ಅರ್ಥಪೂರ್ಣತೆ ಕಳೆದುಕೊಂಡ ಶ್ರೀರಂಗಪಟ್ಟಣ ದಸರಾ..!

KannadaprabhaNewsNetwork | Published : Oct 7, 2024 1:34 AM

ಕಳೆದ ಐದಾರು ವರ್ಷಗಳಿಂದ ಶ್ರೀರಂಗಪಟ್ಟಣ ದಸರಾ ಆಚರಣೆ ವೇಳೆ ವೆಲ್ಲೆಸ್ಲಿ ಸೇತುವೆ ಬಣ್ಣ ಬಣ್ಣದ ವಿದ್ಯುತ್ ದೀಪಗಳನ್ನು ಅಳವಡಿಸಿ ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ತೆರಳುವ ಪ್ರಯಾಣಿಕರನ್ನು ಆಕರ್ಷಿಸುವಂತೆ ಮಾಡಿ ಹೊಸ ಮೆರಗು ನೀಡಿತ್ತು. ಆದರೆ, ಈ ಬಾರಿ ದಸರಾ ಆಚರಣೆಯಲ್ಲಿ ಸಂಪೂರ್ಣ ನಿರ್ಲಕ್ಷ್ಯ ಮಾಡಿರುವುದು ಸ್ಥಳೀಯರಲ್ಲಿ ಬೇಸರ ಮೂಡಿಸಿದೆ.

ಎಲ್.ವಿ.ನವೀನ್ ಕುಮಾರ್

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಪಾರಂಪರಿಕ ಶ್ರೀರಂಗಪಟ್ಟಣ ದಸರಾದಲ್ಲಿ ಹಲವು ವಿಶೇಷತೆಗಳನ್ನು ಈ ಬಾರಿ ಕೈ ಬಿಟ್ಟಿದ್ದು, ಜನರ ನಿರೀಕ್ಷಿತ ಮಟ್ಟದಲ್ಲಿ ಕಾಣದ ಹಿನ್ನೆಲೆಯಲ್ಲಿ ಐತಿಹಾಸಿಕ ಹಿನ್ನೆಲೆ ಹೊಂದಿರುವ ದಸರಾ ತನ್ನ ಅರ್ಥಪೂರ್ಣತೆ ಕಳೆದುಕೊಂಡಂತೆ ಕಾಣುತ್ತಿದೆ.

ಸುಮಾರು 240 ವರ್ಷಗಳ ಹಳೆಯದಾದ ಐತಿಹಾಸಿಕ ವೆಲ್ಲೆಸ್ಲಿ ಸೇತುವೆಗೆ ಯಾವುದೇ ವಿದ್ಯುತ್ ದೀಪ ಅಳವಡಿಸದೆ ಈ ಬಾರಿಯ ಶ್ರೀರಂಗಪಟ್ಟಣ ದಸರಾ ಆಚರಣೆಯಲ್ಲಿ ಜಿಲ್ಲಾ ಹಾಗೂ ತಾಲೂಕು ಆಡಳಿತದ ನಿರ್ಲಕ್ಷ್ಯ ಮಾಡಿದ ಪರಿಣಾಮ ವೆಲ್ಲೆಸ್ಲಿ ಸೇತುವೆ, ಬಂತೇರಿ ಕಗ್ಗತ್ತಲಿನಿಂದ ಕೂಡಿದೆ.

