ಕನ್ನಡಪ್ರಭ ವಾರ್ತೆ ಹಾಸನ
ಸಭೆಯ ಅಧ್ಯಕ್ಷತೆ ವಹಿಸಿದ್ದ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಟಿ.ವಿ. ಶಿವಾನಂದ್ ತಗಡೂರು ಉದ್ದೇಶಿಸಿ ಮಾತನಾಡುತ್ತಾ, ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾವಳಿಯನ್ನು ಹಾಸನದಲ್ಲಿ ಆಯೋಜಿಸಲು ತೀರ್ಮಾನ ಮಾಡಲಾಗಿದ್ದು, ಕಳೆದ ವರ್ಷ ಮಂಗಳೂರಿನಲ್ಲಿ ಕ್ರಿಕೆಟ್ ಪಂದ್ಯಾವಳಿಯನ್ನು ಬಹಳ ಅಚ್ಚುಕಟ್ಟಾಗಿ ಆಯೋಜನೆ ಮಾಡಲಾಗಿತ್ತು. ಅದಕ್ಕಿಂತ ಭಿನ್ನವಾಗಿ ಇಲ್ಲಿ ಕ್ರಿಕೆಟ್ ಪಂದ್ಯಾವಳಿ ಏರ್ಪಡಿಸಲು ಆಲೋಚನೆ ಮಾಡಿ ನಿರ್ಧರಿಸಲಾಗಿದೆ. ಕೊಪ್ಪಳದಲ್ಲಿ ನಡೆದ ಸಮ್ಮೇಳನದಲ್ಲಿ ಮದನ್ ಗೌಡರು ತಿಳಿಸಿದ್ದರು. ಏಪ್ರಿಲ್ ೧೨ ಮತ್ತು ೧೩ನೇ ದಿನಾಂಕದಂದು ಹಾಸನದಲ್ಲಿ ಏರ್ಪಾಡು ಮಾಡಲು ಭಾನುವಾರದಂದು ನಡೆದ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ ಎಂದರು.
ಯಾರು ಪತ್ರಕರ್ತರ ಸಂಘದ ಸದಸ್ಯರಾಗಿದ್ದಾರೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಒಂದೊಂದು ತಂಡ ಭಾಗವಹಿಸಲು ಅವಕಾಶ ಇರುತ್ತದೆ. ಪ್ರತಿಯೊಬ್ಬರ ಐಡಿ ಕಾರ್ಡ್ ಪರೀಕ್ಷೆ ಮಾಡಲಾಗುದು. ಹೊರ ಜಿಲ್ಲೆಯಿಂದ ಬರುವ ಪತ್ರಕರ್ತ ಕ್ರೀಡಾಪಟುಗಳಿಗೆ ವಸತಿ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು. ಕ್ರೀಡಾಕೂಟ ಯಶಸ್ವಿಗೆ ಜಿಲ್ಲಾ ಸಮಿತಿ, ಉಪ ಸಮಿತಿ ಮಾಡಿಕೊಂಡು ಆವರವರ ಜವಾಬ್ದಾರಿಯನ್ನು ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ವಹಿಸಿಕೊಡಲಿದೆ. ಪ್ರಾರಂಭದ ದಿನದಲ್ಲಿ ಮೊದಲ ಆಟ ಸೆಲೆಬ್ರೆಟಿ ಕ್ರಿಕೆಟ್ ನಡೆಯಲಿದೆ. ಮಂಗಳೂರಿನಲ್ಲಿಯೂ ಕೂಡ ಸೆಲೆಬ್ರೆಟಿ ಜನಪ್ರತಿನಿಧಿಗಳಿಂದ ಆಟೋಟ ನಡೆದಿತ್ತು. ಒಟ್ಟಾರೆ ರಾಜ್ಯ ಮಟ್ಟದ ಈ ಕ್ರಿಕೆಟ್ ಕ್ರೀಡಾಕೂಟವನ್ನು ಯಶಸ್ವಿಗೊಳಿಸುವಂತೆ ಕರೆ ನೀಡಿ ಮನವಿ ಮಾಡಿದರು.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂರ್ಘದ ಅಧ್ಯಕ್ಷ ಕೆ. ಎಚ್. ವೇಣುಕುಮಾರ್ ಮಾತನಾಡಿ, ರಾಜ್ಯಾಧ್ಯಕ್ಷರ ಸೂಚನೆ ಮೆರೆಗೆ ಹಾಸನದಲ್ಲಿ ಕ್ರಿಕೆಟ್ ಉತ್ಸವ ಮಾಡಲು ನಿರ್ಧರಿಸಲಾಗಿದ್ದು, ನಗರದ ಸರ್ಕಾರಿ ಕಲಾ ಕಾಲೇಜು, ಸರ್ಕಾರಿ ವಿಜ್ಞಾನ ಕಾಲೇಜು ಮೈದಾನ ಬಳಸಿಕೊಳ್ಳಲಾಗುತ್ತಿದೆ. ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸುವ ಕ್ರಿಕೆಟ್ ಕ್ರೀಡಾಪಟುಗಳಿಗೆ ವಸತಿ ಸೌಲಭ್ಯ, ಊಟದ ವ್ಯವಸ್ಥೆ ಸೇರಿದಂತೆ ಎಲ್ಲಾ ಸಿದ್ಧತೆಗಳನ್ನು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮಾಡುತ್ತಿದೆ. ಇನ್ನು ಮಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾವಳಿಗಿಂತ ಹಾಸನದಲ್ಲಿ ವಿಭಿನ್ನವಾಗಿ ಹಾಗೂ ವಿಶೇಷವಾಗಿ ಟೂರ್ನಮೆಂಟ್ ನಡೆಸಲು ಸಿದ್ಧತೆ ಮಾಡಲಾಗುತ್ತಿದೆ. ಕ್ರಿಕೆಟ್ ಪಂದ್ಯಾವಳಿಗೆ ವಿಶೇಷವಾಗಿ ರಾಜ್ಯ ಸಭಾಪತಿ ಯೂ.ಟಿ. ಖಾದರ್, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಆಗಮಿಸಲಿದ್ದು, ಜನಪ್ರತಿನಿಧಿಗಳ ಜೊತೆ ಅಧ್ಯಕ್ಷರ ತಂಡವು ಮೊದಲ ಆಟವನ್ನು ಆಡುವುದು ವಿಶೇಷವಾಗಿದೆ. ಏಪ್ರಿಲ್ ೧೨ ಮತ್ತು ೧೩ರಂದು ಎರಡು ದಿನಗಳ ಈ ಕ್ರಿಕೆಟ್ ಪಂದ್ಯಾವಳಿ ಯಶಸ್ವಿಗೆ ಎಲ್ಲರೂ ಕೈಜೋಡಿಸುವಂತೆ ಕರೆ ನೀಡಿದರು.