ಕನ್ನಡಪ್ರಭವಾರ್ತೆ ಕಾರ್ಕಳ:ರಾಜ್ಯದಲ್ಲಿ ಆನೆ, ಹುಲಿ ಹಾಗೂ ಚಿರತೆಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದೇ ಕಾರಣಕ್ಕೆ ಜನವಸತಿ ಪ್ರದೇಶಗಳಿಗೆ ಪ್ರಾಣಿಗಳು ಪ್ರವೇಶ ಮಾಡುತ್ತಿವೆ. ರಾಜ್ಯದಲ್ಲಿ ಕಾಡುಪ್ರಾಣಿಗಳ ಹಾವಳಿ ತಡೆಗೆ ಟಾಸ್ಕ್ ಫೋರ್ಸ್ ರಚಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ರಾಜ್ಯದಲ್ಲಿ ಗಾಂಜಾ ಮತ್ತು ಡ್ರಗ್ಸ್ ಹಾವಳಿ ಹೆಚ್ಚುತ್ತಿರುವ ಕುರಿತು ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಘಟನೆಗಳನ್ನು ಉಲ್ಲೇಖಿಸಿದ ಸಿಎಂ, ಡ್ರಗ್ಸ್ ಸಮಸ್ಯೆಯನ್ನು ಸಂಪೂರ್ಣ ಶೂನ್ಯಮಟ್ಟಕ್ಕೆ ತರುವುದು ಸರ್ಕಾರದ ಗುರಿಯಾಗಿದೆ. ಕರ್ನಾಟಕವನ್ನು ಡ್ರಗ್ಸ್ ಮುಕ್ತ ರಾಜ್ಯವನ್ನಾಗಿಸಲು ಪ್ರಯತ್ನಿಸಲಾಗುತ್ತಿದೆ ಎಂದರು. ಆದರೆ, ಈ ಪ್ರಯತ್ನ ಇನ್ನೂ ಸಂಪೂರ್ಣ ಸಫಲವಾಗಿಲ್ಲ ಎಂಬುದನ್ನೂ ಅವರು ಒಪ್ಪಿಕೊಂಡರು.
ಆಗುಂಬೆ ಸುರಂಗ ಮಾರ್ಗ ಮಾಡುತ್ತೇವೆ:ಆಗುಂಬೆ ಸುರಂಗ ಮಾರ್ಗ ಯೋಜನೆ ಕುರಿತು ಮಾತನಾಡಿದ ಸಿಎಂ, ಈ ಯೋಜನೆಯನ್ನು ಸರ್ಕಾರ ಜಾರಿಗೆ ತರಲಿದೆ. ಸಮಸ್ಯೆಗಳಿದ್ದರೆ, ಕಾರಣಗಳನ್ನು ತಿಳಿದು ಸಮನ್ವಯದಿಂದ ಪರಿಹಾರ ಕಂಡುಕೊಳ್ಳಲಾಗುವುದು. ಅದೇ ರೀತಿ ಪರಶುರಾಮ ಥೀಮ್ ಪಾರ್ಕ್ ಯೋಜನೆಯನ್ನೂ ಪೂರ್ಣಗೊಳಿಸಲಾಗುವುದು. ತಪ್ಪು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
ಮಹಾತ್ಮಾ ಗಾಂಧಿ ವಸತಿ ಶಾಲೆಗೆ ಭೇಟಿ ನೀಡಿದ ಸಿಎಂ, ಅಲ್ಲಿ ವಿದ್ಯಾರ್ಥಿಗಳೊಂದಿಗೆ ಮಧ್ಯಾಹ್ನದ ಊಟ ಸವಿದರು. ಊಟದಲ್ಲಿ ಉಪ್ಪಿನಕಾಯಿ, ನೀರುದೋಸೆ, ಗೋಡಂಬಿ-ಬೀನ್ಸ್ ಸುಕ್ಕ, ಬದನೆಕಾಯಿ ಚಟ್ನಿ, ರಾಗಿ ಮುದ್ದೆ, ಸಾರು, ಹಪ್ಪಳ-ಸಂಡಿಗೆ, ಕುಚ್ಚಲಕ್ಕಿ ಅನ್ನ, ಹೋಳಿಗೆ ತುಪ್ಪ, ಕಡಲೆಬೇಳೆ ಪಾಯಸ ಹಾಗೂ ಮೊಸರು ಸೇರಿದಂತೆ ವಿವಿಧ ಸಾಂಪ್ರದಾಯಿಕ ಭಕ್ಷ್ಯಗಳನ್ನು ಸವಿದರು.