ರಾಂ ಅಜೆಕಾರು
ಕನ್ನಡಪ್ರಭ ವಾರ್ತೆ ಕಾರ್ಕಳರಾಜ್ಯಾದ್ಯಂತ ಶುಕ್ರವಾರ ಎಸ್ಎಸ್ಎಲ್ಸಿ ಪರೀಕ್ಷೆ ಆರಂಭವಾಗಲಿದ್ದು ಕಾರ್ಕಳ ಕ್ಷೇತ್ರ ಶಿಕ್ಷಣಾಧಿಕಾರಿ ವ್ಯಾಪ್ತಿಯ ಕಾರ್ಕಳ-ಹೆಬ್ರಿ ಅವಳಿ ತಾಲೂಕುಗಳಲ್ಲಿ ಪೂರ್ವ ತಯಾರಿಗಳು ಮುಗಿದಿವೆ. ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲು ಸನ್ನದ್ಧರಾಗಿದ್ದಾರೆ.
ಕಾರ್ಕಳ ಕ್ಷೇತ್ರ ವ್ಯಾಪ್ತಿಯಲ್ಲಿ 27 ಸರ್ಕಾರಿ ಪ್ರೌಢಶಾಲೆ, 12 ಅನುದಾನಿತ ಪ್ರೌಢಶಾಲೆಗಳು, 15 ಅನುದಾನ ರಹಿತ ಪ್ರೌಢಶಾಲೆ, ತಲಾ ಒಂದು ಮೊರಾರ್ಜಿ ದೇಸಾಯಿ ಹಾಗೂ ಮೌಲಾನ ಅಜಾದ್ ಪ್ರೌಢಶಾಲೆಗಳು ಸೇರಿ ಒಟ್ಟು 56 ಪ್ರೌಢಶಾಲೆಗಳಲ್ಲಿ 2791 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.ಅಭ್ಯರ್ಥಿಗಳ ಪೈಕಿ 1513 ವಿದ್ಯಾರ್ಥಿಗಳು ಮತ್ತು 1278 ವಿದ್ಯಾರ್ಥಿನಿಯರಿದ್ದಾರೆ. 2791 ವಿದ್ಯಾರ್ಥಿಗಳು ಮೊದಲ ಬಾರಿ ಪರೀಕ್ಷೆ ಬರೆಯುವವರು. 47 ವಿದ್ಯಾರ್ಥಿಗಳು ಖಾಸಗಿಯಾಗಿ ಪರೀಕ್ಷೆ ಬರೆಯುವರಾಗಿದ್ದು , 18 ಮಂದಿ ಖಾಸಗಿ ಪುನರಾವರ್ತಿತರಿದ್ದಾರೆ.
ಪರೀಕ್ಷಾ ಕೇಂದ್ರಗಳು:ಕಾರ್ಕಳ ನಗರದಲ್ಲಿ ಒಟ್ಟು ಮೂರು ಪರೀಕ್ಷಾ ಕೇಂದ್ರಗಳನ್ನು ಕ್ಲಸ್ಟರ್ ಮಟ್ಟದಲ್ಲಿ ತೆರೆಯಲಾಗಿದೆ. ಉಳಿದ ಗ್ರಾಮಗಳನ್ನು ಒಂದುಗೂಡಿಸಿ 6 ಪರೀಕ್ಷಾ ಕೇಂದ್ರ ತೆರೆಯಲಾಗಿದ್ದು ಒಟ್ಟು 9 ಪರೀಕ್ಷಾ ಕೇಂದ್ರಗಳನ್ನು ನಿರ್ಮಾಣ ಮಾಡಲಾಗಿದೆ. ಪೆರುವಾಜೆ ಹೈಸ್ಕೂಲ್ , ಭುವನೇಂದ್ರ ಪ್ರೌಢಶಾಲೆ , ಎಸ್ವಿಟಿ ಮಹಿಳಾ ಕಾಲೇಜು , ಬೋರ್ಡ್ ಹೈಸ್ಕೂಲ್ ಕಾರ್ಕಳ, ಬೈಲೂರು ಸರಕಾರಿ ಕಾಲೇಜು, ಬಜಗೋಳಿ ಸರ್ಕಾರಿ ಕಾಲೇಜು ಕಾಲೇಜು, ನಿಟ್ಟೆ ಎನ್ಎಸ್ಎಂ ಕಾಲೇಜ್, ಬೆಳ್ಮಣ್ ಹೈಸ್ಕೂಲ್, ಹೆಬ್ರಿ ಸರ್ಕಾರಿ ಪದವಿ ಪೂರ್ವ ಕಾಲೇಜು, ಮುನಿಯಾಲು ಪದವಿ ಪೂರ್ವ ಕಾಲೇಜುಗಳಲ್ಲಿ ಕೇಂದ್ರ ತೆರೆಯಲಾಗಿದೆ.
