ಕನ್ನಡಪ್ರಭ ವಾರ್ತೆ, ತುಮಕೂರುಸಂವಿಧಾನವನ್ನು ಉಳಿಸುವ ನಿಟ್ಟಿನಲ್ಲಿ ದಲಿತ ಸಂಘರ್ಷ ಸಮಿತಿ ಹಾಗೂ ಇನ್ನಿತರ ದಲಿತ ಸಂಘಟನೆಗಳು ಸೇರಿ ಐಕ್ಯ ಹೋರಾಟ ಸಮಿತಿ ರಚಿಸಿಕೊಂಡು, ಎದ್ದೇಳು ಕರ್ನಾಟಕ ಸಂಘಟನೆಯ ಸಹಕಾರದಲ್ಲಿ ರಾಜ್ಯದಾದ್ಯಂತ ಪ್ರವಾಸ ಮಾಡಿ, ದಲಿತ ಸಮುದಾಯಗಳ ಮುಖಂಡರು, ಮತದಾರರಿಗೆ ರಾಜಕೀಯ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿಗಳ ಸಂಚಾಲಕ ಎಂ.ವೆಂಕಟೇಶ್ ತಿಳಿಸಿದ್ದಾರೆಅವರು ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದಲಿತರು ಸೇರಿದಂತೆ ದೇಶದ ಹಿಂದುಳಿದ ಸಮುದಾಯಗಳ ಏಳಿಗೆಗೆ ಬೆನ್ನೆಲುಬಾಗಿರುವ ಮೀಸಲಾತಿಯನ್ನು ಹೇಗಾದರೂ ಮಾಡಿ ರದ್ದುಪಡಿಸಬೇಕು ಎಂಬುದು ಬಿಜೆಪಿಯ ಹುನ್ನಾರವಾಗಿದೆ. ಹಾಗಾಗಿಯೇ ಅಧಿಕಾರಕ್ಕೆ ಬಂದ ಹತ್ತು ವರ್ಷಗಳಲ್ಲಿ ದಲಿತರು, ಹಿಂದುಳಿದ ವರ್ಗಗಳ ವಿದ್ಯಾವಂತರಿಗೆ ಆಸರೆಯಾಗಿದ್ದ ಸಾರ್ವಜನಿಕ ಸಂಸ್ಥೆಗಳನ್ನು ಬಂಡವಾಳ ಹಿಂಪಡೆಯುವ ನೆಪದಲ್ಲಿ ಖಾಸಗಿಯವರಿಗೆ ಮಾರಾಟ ಮಾಡಿದ ಪರಿಣಾಮ, ಮೀಸಲಾತಿ ಇಲ್ಲದಾಗಿದೆ. ಇದರ ಜೊತೆಗೆ,ಸಾಮಾಜಿಕ ನ್ಯಾಯ, ಅಭಿವ್ಯಕ್ತಿ ಸ್ವಾತಂತ್ರಕ್ಕೆ ಅವಕಾಶವೇ ಇಲ್ಲದಂತಾಗಿ ದೆ.ಇದಕ್ಕೆ ಹತ್ತಾರು ಉದಾಹರಣೆಗಳು ನಮ್ಮ ಕಣ್ಣ ಮುಂದೆಯೇ ಇವೆ ಎಂದರು.ಸರ್ಕಾರದ ನೀತಿಗಳನ್ನು ಪ್ರಶ್ನಿಸುವ ಪತ್ರಕರ್ತರು, ಬುದ್ಧಿಜೀವಿಗಳ ಮೇಲೆ ಯುಎಪಿಎ ಕೇಸು ಹಾಕಿ 2-3 ವರ್ಷಗಳ ಕಾಲ ವಿಚಾರಣೆ ಇಲ್ಲದೆ ಜೈಲುಗಳಲ್ಲಿ ಕೊಳೆಯುವಂತೆ ಬಿಜೆಪಿ ಸರ್ಕಾರ ಮಾಡಿದೆ. ಉತ್ತರ ಪ್ರದೇಶದ ಸರ್ಕಾರ ಶಾಲಾ ಮಕ್ಕಳಿಗೆ ಮದ್ಯಾಹ್ನದ ಬಿಸಿಯೂಟದಲ್ಲಿ ರೊಟ್ಟಿಯ ಜೊತೆಗೆ, ನೆಂಚಿಕೊಳ್ಳಲು ಉಪ್ಪು ನೀಡುತ್ತಿದೆ ಎಂದು ಸುದ್ದಿ ಮಾಡಿದ ಪತ್ರಕರ್ತನ ಮೇಲೆ ಕೇಸು ಹಾಕಿ ಜೈಲಿಗೆ ಕಳುಹಿಸಲಾಗಿದೆ. ಸತ್ಯವನ್ನು ಹೇಳಲಾಗದ ಭಯದ ವಾತಾವರಣದಲ್ಲಿ ಜನರು ಬದುಕುತ್ತಿದ್ದಾರೆ. ಹಾಗಾಗಿ ಸಂವಿಧಾನ, ಅಭಿವ್ಯಕ್ತಿ ಸ್ವಾತಂತ್ರ ಉಳಿಯಲು ಬಿಜೆಪಿಯನ್ನು ಸೋಲಿಸುವಂತೆ ಕರೆ ನೀಡಲಾಗುತ್ತಿದೆ ಎಂದು ಎಂ.