
ಕನ್ನಡಪ್ರಭ ವಾರ್ತೆ, ತುಮಕೂರು
ತುಮಕೂರಿನ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏಪ್ರಿಲ್ 8 ರಂದು ನಡೆದ ಜನ ಸ್ಪಂದನ ಕಾರ್ಯಕ್ರಮದಲ್ಲಿ 750ಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಿ, ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿ ಪರಿಹಾರ ಒದಗಿಸುವ ಕೆಲಸ ಮಾಡಿದ್ದಾರೆ. ಆದರೆ ಕೊನೆಯಲ್ಲಿ ಬಂದ ಕೆ.ಆರ್.ಎಸ್ ಪಕ್ಷದ ಕೆಲವರು ಉದ್ದೇಶಪೂರ್ವಕವಾಗಿಯೇ ಸಚಿವರನ್ನು ಕೆರಳಿಸುವಂತೆ ಪ್ರಶ್ನೆ ಮಾಡಿದಲ್ಲದೆ, ಅರ್ಜಿ ಪಡೆದ ಸಂಬಂಧಪಟ್ಟವರಿಗೆ ನೀಡಿದ ನಂತರ ಹೊರಡಲು ಮುಂದಾದಾಗ ಉಢಾಪೆಯಾಗಿ ವರ್ತಿಸಿ, ಕೆಟ್ಟ ಹೆಸರು ತರುವ ಕೆಲಸ ಮಾಡಿದ್ದಾರೆ. ಇದು ಖಂಡನೀಯ ಎಂದರು.
ಅಲ್ಲದೆ ಸೋಷಿಯಲ್ ಮಿಡಿಯಾದಲ್ಲಿ ಇಲ್ಲಸಲ್ಲದ ಸುಳ್ಳು ಹೇಳಿ ಮನಬಂದಂತೆ ಟ್ರೋಲ್ ಮಾಡುತ್ತಿದ್ದಾರೆ. ಇದನ್ನು ಸಹಿಸಲು ಸಾಧ್ಯವಿಲ್ಲ. ಕೆ.ಆರ್.ಎಸ್ ಪಕ್ಷದವರ ನಡವಳಿಕೆ ಇದೇ ರೀತಿ ಮುಂದುವರೆದರೆ ನಾವು ಕೂಡ ಎಲ್ಲೆಂದರಲ್ಲಿ ಕೆ.ಆರ್.ಎಸ್.ಪಕ್ಷದವರಿಗೆ ಘೇರಾವ್ ಹಾಕಬೇಕಾಗುತ್ತದೆ ಎಂದು ಎಚ್ಚರಿಸಿದರು.ಸಮಸ್ಯೆಗಳ ಬಗ್ಗೆ ಮನವಿ ನೀಡಲು ಬಂದವರು, ಅದನ್ನು ವೀಡಿಯೋ ಮಾಡುವ ಅಗತ್ಯವೆನಿತ್ತು?, ತುಮಕೂರಿನ ಜನಸ್ಪಂದನ ಕಾರ್ಯಕ್ರಮಕ್ಕೆ ಮೈಸೂರಿನ ವ್ಯಕ್ತಿ ಬಂದ ಮನವಿ ನೀಡುವ ಅಗತ್ಯವಿದೆಯೇ? ಇದೊಂದು ಷಡ್ಯಂತ್ರವಾಗಿದೆ. ಗೃಹ ಮಂತ್ರಿಗಳಿಗೆ ಕೆಟ್ಟ ಹೆಸರು ತರಬೇಕೆಂದು ನಡೆಸಿರುವ ಹುನ್ನಾರವಾಗಿದೆ. ಇಡೀ ದಿನ ಮಧ್ಯಾಹ್ನದ ಊಟವನ್ನು ಮಾಡದೆ ಜನರ ಸಂಕಷ್ಟ ಆಲಿಸಿ ಪರಿಹಾರ ಒದಗಿಸಿದ್ದರೂ, ಸಭೆ ಮುಗಿಸಿ ಹೊರಡುವಾಗ ಬಂದು ಕಿತಾಪತಿ ತೆಗೆದು ಸಾರ್ವಜನಿಕರಲ್ಲಿ ಕೆಟ್ಟ ಅಭಿಪ್ರಾಯ ಮೂಡುವಂತೆ ಮಾಡುತ್ತಿದ್ದಾರೆ ಎಂದು ದೂರಿದರು.
ಕೆಪಿಸಿಸಿ ಉಪಾಧ್ಯಕ್ಷ ಮುರುಳೀಧರ ಹಾಲಪ್ಪ ಮಾತನಾಡಿ, ಸರ್ಕಾರದ ಕೆಲಸವಾಗಿರುವ ಜನಸಂಪರ್ಕ ಸಭೆ ವ್ಯವಸ್ಥಿತವಾಗಿ ನಡೆಯುತ್ತಿರುವ ಸಂದರ್ಭದಲ್ಲಿ 750 ಜನರಿಗೆ ಆಗದ ತೊಂದರೆ ಇವರಿಗೆ ಮಾತ್ರ ಆಗಿತ್ತೇ?, ಕೆ.ಆರ್.ಎಸ್ ಪಕ್ಷದ್ದು ಕೇವಲ ಗಿಮಿಕ್, ಮುಖ್ಯಮಂತ್ರಿಗಳ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಅರಣ್ಯ ಸಚಿವರು, ಕಾರ್ಮಿಕ ಸಚಿವರು ಎಲ್ಲರ ಜನಸ್ಪಂದನ ಸಭೆಯಲ್ಲಿಯು ಇದೇ ರೀತಿ ವರ್ತಿಸಿದ್ದಾರೆ ಎಂದರು.