ಕಳೆದ ಐದಾರು ವರ್ಷಗಳಿಂದ ಶ್ರೀರಂಗಪಟ್ಟಣ ದಸರಾ ಆಚರಣೆ ವೇಳೆ ವೆಲ್ಲೆಸ್ಲಿ ಸೇತುವೆ ಬಣ್ಣ ಬಣ್ಣದ ವಿದ್ಯುತ್ ದೀಪಗಳನ್ನು ಅಳವಡಿಸಿ ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ತೆರಳುವ ಪ್ರಯಾಣಿಕರನ್ನು ಆಕರ್ಷಿಸುವಂತೆ ಮಾಡಿ ಹೊಸ ಮೆರಗು ನೀಡಿತ್ತು. ಆದರೆ, ಈ ಬಾರಿ ದಸರಾ ಆಚರಣೆಯಲ್ಲಿ ಸಂಪೂರ್ಣ ನಿರ್ಲಕ್ಷ್ಯ ಮಾಡಿರುವುದು ಸ್ಥಳೀಯರಲ್ಲಿ ಬೇಸರ ಮೂಡಿಸಿದೆ.

ಕೋವಿಡ್ ಸಮಯದಲ್ಲಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳ ಕೇಂದ್ರ ಬಿಂದುವಾಗಿದ್ದ ಐತಿಹಾಸಿಕ ಬತ್ತೇರಿಯು ಸಹ ನಿರ್ಲಕ್ಷ್ಯಕ್ಕೆ ಒಳಗಾಗಿದೆ.

ವಿಜಯನಗರದ ಕಾಲದ ಸುಮಾರು 100 ಅಡಿ ಎತ್ತರದ ಐತಿಹಾಸಿಕ ಬತ್ತೇರಿ ಸ್ಥಳವನ್ನು ಕೋವಿಡ್ ಸಮಯದ ದಸರಾ ವೇಳೆ ವಿದ್ಯುತ್ ಅಲಂಕಾರದಿಂದ ಕಂಗೊಳಿಸುವಂತೆ ಮಾಡಿ ಸಂಗೀತ ರಸ ಸಂಜೆ ಕಾರ್ಯಕ್ರಮವನ್ನು ಈ ಸ್ಥಳದಲ್ಲೇ ಆಯೋಜನೆ ಮಾಡುವ ಮೂಲಕ ಜನರನ್ನು ಆಕರ್ಷಿಸುವ ಜೊತೆಗೆ ಇತಿಹಾಸ ಸೃಷ್ಟಿಸಿತ್ತು.

ಆದರೆ, ಈಗ ಸಾರ್ವಜನಿಕರು ಅತಿ ಹೆಚ್ಚಾಗಿ ಓಡಾಟ ನಡೆಸುವ ಪಟ್ಟಣದ ಮುಖ್ಯ ರಸ್ತೆ ಹಾಗೂ ಸರ್ಕಾರಿ ಕಟ್ಟಡಗಳನ್ನು ವಿದ್ಯುತ್ ಅಲಂಕಾರದಿಂದ ಸಿಂಗರಿಸಲಾಗಿದೆ. ಇತಿಹಾಸ ಹಿನ್ನೆಲೆಯುಳ್ಳ ಈ ಎರಡು ಸ್ಥಳವನ್ನು ಕಡೆಗಣಿಸಿ ಕನಿಷ್ಠ ಪಕ್ಷ ಕೇವಲ ಒಂದೇ ಒಂದು ವಿದ್ಯುತ್ ಬಲ್ಪ್ ಹಾಕದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಕೋಟೆಗಳ ಬಗ್ಗೆ ನಿರ್ಲಕ್ಷ್ಯ:

ಪಟ್ಟಣದ ಎಲ್ಲಾ ಕೋಟೆಗಳನ್ನು ಸಹ ನಿರ್ಲಕ್ಷಿಸಿ ಕನಿಷ್ಠ ಪಕ್ಷ ಕೋಟೆಗಳ ಮೇಲ್ಬಾಗ ಹಾಗೂ ಸುತ್ತಲು ಬೆಳೆದಿದ್ದ ಗಿಡಗಂಟಿ, ಕೋಟೆ ಕೆಳಗಡೆ ಅಸುಚಿತ್ವದಿಂದ ಗಬ್ಬುನಾರುತ್ತಿರುವುದನ್ನು ಸ್ವಚ್ಛಗೊಳಿಸದೆ ತರಾತುರಿಯಲ್ಲಿ ಕೋಟೆಗಳ ಗೋಡೆ ಮೇಲೆ ಹಳೆಯ ಬಣ್ಣ-ಬಣ್ಣದ ಬಟ್ಟೆ ಹಾಕಿ ತೇಪೆ ಹಾಕಿರುವುದು ಬೇಸರ ತರಿಸಿದೆ.

