ಎಸ್ಎಸ್ಎಲ್‌ಸಿ ಪರೀಕ್ಷೆಗೆ ಸಿದ್ಧತೆ

KannadaprabhaNewsNetwork | Published : Mar 24, 2024 1:36 AM

ಸಾರಾಂಶ

ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಪೀಠೋಪಕರಣ, ಕುಡಿಯುವ ನೀರಿನ ವ್ಯವಸ್ಥೆ, ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶೌಚಾಲಯ ಸೇರಿದಂತೆ ಮೂಲ ವ್ಯವಸ್ಥೆಗಳನ್ನು ಮಾಡಲಾಗಿದೆ.

ಸಿದ್ದಾಪುರ: ೨೦೨೪ರ ಎಸ್ಎಸ್ಎಲ್‌ಸಿ ಪರೀಕ್ಷೆ ಮಾ. ೨೫ರಿಂದ ಆರಂಭಗೊಳ್ಳಲಿದೆ. ತಾಲೂಕಿನ ೨೩ ಪ್ರೌಢಶಾಲೆಗಳ ೧೨೩೪ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ೭ ಪರೀಕ್ಷಾ ಕೇಂದ್ರಗಳನ್ನು ಸಿದ್ಧಪಡಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್. ನಾಯ್ಕ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ವಿವರಗಳನ್ನು ನೀಡಿದ ಅವರು, ಪರೀಕ್ಷೆಯು ಮಾ. ೨೫ರಿಂದ ಏ. ೬ರ ವರೆಗೆ ನಡೆಯಲಿವೆ. ಪಟ್ಟಣದ ಎಸ್.ವಿ. ಬಾಲಕರ ಪ್ರೌಢಶಾಲೆ, ಹಾಳದಕಟ್ಟಾದ ಸರ್ಕಾರಿ ಪ್ರೌಢಶಾಲೆ, ಪ್ರಶಾಂತಿ ಪ್ರೌಢಶಾಲೆ, ಕಾನಸೂರಿನ ಕಾಳಿಕಾಭವಾನಿ ಪ್ರೌಢಶಾಲೆ, ಹೆಗ್ಗರಣಿ ವಿವೇಕಾನಂದ ಪ್ರೌಢಶಾಲೆ, ಬಿಳಗಿ ಸೀತಾರಾಮಚಂದ್ರ ಪ್ರೌಢಶಾಲೆ ಹಾಗೂ ಹಲಗೇರಿಯ ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಪರೀಕ್ಷಾ ಕೇಂದ್ರಗಳಿವೆ. ೯ ಪುನರಾವರ್ತಿತ ಹಾಗೂ ೧೨ ಖಾಸಗಿಯಾಗಿ ಪರೀಕ್ಷೆ ಕಟ್ಟಿದ ವಿದ್ಯಾರ್ಥಿಗಳೂ ಸೇರಿದಂತೆ ೧೨೩೪ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವದರು.

ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಪೀಠೋಪಕರಣ, ಕುಡಿಯುವ ನೀರಿನ ವ್ಯವಸ್ಥೆ, ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶೌಚಾಲಯ ಮುಂತಾದ ಮೂಲ ವ್ಯವಸ್ಥೆಗಳನ್ನು ಮಾಡಲಾಗಿದೆ. ಮುಖ್ಯ ಅಧೀಕ್ಷಕರ ಕೊಠಡಿ, ಪರೀಕ್ಷಾ ಕೇಂದ್ರದ ಕಾರಿಡಾರ್‌ಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಜಿಲ್ಲೆ, ರಾಜ್ಯದ ಅಧಿಕಾರಿಗಳೂ ಗಮನಿಸಬಹುದಾದಂತೆ ವೆಬ್ ವ್ಯವಸ್ಥೆಯನ್ನು ಮಾಡಲಾಗಿದೆ. ಎಲ್ಲ ವಿದ್ಯಾರ್ಥಿಗಳಿಗೂ ಪರೀಕ್ಷಾ ಸ್ಥಳದ ಕುರಿತು ಮಾಹಿತಿ ನೀಡಲಾಗಿದ್ದು, ಅನಾರೋಗ್ಯಪೀಡಿತ ವಿದ್ಯಾಥಿಗಳಿಗೆ ಪ್ರತ್ಯೇಕ ಕೊಠಡಿ, ಅಂಗವಿಕಲರಿಗೆ ನೆಲಮಟ್ಟದ ಕೊಠಡಿಗಳಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದರು.

ಒಟ್ಟೂ ೧೨೫ ಮೇಲ್ವಿಚಾರಕರಿದ್ದು ೭ ಮುಖ್ಯ ಅಧೀಕ್ಷಕರಿರುತ್ತಾರೆ. ೭ ಕಸ್ಟೋಡಿಯನ್,೭ ಸ್ಥಾನಿಕ ಜಾಗೃತ ಅಧಿಕಾರಿ, ೭ ಮೊಬೈಲ್ ಸ್ಕ್ವಾಡ್ ನಿಯೋಜಿಸಿದ್ದು, ೭ ಕಚೇರಿ ಸಹಾಯಕರೂ ಸೇರಿದಂತೆ ಒಟ್ಟೂ ೧೬೦ ಸಿಬ್ಬಂದಿ ಕಾರ್ಯನಿರ್ವಹಿಸುವರು.ಪ್ರತಿ ಕೇಂದ್ರದಲ್ಲೂ ಆರೋಗ್ಯ ಇಲಾಖೆ ಸಿಬ್ಬಂದಿ ಇರುತ್ತಾರೆ. ಈ ಬಾರಿಯೂ ಪ್ರಥಮ ಸ್ಥಾನ ಪಡೆಯಲು ಈ ಹಿಂದಿನಿಂದ ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ವಿಶೇಷ ಕಾರ್ಯಾಗಾರಗಳನ್ನು ನಡೆಸಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಹೆಚ್ಚಿನ ಗಮನ ನೀಡಲಾಗಿದೆ. ಎಲ್ಲ ಪ್ರೌಢಶಾಲೆಗಳ ವಿದ್ಯಾರ್ಥಿಗಳೂ ಹೆಚ್ಚಿನ ಅಂಕ ಪಡೆಯುವ ಭರವಸೆ ಇದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳಾದ ಸನತ್ ಕುಮಾರ, ಮಹೇಶ ಹೆಗಡೆ ಇದ್ದರು.

Share this article