ನಾಳೆಯಿಂದ ರಾಜ್ಯ ಮಟ್ಟದ ಪದವಿಪೂರ್ವ ಕಾಲೇಜು ಲಾನ್ ಟೆನ್ನಿಸ್ ಪಂದ್ಯಾವಳಿ

KannadaprabhaNewsNetwork | Published : Nov 19, 2024 12:45 AM

ಸಾರಾಂಶ

ಶಾಲಾ ಶಿಕ್ಷಣ ಇಲಾಖೆ, (ಪದವಿ ಪೂರ್ವ) ಮಂಡ್ಯ, ಶ್ರೀಶಂಭುಲಿಂಗೇಶ್ವರ ಎಜುಕೇಷನ್ ಟ್ರಸ್ಟ್, ಶ್ರೀ ಶಂಭುಲಿಂಗೇಶ್ವರ ಪದವಿ ಪೂರ್ವ ಕಾಲೇಜು, ಪಾಂಡವಪುರ ವತಿಯಿಂದ ನ.೨೦, ೨೧ರಂದು ಬೆಳಗ್ಗೆ ೯ ಗಂಟೆಗೆ ಪಾಂಡವಪುರದ ಎಸ್‌ಎಸ್‌ಇಟಿ ಕ್ರೀಡಾಂಗಣದಲ್ಲಿ ೧೯ ವರ್ಷದೊಳಗಿನ ಬಾಲಕ-ಬಾಲಕಿಯರ ರಾಜ್ಯ ಮಟ್ಟದ ಪದವಿ ಪೂರ್ವ ಕಾಲೇಜುಗಳ ಲಾನ್ ಟೆನ್ನಿಸ್ ಪಂದ್ಯಾವಳಿ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಶಾಲಾ ಶಿಕ್ಷಣ ಇಲಾಖೆ, (ಪದವಿ ಪೂರ್ವ) ಮಂಡ್ಯ, ಶ್ರೀಶಂಭುಲಿಂಗೇಶ್ವರ ಎಜುಕೇಷನ್ ಟ್ರಸ್ಟ್, ಶ್ರೀ ಶಂಭುಲಿಂಗೇಶ್ವರ ಪದವಿ ಪೂರ್ವ ಕಾಲೇಜು, ಪಾಂಡವಪುರ ವತಿಯಿಂದ ನ.೨೦, ೨೧ರಂದು ಬೆಳಗ್ಗೆ ೯ ಗಂಟೆಗೆ ಪಾಂಡವಪುರದ ಎಸ್‌ಎಸ್‌ಇಟಿ ಕ್ರೀಡಾಂಗಣದಲ್ಲಿ ೧೯ ವರ್ಷದೊಳಗಿನ ಬಾಲಕ-ಬಾಲಕಿಯರ ರಾಜ್ಯ ಮಟ್ಟದ ಪದವಿ ಪೂರ್ವ ಕಾಲೇಜುಗಳ ಲಾನ್ ಟೆನ್ನಿಸ್ ಪಂದ್ಯಾವಳಿ ನಡೆಯಲಿದೆ ಎಂದು ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಪನಿರ್ದೇಶಕ ಸಿ. ಚಲುವಯ್ಯ ತಿಳಿಸಿದರು.

ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಉಪಸ್ಥಿತಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಧ್ವಜಾರೋಹಣ ನೆರವೇರಿಸುವರು. ಶಾಸಕ ದರ್ಶನ್ ಪುಟ್ಟಣ್ಣಯ್ಯ ಅಧ್ಯಕ್ಷತೆ ವಹಿಸುವರು. ಅಂತಾರಾಷ್ಟ್ರೀಯ ಶ್ರೇಯಾಂಕ ಟೆನ್ನಿಸ್ ಆಟಗಾರ ಆರ್. ನಾಗರಾಜು ಕ್ರೀಡಾಕೂಟ ಉದ್ಘಾಟಿಸುವರು ಎಂದರು.

ಶಾಸಕರಾದ ಎ.ಬಿ.ರಮೇಶ್ ಬಂಡಿಸಿದ್ದೇಗೌಡ, ಪಿ.ಎಂ.ನರೇಂದ್ರಸ್ವಾಮಿ, ದಿನೇಶ್ ಗೂಳಿಗೌಡ, ಮಧು ಜಿ.ಮಾದೇಗೌಡ, ರವಿಕುಮಾರ್, ಕೆ.ಎಂ.ಉದಯ್, ಎಚ್.ಟಿ. ಮಂಜು, ವಿವೇಕಾನಂದ, ಕೆನ್ನಾಳು ಗ್ರಾ.ಪಂ. ಅಧ್ಯಕ್ಷ ಪ್ರಕಾಶ್, ಮನ್‌ಮುಲ್ ನಿರ್ದೇಶಕ ಕೆ. ರಾಮಚಂದ್ರು ಇತರರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದರು.

ರಾಜ್ಯಾದ್ಯಂತ ೨೦ ಬಾಲಕರು ಮತ್ತು ೧೫ ಬಾಲಕಿಯರ ತಂಡಗಳು ನೋಂದಣಿಯಾಗಿದ್ದು, ಪ್ರತಿ ತಂಡದಲ್ಲಿ ೫ ಮಂದಿ ಆಟಗಾರರು ಇರುತ್ತಾರೆ. ಕ್ರೀಡಾಕೂಟಕ್ಕೆ ೫ ಲಕ್ಷ ವೆಚ್ಚವಾಗಲಿದ್ದು, ಬಹುಮಾನವಾಗಿ ಪರ್ಯಾಯ ಪಾರಿತೋಷಕಗಳನ್ನು ನೀಡಲಾಗುತ್ತದೆ. ರಾಜ್ಯದ ಲಾನ್ ಟೆನ್ನಿಸ್ ಪಂದ್ಯಾವಳಿಯಲ್ಲಿ ಆಯ್ಕೆಯಾದ ತಂಡವನ್ನು ರಾಷ್ಟ್ರ ಮಟ್ಟಕ್ಕೆ ಕಳುಹಿಸಲಾಗುವುದು. ಬೇರೆ ಬೇರೆ ಜಿಲ್ಲೆಗಳಿಂದ ರೈಲಿನಲ್ಲಿ ಬರುವ ಆಟಗಾರರಿಗೆ ಪಾಂಡವಪುರ ರೈಲು ನಿಲ್ದಾಣದಿಂದ ಕ್ರೀಡಾಕೂಟ ನಡೆಸುವ ಸ್ಥಳಕ್ಕೆ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದರು.

ಶಂಭುಲಿಂಗೇಶ್ವರ ಶಿಕ್ಷಣ ಟ್ರಸ್ಟ್‌ನ ವ್ಯವಸ್ಥಾಪಕ ನಿರ್ದೇಶಕ ಪಂಚಲಿಂಗೇಗೌಡ, ಪ್ರಾಂಶುಪಾಲೆ ಆರ್.ವಿ. ಸೌಮ್ಯ, ಉಪನ್ಯಾಸಕರಾದ ರಾಮಕೃಷ್ಣೇಗೌಡ, ಗುರುಸ್ವಾಮಿ, ಗಿರೀಶ್, ಸುಬ್ಬನರಸಿಂಹ ಗೋಷ್ಠಿಯಲ್ಲಿದ್ದರು.

Share this article