ಬಿಕೋ ಎನ್ನುವ ಮಂಟಪ:

ದಸರಾ ಮೆರವಣಿಗೆವರೆಗೆ ಮಾತ್ರ ಐತಿಹಾಸಿಕ, ಪುರಾತನ ಕಿರಂಗೂರು ಬನ್ನಿಮಂಟರ ಎನ್ನುತ್ತಾರೆ. ಮೆರವಣಿಗೆ ಸಾಗಿದ ನಂತರ ಅದೇ ರಾತ್ರಿಯಿಂದಲೇ ಬನ್ನಿ ಮಂಟಪಕ್ಕೆ ವಿದ್ಯುತ್ ಅಲಂಕಾರವಿಲ್ಲದೆ ಕಗ್ಗತ್ತಲಿನಿಂದ ಕೂಡಿರುತ್ತದೆ. ಮಂಟಪ ಒಂದು ರೀತಿಯಲ್ಲಿ ಬಿಕೋ ಎನ್ನುವಂತೆ ಕಾಣುತ್ತದೆ.

ಮರೆಯಾದ ದೇಶಿ ಕ್ರೀಡೆಗಳು:

ಅಪ್ಪಟ ದೇಸಿ ಕ್ರೀಡೆಗಳಾದ ಕೆಸರುಗದ್ದೆ ಓಟ, ಕಬಡ್ಡಿ, ಸ್ಲೋ ಸೈಕಲ್ ರೇಸ್, ಜಲಕ್ರೀಡೆ ಜೊತೆಗೆ ಚೆಸ್ ಹಾಗೂ ಕರಾಟೆ ಸ್ಪರ್ಧೆ ಸೇರಿ ಹಲವು ದೇಸಿ ಕ್ರೀಡೆಗಳು ಈ ಬಾರಿ ಮರೆಯಾಗಿವೆ. ಈ ಹಿಂದಿನ ದಸರಾ ಆಚರಣೆಗಳಲ್ಲಿ ಪುರುಷ ಹಾಗೂ ಮಹಿಳೆಯರ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ, ಕೆಸರುಗದ್ದೆ ಓಟ ಸೇರಿದಂತೆ ಇತರೆ ಕ್ರೀಡೆ ಆಯೋಜಿಸಿ ಕ್ರೀಡಾಸಕ್ತರ ಗಮನ ಸೆಳೆದು ಉತ್ಸಾಹ ತುಂಬಲಾಗುತ್ತಿತ್ತು. ಆದರೆ, ಈ ಬಾರಿ ಕೇವಲ ಬೆರಳೆಣಿಕೆಯಷ್ಟು ಕ್ರೀಡೆಗಳನ್ನು ಆಯೋಜಿಸಿರುವುದರಿಂದ ಕ್ರೀಡಾಸಕ್ತರಲ್ಲಿ ಬೇಸರ ಮೂಡಿಸಿದೆ.

ಪ್ರಚಾರದ ಕೊರತೆ:

ದಸರಾ ಆಚರಣೆಗಾಗಿ ಈ ಹಿಂದೆ ಪತ್ರಿಕಾ ಜಾಹೀರಾತು ನೀಡಲಾಗುತ್ತು. ಆದರೆ, ಈ ಬಾರಿ ಪ್ರಚಾರದ ಕೊರತೆಯಿಂದಾಗಿ ಮೆರವಣಿಗೆಯಲ್ಲಿ ಜನರ ಸಂಖ್ಯೆ ಕಡಿಮೆಯಾಗಿತ್ತು. ಗ್ರಾಮೀಣ ಪ್ರದೇಶದ ಜನಸಾಮಾನ್ಯರಿಗೆ ದಸರಾ ಬಗೆಗಿನ ಸರಿಯಾದ ಮಾಹಿತಿ ಕೊರತೆಯಿಂದ ಕೇವಲ ಪಟ್ಟಣ ಹಾಗೂ ಅಕ್ಕ-ಪಕ್ಕದ ಗ್ರಾಮಗಳ ಜನರು ಮಾತ್ರ ಸೇರಿದಂತಿತ್ತು.