ವೆಂಕಟೇಶ್ ತಿಳಿಸಿದರು.ಹಿರಿಯ ಚಿಂತಕ ದೊರೆರಾಜು ಮಾತನಾಡಿ, ದೇಶದಲ್ಲಿ ಚಳವಳಿಗಾರರ ದ್ವನಿ ಅಡಗಿಸುವ ಕೆಲಸ ನಡೆಯುತ್ತಿದೆ. ವಿಚಾರವಾದಿಗಳಾದ ಆನಂದ ತಲ್ತುಂಬೆ ಅವರನ್ನು ಕಾರಣವಿಲ್ಲದೆ ಎರಡು ವರ್ಷಗಳ ಕಾಲ ಜೈಲಿಗಟ್ಟಿದ್ದರು. ಇಂತಹ ಅನೇಕ ಉದಾಹರಣೆಗಳು ನಮ್ಮ ಕಣ್ಣಮುಂದಿವೆ. ಇಂತಹ ಸರ್ವಾಧಿಕಾರಿ ಆಡಳಿತ ತೊಲಗಬೇಕು ಎಂಬ ಉದ್ದೇಶದಿಂದ ಬಿಜೆಪಿ ಸೋಲಿಸಿ, ಕಾಂಗ್ರೆಸ್ ಗೆಲ್ಲಿಸಿ ಅಭಿಯಾನವನ್ನು ದಲಿತ ಹೋರಾಟಗಾರರು ಹಮ್ಮಿಕೊಂಡಿರುವುದಾಗಿ ತಿಳಿಸಿದರು.ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿ ಜೀವನಹಳ್ಳಿ ಆರ್.ವೆಂಕಟೇಶ್ ಮಾತನಾಡಿ, ಕಳೆದ ಹತ್ತು ವರ್ಷಗಳ ಮೋದಿ ಆಡಳಿತದಲ್ಲಿ ಪ್ರಜಾಪ್ರಭುತ್ವದ ಬೇರುಗಳಾದ ಸ್ವಾತಂತ್ರ, ಸಮಾನತೆ, ಸಹೋದರತ್ವಕ್ಕೆ ಧಕ್ಕೆಯಾಗಿದೆ. ಅಘೋಷಿತ ತುರ್ತು ಪರಿಸ್ಥಿತಿ ದೇಶದಲ್ಲಿದೆ. ಸರ್ಕಾರದ ನಡೆ ವಿರೋಧಿಸುವವರನ್ನು ಜೈಲಿಗೆ ಹಾಕುವ ಹಿಟ್ಲರ್ ಆಡಳಿತ ಚಾಲ್ತಿಯಲ್ಲಿದೆ ಎಂದರು.ಭೇಟಿ ಬಜಾವೋ, ಬೇಟಿ ಪಡಾವೋ ಎಂಬುದು ಬೂಟಾಟಿಕೆ ಎಂಬುದು ಕುಸ್ತಿಪಟುಗಳ ಪ್ರತಿಭಟನೆಯ ವೇಳೆ ಸಾಬೀತಾಗಿದೆ. ಹೊತ್ತಿ ಹುರಿಯುತ್ತಿರುವ ಮಣಿಪುರಕ್ಕೆ ಇದುವರೆಗೂ ಮೋದಿ ಕಾಲಿಟ್ಟಿಲ್ಲ. ಹಾಗಾಗಿ ಬಿಜೆಪಿ ಸೋಲಿಸಬೇಕುಂಬುದು ನಮ್ಮ ಕರೆಯಾಗಿದೆ. ದೇಶದ ಜಾತ್ಯತೀತತೆ ಮತ್ತು ಸಂವಿಧಾನ ಉಳಿವಿಗಾಗಿ ಕಾಂಗ್ರೆಸ್ಗೆ ಮತ ನೀಡುವಂತೆ ನಮ್ಮ ಕೋರಿಕೆಯಾಗಿದೆ ಎಂದರು.ಸಮಾಜ ಸೇವಕ ತಾಜುದ್ದೀನ್ ಮಾತನಾಡಿ, ಜಾತಿ, ಧರ್ಮದ ಹೆಸರಿನಲ್ಲಿ ಜನರನ್ನು ಹೊಡೆದು ಆಳುತ್ತಿರುವ ಬಿಜೆಪಿಯಿಂದ ದೇಶ ಉಳಿಸುವ ನಿಟ್ಟಿನಲ್ಲಿ ಹಲವಾರು ಸಂಘಟನೆಗಳು ಬಿಜೆಪಿ ಸೋಲಿಸಲು ಪಣತೊಟ್ಟಿವೆ ಎಂದರು.ದಲಿತ ಸಂಘರ್ಷ ಸಮಿತಿ ಮುಖಂಡರಾದ ನರಸಿಂಹಯ್ಯ, ಐಕ್ಯ ಹೋರಾಟ ಸಮಿತಿಯ ಜಿಲ್ಲಾ ಸಂಚಾಲಕ ಡಾ.ಮುರುಳೀಧರ್,ಬೆನ್ನಿಗಾನಹಳ್ಳಿ ರಾಮಚಂದ್ರ, ಎಚ್.ಮುನಿವೆಂಕಟಪ್ಪ, ಗಂಗಾಧರ್, ಕೇಬಲ್ ರಘು ಸೇರಿದಂತೆ ಹಲವರು ಉಪಸ್ಥಿತರಿದ್ದರು.