ಬಾಂಗ್ಲಾದಲ್ಲಿನ ಹಿಂದೂಗಳ ಸ್ಥಿತಿ ಭಾರತದಲ್ಲಿ ಬರದಿರಲಿ: ರಾಜಶೇಖರಾನಂದ ಶ್ರೀ

KannadaprabhaNewsNetwork | Published : Dec 14, 2024 12:47 AM

ಸಾರಾಂಶ

ಜೈಲಿನಲ್ಲಿದ್ದ ಉಗ್ರಗಾಮಿ ಸಂಘಟನೆಯ ವ್ಯಕ್ತಿಯನ್ನು ಬಿಡುಗಡೆಗೊಳಿಸಲಾಗಿದೆ. ಭಾರತ ಎಲ್ಲವನ್ನೂ ಸೂಕ್ಷ್ಮವಾಗಿ ವೀಕ್ಷಿಸುತ್ತಿದ್ದು, ಹಿಂದೂಗಳ ಮೇಲೆ ಬಾಂಗ್ಲಾದಲ್ಲಿ ದೌರ್ಜನ್ಯ ಅತಿರೇಕಕ್ಕೆ ಹೋದರೆ ಭಾರತ ಖಂಡಿತ ಸುಮ್ಮನಿರುವುದಿಲ್ಲ.

ಭಟ್ಕಳ: ಹಿಂದೂ ಸಮಾಜವನ್ನು ಯಾವುದೇ ಕಾರಣಕ್ಕೂ ಕಡೆಗಣಿಸಬೇಡಿ. ಬಾಂಗ್ಲಾದ ಹಿಂದೂ ಸಮಾಜದ ರಕ್ಷಣೆಗೆ ಭಾರತದ ಹಿಂದೂಗಳು ನಿರಂತರ ಬೆಂಬಲ ಸೂಚಿಸಬೇಕು. ಬಾಂಗ್ಲಾದಲ್ಲಿ ಹಿಂದೂಗಳ ಪರಿಸ್ಥಿತಿ ಆದಂತೆ ಭಾರತದಲ್ಲಿ ಎಂದಿಗೂ ಆಗಲು ಬಿಡಬಾರದು ಎಂದು ಮಂಗಳೂರು ಗುರುಪುರದ ವಜ್ರದೇಹಿ ಸಂಸ್ಥಾನದ ರಾಜಶೇಖರಾನಂದ ಸ್ವಾಮೀಜಿ ತಿಳಿಸಿದರು.

ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಶುಕ್ರವಾರ ಪಟ್ಟಣದ ರಿಕ್ಷಾ ಚಾಲಕರು, ಮಾಲೀಕರು ಗಣೇಶೋತ್ಸವ ಮೈದಾನದಲ್ಲಿ ವಿಶ್ವ ಹಿಂದೂ ಪರಿಷತ್, ಹಿಂದೂ ಜಾಗರಣ ವೇದಿಕೆ ನೇತೃತ್ವದಲ್ಲಿ ಏರ್ಪಡಿಸಿದ್ದ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿದರು.

ಬಾಂಗ್ಲಾದಲ್ಲಿ ನಿರಂತರವಾಗಿ ಹಿಂದೂಗಳ ಮೇಲೆ ದೌರ್ಜನ್ಯ, ಅತ್ಯಾಚಾರದಂತಹ ಪ್ರಕರಣ ನಡೆಯುತ್ತಿದೆ. ಹೊಸ ಅಧ್ಯಕ್ಷ ಅಧಿಕಾರ ವಹಿಸಿಕೊಂಡ ನಂತರ ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ. ಶಾಂತಿಮಂತ್ರ ಹೇಳಿದ, ಊಟ ಹಾಕಿದ ಇಸ್ಕಾನ್ ಮುಖ್ಯಸ್ಥರನ್ನೇ ಬಾಂಗ್ಲಾದಲ್ಲಿ ಭಯೋತ್ಪಾದಕರೆಂಬ ಹಣೆಪಟ್ಟಿ ಕಟ್ಟಿ ಬಂಧಿಸಲಾಗಿದೆ.