2024ರ ಶ್ರೀರಂಗಪಟ್ಟಣ ದಸರಾ ಆಚರಣೆಗೆ ಸರ್ಕಾರ ನೀಡಿರುವ ಅನುದಾನದ ಬಗ್ಗೆ ತಹಸೀಲ್ದಾರ್ ಪರುಶುರಾಮ್ ಸತ್ತಿಗೇರಿ ಅವರನ್ನು ಕೇಳಿದರೆ ಈ ಬಗ್ಗೆ ನನಗೆ ಮಾಹಿತಿ ಇಲ್ಲ. ಜಿಲ್ಲಾಡಳಿತದಿಂದ ಕೇಳಿ ಹೇಳುತ್ತೇನೆ ಎನ್ನುತ್ತಾರೆ. ಹಾಗಾದರೆ ದಸರಾ ಆಚರಣೆ ಪಾರದರ್ಶಕವಾಗಿ ನಡೆಯುತ್ತಿಲ್ಲವೆ ಎಂಬ ಪ್ರಶ್ನೆ ಕಾಡುತ್ತಿದೆ.

ಐತಿಹಾಸಿಕ ದಸರಾವನ್ನು ಅರ್ಥಪೂರ್ಣ, ವ್ಯವಸ್ಥಿತವಾಗಿ ಆಚರಣೆ ಮಾಡಲು ಕೋಟ್ಯಂತರ ರು. ಅನುದಾನ ಸರ್ಕಾರದಿಂದ ಬಂದಿದೆ. ಜಿಲ್ಲಾಡಳಿತ, ತಾಲೂಕು ಆಡಳಿತ, ಕ್ಷೇತ್ರದ ಶಾಸಕರು ಸಾರ್ವಜನಿಕರ ತೆರಿಗೆ ಹಣದ ರೂಪದಲ್ಲಿ ಸರ್ಕಾರ ಕೊಟ್ಟಿರುವ ಅನುದಾನ ಸಮರ್ಪಕವಾಗಿ ಬಳಕೆ ಮಾಡುತ್ತಿಲ್ಲ. ದಸರಾ ಆಚರಣೆಗಾಗಿ ಯಾವುದೇ ಸಮಿತಿ ರಚಿಸದ ಕಾರಣ ಕಾರ್ಯಕ್ರಮಗಳು ವ್ಯವಸ್ಥಿತವಾಗಿ ನಡೆಯುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಶ್ರೀರಂಗಪಟ್ಟಣ ದಸರಾ ಈ ಬಾರಿ ಒಂದು ರೀತಿಯಲ್ಲಿ ಅರ್ಥಪೂರ್ಣತೆ ಕಳೆದುಕೊಂಡಿದೆ. ಇದು ಜನತೆಗೆ ಹಾಗೂ ರೈತ ಸಮುದಾಯಕ್ಕೆ ಬೇಸರ ತರಿಸಿದೆ. ಸಾರ್ವಜನಿಕರ ಹಣ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ. ಮುಂದಿನ ದಿನದಲ್ಲಿ ದಸರಾಗೆ ಬಿಡುಗಡೆಯಾಗಿರುವ ಹಣ, ಖರ್ಚು-ವೆಚ್ಚಗಳನ್ನು ಸಾರ್ವಜನಿಕರ ಮುಂದಿಡಬೇಕು.

- ಕಿರಂಗೂರು ಪಾಪು, ರೈತ ಮುಖಂಡರು