ಮುಂದೂಡಿ : ಕೇಂದ್ರ ಆಯುಕ್ತರಿಗೆ ಪತ್ರ
ಡ್ರಾಪ್‌ ನೆಪದಲ್ಲಿ ಗುತ್ತಿಗೆದಾರನ ದರೋಡೆ ಮಾಡಿದ್ದ ನಾಲ್ವರ ಬಂಧನ