ಹೊನ್ನಾವರ: ಹೊನ್ನಾವರ ಪಪಂ ಕಚೇರಿ ಜಪ್ತಿ ಮಾಡುವಂತೆ ಹೊನ್ನಾವರ ಸಿವಿಲ್ ನ್ಯಾಯಾಲಯ ನೀಡಿದ್ದ ಆದೇಶಕ್ಕೆ ಹಿರಿಯ ನ್ಯಾಯಾಲಯದ ಸಿವಿಲ್ ಜಡ್ಜ್ ಬುಧವಾರ ತಡೆಯಾಜ್ಞೆ ನೀಡಿದ್ದಾರೆ.
ಗಟಾರದ ಮಳೆ ನೀರು ನುಗ್ಗಿ ಆಗಿರುವ ಹಾನಿ ತುಂಬಿಕೊಡುವ ಪ್ರಕರಣದಲ್ಲಿ ಪರಿಹಾರ ನೀಡದ ಹೊನ್ನಾವರ ಪಪಂ ಕಚೇರಿ ಜಪ್ತಿ ಮಾಡುವಂತೆ ಹೊನ್ನಾವರ ಸಿವಿಲ್ ನ್ಯಾಯಾಲಯ ಆದೇಶ ಹೊರಡಿಸಿತ್ತು. ನ್ಯಾಯಾಲಯದ ಅಣತಿಯಂತೆ ಕೋರ್ಟ್ ಸಿಬ್ಬಂದಿ ಆದೇಶದ ಪ್ರತಿ ಹಿಡಿದು ಕಕ್ಷಿದಾರರೊಡನೆ ಪಪಂ ಕಚೇರಿಗೆ ಜಪ್ತಿಗೆ ಆಗಮಿಸಿದ್ದರು. ಆದರೆ ತಡೆಯಾಜ್ಞೆ ದೊರೆತ ಹಿನ್ನೆಲೆಯಲ್ಲಿ ವಾಪಸಾದರು.ಪ್ರಕರಣದ ಹಿನ್ನೆಲೆ: 2014ರಲ್ಲಿ ಮಳೆಗಾಲದ ಸಮಯದಲ್ಲಿ ಪಪಂ ಸಂಬಂಧಿಸಿದ ಚರಂಡಿಯಿಂದ ಅಂಗಡಿಗೆ ನೀರು ನುಗ್ಗಿದ್ದ ಪರಿಣಾಮ ಅಂಗಡಿಯ ಸಾಮಾನು ಸರಂಜಾಮಗಳಿಗೆ ಹಾನಿಯುಂಟಾಗಿತ್ತು. ಇದರಿಂದ ಪರಿಹಾರ ನೀಡುವಂತೆ ಅಂಗಡಿ ಮಾಲೀಕ ಶ್ರೀಧರ್ ನಾಯಕ್ ಹಲವು ಬಾರಿ ಪಪಂ ಮುಖ್ಯಾಧಿಕಾರಿ ಬಳಿ ಮನವಿ ಮಾಡಿದ್ದರು. ಪರಿಹಾರ ನೀಡದಿದ್ದ ಕಾರಣ ಪಪಂ ವಿರುದ್ಧ ನ್ಯಾಯಲಯದ ಮೊರೆ ಹೋಗಿದ್ದರು. ಅಂಗಡಿ ಮಾಲೀಕನಿಗೆ ಹತ್ತು ತಿಂಗಳ ಹಿಂದೆ ಪರಿಹಾರ ನೀಡುವಂತೆ ಆದೇಶ ನೀಡಿದರೂ ಪರಿಹಾರ ನೀಡದ ಹಿನ್ನೆಲೆ ಪಟ್ಟಣ ಪಂಚಾಯಿತಿಯ ಜಪ್ತಿಗೆ ನ್ಯಾಯಾಲಯ ಆದೇಶ ನೀಡಿತ್ತು. ಆದೇಶದ ಪ್ರತಿಯನ್ನು ಪಡೆದು ನ್ಯಾಯಾಲಯದ ಸಿಬ್ಬಂದಿ ಪಪಂ ಜಪ್ತಿಗೆ ಬಂದಿದ್ದರು.
ತಡೆಯಾಜ್ಞೆ: ಗಟಾರದ ನೀರು ನುಗ್ಗಿ ಆಗಿರುವ ಹಾನಿ ತುಂಬಿಕೊಡುವಂತೆ ಅಂಗಡಿಯ ಮಾಲೀಕ ಶ್ರೀಧರ ನಾಯಕ ಎಂಬವರು ೨೦೧೪ರಲ್ಲಿ ಪಪಂ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ಪರಿಹಾರ ನೀಡುವಂತೆ ಹತ್ತು ತಿಂಗಳ ಹಿಂದೆ ಆದೇಶವಾಗಿತ್ತು. ಪರಿಹಾರ ನೀಡಿಲ್ಲವೆಂದು ಅವರು ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯ ಜಪ್ತು ಆದೇಶ ನೀಡಿತ್ತು. ತುರ್ತು ತಡೆಯಾಜ್ಞೆ ನೀಡಬೇಕು ಎಂದು ಪಪಂ ವತಿಯಿಂದ ಹಿರಿಯ ನ್ಯಾಯಾಲಯದ ಸಿವಿಲ್ ಜಡ್ಜ್ ಮೊರೆ ಹೋಗಿದ್ದು, ನ್ಯಾಯಾಲಯ ತಡೆಯಾಜ್ಞೆ ನೀಡಿದೆ ಎಂದು ಪಪಂ ಮುಖ್ಯಾಧಿಕಾರಿ ಯೇಸು ಬೆಂಗಳೂರು ಸ್ಪಷ್ಟನೆ ನೀಡಿದರು.