ಕನ್ನಡಪ್ರಭ ವಾರ್ತೆ ಬೆಂಗಳೂರು
ಕೋರಮಂಗಲದಲ್ಲಿರುವ ಬಯೋ ಗ್ಯಾಸ್ ಉತ್ಪಾದಿಸುವ ಕಸ-ರಸ ಘಟಕಕ್ಕೆ ಶನಿವಾರ ಭೇಟಿ ನೀಡಿದ ಅವರು, ಗೇಲ್ ಇಂಡಿಯಾ ಕಂಪನಿಯ ಸಹಯೋಗದೊಂದಿಗೆ ದಿನಕ್ಕೆ 300 ಟನ್ ಹಸಿ ತ್ಯಾಜ್ಯ ಸಂಸ್ಕರಿಸುವ ಹೊಸ ಬಯೋಗ್ಯಾಸ್ ಘಟಕ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಕನ್ನಹಳ್ಳಿ ಪ್ರದೇಶದಲ್ಲಿ ಸುಮಾರು 1,000 ಟನ್ ಹಸಿ ತ್ಯಾಜ್ಯದಿಂದ ಬಯೋಗ್ಯಾಸ್ ಉತ್ಪಾದಿಸುವ ಘಟಕ ನಿರ್ಮಾಣಕ್ಕೆ ಸಾತರಾಂ ಸಂಸ್ಥೆಯೊಂದಿಗೆ ಒಪ್ಪಂದಕ್ಕೆ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದರು.
ಹೆರೋಹಳ್ಳಿ ಪ್ರದೇಶದಲ್ಲಿ ದಿನಕ್ಕೆ 50 ಟನ್ ತ್ಯಾಜ್ಯ ಸಂಸ್ಕರಣೆ ಮಾಡುವ ಘಟಕಕ್ಕೆ ಕಂಪನಿಯೊಂದನ್ನು ಆಯ್ಕೆ ಮಾಡಲಾಗಿದೆ. ಅಲ್ಲಿ ಸಂಗ್ರಹವಾಗುವ ಹಸಿ ತ್ಯಾಜ್ಯದಿಂದ ದಿನಕ್ಕೆ ಸುಮಾರು 1,500 ಕೆಜಿ ಗ್ಯಾಸ್ ಉತ್ಪಾದನೆ ಮಾಡಲಾಗುತ್ತಿದೆ. ಉತ್ಪಾದನೆಯಾಗುವ ಗ್ಯಾಸ್ ಅನ್ನು ಬಯೋ ಸಿಎನ್ಜಿ ರೂಪದಲ್ಲಿ ಮಾರಾಟ ಮಾಡಲಾಗುತ್ತಿದ್ದು, ಭವಿಷ್ಯದಲ್ಲಿ ಗ್ಯಾಸ್ ಪೈಪ್ ಲೈನ್ ಮೂಲಕ ಮನೆಮನೆಗೆ ತಲುಪಿಸುವ ಯೋಜನೆಯನ್ನೂ ರೂಪಿಸಲಾಗುತ್ತಿದೆ ಎಂದು ಅವರು ತಿಳಿಸಿದರು.ಎಲ್ಲ ಪಾಲಿಕೆಗಳಲ್ಲಿ ಜೈವಿಕ ಅನಿಲ ಘಟಕಗಳನ್ನು ಸ್ಥಾಪಿಸಲು ಎರಡರಿಂದ ಮೂರು ಎಕರೆ ಜಾಗ ಬೇಕಾಗುತ್ತದೆ. ಹೀಗಾಗಿ ಇರುವ ಘಟಕಗಳನ್ನೇ ಉನ್ನತೀಕರಿಸಿ ಬಯೋಗ್ಯಾಸ್ ಉತ್ಪತ್ತಿ ಮಾಡಿ, ಸ್ಥಳೀಯ ಹೋಟೆಲ್ಗಳಿಗೆ ವಿತರಣೆ ಮಾಡಲು ಕ್ರಮ ವಹಿಸಲಾಗುವುದೆಂದು ಮಾಹಿತಿ ನೀಡಿದರು.
ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತದ ಸಿಇಒ ಕರೀಗೌಡ ಮಾತನಾಡಿ, ಈ ಹಿಂದೆ ನಿರ್ಮಿಸಿರುವ 12 ಬಯೋಗ್ಯಾಸ್ ಘಟಕಗಳಲ್ಲಿ 6 ಕಾರ್ಯನಿರ್ವಹಿಸುತ್ತಿದ್ದು, 30 ಟನ್ ತ್ಯಾಜ್ಯದಿಂದ ಬಯೋಗ್ಯಾಸ್ ಉತ್ಪಾದಿಸಲಾಗುತ್ತಿದೆ. ಉಳಿದ 6 ಘಟಕಗಳನ್ನು ನವೀಕರಣಗೊಳಿಸುವ ಕಾಮಗಾರಿಯನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.
ಪ್ರತಿ ಘಟಕದಿಂದ 200 ಕೆ.ಜಿ ಗ್ಯಾಸ್ ಉತ್ಪಾದಿಸಲಾಗುತ್ತಿದೆ. ಅದನ್ನು ಆಂತರಿಕವಾಗಿ ಬಳಸಲಾಗುತ್ತಿದ್ದು, ಹೆಚ್ಚುವರಿ ಗ್ಯಾಸ್ನಲ್ಲಿ ವಿದ್ಯುತ್ ಉತ್ಪಾದಿಸಿ ಸಮೀಪದ ಉದ್ಯಾನವನಗಳಲ್ಲಿ ದೀಪಗಳನ್ನು ಬೆಳಗಿಸಲಾಗುತ್ತಿದೆ. ಕೋರಮಂಗಲದಲ್ಲಿರುವ 8.5 ಟನ್ ಸಾಮರ್ಥ್ಯದ ಬಯೋಗ್ಯಾಸ್ ಘಟಕದಿಂದ ಸಮೀಪದ ಹೋಟೆಲ್ಗೆ ಪ್ರತಿದಿನ ಸುಮಾರು 120 ಕೆಜಿ ಬಯೋಗ್ಯಾಸ್ ಸರಬರಾಜು ಮಾಡಲಾಗುತ್ತಿದೆ. ಪ್ರತಿ ಕೆಜಿಗೆ 70 ರು.ನಂತೆ ದಿನಕ್ಕೆ ಸುಮಾರು 8,400 ರು. ಆದಾಯ ಬರುತ್ತಿದೆ ಎಂದು ಕರೀಗೌಡ ಮಾಹಿತಿ ನೀಡಿದರು.ಬಾಕ್ಸ್...
4 ವಿಕೇಂದ್ರೀಕೃತ ಬಯೋಮೆಥನೈಸೇಷನ್ ಘಟಕ ನಿರ್ಮಾಣನಗರದಲ್ಲಿ ನಾಲ್ಕು ವಿಕೇಂದ್ರೀಕೃತ ಬಯೋಮೆಥನೈಸೇಷನ್ ಘಟಕಗಳನ್ನು ನಿರ್ಮಿಸಲು ಯೋಜಿಸಲಾಗಿದೆ. ಅವುಗಳಲ್ಲಿ ಎರಡು ಘಟಕಗಳು ಶೀಘ್ರದಲ್ಲೇ ಕಾರ್ಯಾರಂಭಗೊಳ್ಳಲಿವೆ. ಉಳಿದ ಎರಡು ಘಟಕಗಳ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಮುಖ್ಯ ಆಯುಕ್ತರು ತಿಳಿಸಿದ್ದಾರೆ.
ಕೋಟ್...ಪಾಲಿಕೆ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ಹಾಗೂ ಮುಂದಿನ ದಿನಗಳಲ್ಲಿ ಉತ್ಪತ್ತಿಯಾಗಬಹುದಾದ ಸುಮಾರು 3000 ಟನ್ ಹಸಿ ತ್ಯಾಜ್ಯದಿಂದ ಬಯೋಗ್ಯಾಸ್ ಉತ್ಪಾದನೆ ಮಾಡುವ ಯೋಜನೆ ಸಮಗ್ರ ಘನತ್ಯಾಜ್ಯ ನಿರ್ವಹಣಾ ಟೆಂಡರ್ನಲ್ಲಿ ಒಳಗೊಂಡಿದೆ.
- ಮಹೇಶ್ವರ ರಾವ್, ಮುಖ್ಯ ಆಯುಕ್ತ, ಜಿಬಿಎ