ಜೈಲಿನಲ್ಲಿದ್ದ ಉಗ್ರಗಾಮಿ ಸಂಘಟನೆಯ ವ್ಯಕ್ತಿಯನ್ನು ಬಿಡುಗಡೆಗೊಳಿಸಲಾಗಿದೆ. ಭಾರತ ಎಲ್ಲವನ್ನೂ ಸೂಕ್ಷ್ಮವಾಗಿ ವೀಕ್ಷಿಸುತ್ತಿದ್ದು, ಹಿಂದೂಗಳ ಮೇಲೆ ಬಾಂಗ್ಲಾದಲ್ಲಿ ದೌರ್ಜನ್ಯ ಅತಿರೇಕಕ್ಕೆ ಹೋದರೆ ಭಾರತ ಖಂಡಿತ ಸುಮ್ಮನಿರುವುದಿಲ್ಲ. ದೌರ್ಜನ್ಯ ನಡೆಸುವ ಅಲ್ಲಿನ ಜನರಿಗೆ ಮತ್ತು ಸರ್ಕಾರಕ್ಕೆ ಪಾಠ ಕಲಿಸದೇ ಬಿಡುವುದಿಲ್ಲ ಎಂದ ಸ್ವಾಮೀಜಿ, ಹಿಂದೂಗಳು ಒಗ್ಗಟ್ಟಾಗಿ ಸದೃಢರಾಗಬೇಕು. ಭಾರತದಲ್ಲಿ ನಾವು ಎಂದಿಗೂ ಅಲ್ಪಸಂಖ್ಯಾತರಾಗಬಾರದು.

ಹಿಂದೂ ಜಾಗರಣ ವೇದಿಕೆಯ ದಕ್ಷಿಣ ಪ್ರಾಂತ ಸಂಚಾಲಕ ಕಾರ್ಕಳದ ಶ್ರೀಕಾಂತ ಶೆಟ್ಟಿ ಮಾತನಾಡಿ, ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಿರಂತರವಾಗಿ ಅತ್ಯಾಚಾರ, ಕೊಲೆ, ಸುಲಿಗೆ,ದೌರ್ಜನ್ಯ ನಡೆಯುತ್ತಿದ್ದರೂ ಮಾನವ ಹಕ್ಕು ಸಂಘಟನೆಗಳು, ಸೆಲೆಬ್ರೆಟಿಗಳು ಬಾಯಿ ಮುಚ್ಚಿಕೊಂಡು ಕುಳಿತಿದ್ದಾರೆ. ಬಾಂಗ್ಲಾದ ಹಿಂದೂಗಳ ಮೇಲಿನ ದೌರ್ಜನ್ಯವನ್ನು ಹಿಂದೂ ಸಂಘಟನೆಗಳು ಮಾತ್ರ ಖಂಡಿಸುತ್ತಿವೆ. ಅಲ್ಲಿನ ಹಿಂದೂಗಳಿಗೆ ಪ್ರತ್ಯೇಕ ದೇಶಕ್ಕೆ ಒತ್ತಾಯಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ವಿಶ್ವ ಹಿಂದೂ ಪರಿಷತ್ ಉಪಾಧ್ಯಕ್ಷ ಗೋವಿಂದ ಖಾರ್ವಿ ಮಾತನಾಡಿದರು. ಯಮುನಾ ದಿನೇಶ ನಾಯ್ಕ ಪ್ರಾರ್ಥಿಸಿದರು. ಉಮೇಶ ಮುಂಡಳ್ಳಿ ಸಂಘಟನಾ ಗೀತೆ ಹಾಡಿದರು. ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ರಾಮಕೃಷ್ಣ ನಾಯ್ಕ ಸ್ವಾಗತಿಸಿದರು. ಹಿಂದೂ ಜಾಗರಣಾ ವೇದಿಕೆಯ ಅಧ್ಯಕ್ಷ ಜಯಂತ ನಾಯ್ಕ ಬೆಣಂದೂರು ವಂದಿಸಿದರು. ಹಿಂದೂ ಜಾಗರಣಾ ವೇದಿಕೆಯ ಸಹಸಂಚಾಲಕ ನಾಗೇಶ ನಾಯ್ಕ ಮನವಿ ಓದಿದರು. ಶಿಕ್ಷಕ ನಾರಾಯಣ ನಾಯ್ಕ ನಿರೂಪಿಸಿದರು. ಸಭಾ ಕಾರ್ಯಕ್ರಮದ ಪೂರ್ವದಲ್ಲಿ ಚೆನ್ನಪಟ್ಟಣ ಹನುಮಂತ ದೇವಸ್ಥಾನದಿಂದ ಬೃಹತ್ ಮೆರವಣಿಗೆ ನಡೆಸಲಾಗಿದ್ದು, ಸಾವಿರಾರು ಹಿಂದೂಗಳು ಪಾಲ್ಗೊಂಡಿದ್ದರು.

Share this article