ಅಕ್ರಮ ತಡೆಗೆ ಅಧಿಕಾರಿಗಳು ಸಿದ್ಧ:ಪರೀಕ್ಷಾ ಕೇಂದ್ರಗಳ ಮೇಲ್ವಿಚಾರಣೆಗಾಗಿ ಪರೀಕ್ಷಾ ಮಂಡಳಿಯಿಂದ ಮುಖ್ಯ ಅಧೀಕ್ಷಕರನ್ನು ನೇಮಕಮಾಡಲಾಗಿದೆ. ಪತ್ರಿಕೆ ಪಾಲಕರು, ನೋಡಲ್ ಅಧಿಕಾರಿಗಳು, ಕೊಠಡಿ ಮೇಲ್ವಿಚಾರಕರು, ಪ್ರತಿ ಸೆಂಟರ್ಗೆ ಸ್ಥಳ ಜಾಗೃತ ದಳ, ಮೊಬೈಲ್ ಸ್ವಾಧೀನ ಅಧಿಕಾರಿಗಳು , ಸ್ಥಳ ಜಾಗೃತ ದಳ, ಮೊಬೈಲ್ ಸ್ಕ್ವಾಡ್ ಗಳು , ಅನುಯಾಯಿ ಇಲಾಖೆಯ ಅಧಿಕಾರಿಗಳನ್ನು ಬಳಸಲಾಗುತ್ತಿದೆ. ಸಿಸಿ ಟಿವಿ ವ್ಯವಸ್ಥೆ ಕಲ್ಪಿಸಿಲಾಗಿದ್ದು ಎಲ್ಲಾ ಕೇಂದ್ರಗಳಿಗೂ ಪೋಲಿಸ್ ಇಲಾಖೆ ಸಹಕಾರ ನೀಡುತ್ತಿದೆ.
ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯಗಳನ್ನು ಒದಗಿಸಲಾಗಿದೆ. ರಾಜ್ಯ ಮಟ್ಟದ ಅಣಕು ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರೇರಣಾ ಶಿಬಿರ ಏರ್ಪಡಿಸಲಾಗಿದೆ. ಕೆಲವು ಶಾಲೆಗಳಲ್ಲಿ ರಾತ್ರಿ ವರೆಗೂ ಓದಿಸುವ ಕೆಲಸ ಮಾಡಲಾಗಿತ್ತು. ಈ ಬಾರಿಯೂ ಕಾರ್ಕಳ ತಾಲೂಕು ರಾಜ್ಯದಲ್ಲಿ ಮೊದಲ ಸ್ಥಾನ ಪಡೆಯುವ ಗುರಿ ನಮ್ಮದು.-ಗಿರಿಜಮ್ಮ ಎಸ್.ಆರ್., ಕಾರ್ಕಳ ಕ್ಷೇತ್ರ ಶಿಕ್ಷಣಾಧಿಕಾರಿ.ಪರೀಕ್ಷೆಯೆಂದರೆ ಭಯ ಪಡಲೇಬೇಕೆನ್ನುವ ಒತ್ತಡಕ್ಕೆ ವಿದ್ಯಾರ್ಥಿಗಳು ಒಳಗಾಗುತ್ತಿದ್ದಾರೆ. ಪೋಷಕರು ಧೈರ್ಯ ತುಂಬಿ ಪ್ರೀತಿಯಿಂದ ಓದಲು ಪೂರಕ ವಾತಾವರಣ ಕಲ್ಪಿಸಿದರೆ ಆತಂಕ ರಹಿತ ಪರೀಕ್ಷಾ ಸಿದ್ಧತೆ ಸಾಧ್ಯ. ವಿದ್ಯಾರ್ಥಿಗಳು ಟೆಲಿ ಮಾನಸ್ 14416 ಅಥವಾ 1800- 89-14416 ಕರೆ ಮಾಡಿ ಮಾಹಿತಿ ಹಂಚಿಕೊಳ್ಳಬಹುದು. ಹೆಚ್ಚು ಅಂಕ ಪಡೆಯಲು ವಿಫಲವಾದಲ್ಲಿ ದಯವಿಟ್ಟು ಮಕ್ಕಳ ಆತ್ಮವಿಶ್ವಾಸ ಮತ್ತು ಘನತೆಯನ್ನು ಕುಂದಿಸಬೇಡಿ.
-ವಿರೂಪಾಕ್ಷ ದೇವರುಮನೆ, ಮನೋವೈದ್ಯ, ಎವಿ ಬಾಳಿಗಾ ಆಸ್ಪತ್ರೆ ಉಡುಪಿ.