ಮಾಲೂರು: ಗ್ರಾಮಗಳಲ್ಲಿ ಬಡ ರೈತ ಕುಟುಂಬದ ಅನ್ನವನ್ನು ಕಸಿಯುತ್ತಿರುವ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುವಂತೆ ಒತ್ತಾಯಿಸಿ ರೈತ ಸಂಘದ ಕಾರ್ಯಕರ್ತರು ಇಲ್ಲಿನ ಅಬಕಾರಿ ಸೂಪರಿಡೆಂಟ್ಗೆ ಮನವಿ ಪತ್ರ ಸಲ್ಲಿಸಿದರು.
ರಾಜ್ಯ ಉಪಾಧ್ಯಕ್ಷ ನಾರಾಯಣ ಗೌಡ ಮಾತನಾಡಿ, ಕಿಲೋ ಮೀಟರ್ ಗಟ್ಟಲೇ ಅಲೆದಾಡಿದರೂ ಕುಡಿಯುವ ನೀರು ಸಿಗುವುದಿಲ್ಲ. ಆದರೆ ಸರ್ಕಾರಕ್ಕೆ ಅದಾಯ ತಂದು ಕೊಡುವ ನೆಪದಲ್ಲಿ ಗಲ್ಲಿಗಲ್ಲಿಯಲ್ಲೂ ಅಕ್ರಮ ಮದ್ಯ ಮಾರಾಟಕ್ಕೆ ಸರ್ಕಾರಿ ಅಧಿಕಾರಿಗಳೇ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಅಪಾದಿಸಿದರು
ಇಲ್ಲಿನ ಗಡಿಭಾಗಕ್ಕೆ ಹೊಂದಿಕೊಂಡಿರುವ ಪ್ರತಿ ಹಳ್ಳಿಯಲ್ಲೂ ಹೆದ್ದಾರಿಯ ಪ್ರತಿ ಡಾಬಾಗಳಲ್ಲೂ ರಾಜಾರೋಷವಾಗಿ 24 ಗಂಟೆ ಮದ್ಯ ದೊರೆಯುವ ಜತೆಯಲ್ಲಿ ಮದ್ಯವ್ಯಸನಿಗಳಾಗುತ್ತಿದ್ದು, ಅವರ ಕುಟುಂಬ ಬೀದಿಗೆ ಬರುತ್ತಿದೆ ಎಂದರು.ತಾಲೂಕಿನಲ್ಲಿ ಅಬಕಾರಿ ಇಲಾಖೆಗೆ ಚುರುಕು ಮುಟ್ಟಿಸಿ ಅಕ್ರಮ ಮದ್ಯ ಮಾರಾಟಕ್ಕೆ ಸಹಕಾರ ನೀಡುತ್ತಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಅಕ್ರಮ ಮದ್ಯ ಮಾರಾಟ ನಿಯಂತ್ರಿಸದಿದ್ದರೆ ಶಾಸಕ ನಂಜೇಗೌಡ ಮನೆ ಮುಂದೆ ನೊಂದ ಮಹಿಳೆಯರು ಅವರ ಮಾಂಗಲ್ಯ ಸಮೇತ ಹೋರಾಟ ಹಮ್ಮಿಕೊಳ್ಳವುದಾಗಿ ಎಚ್ಚರಿಕೆ ನೀಡಿದರು.
ಮನವಿ ಸ್ವೀಕರಿಸಿದ ಅಬಕಾರಿ ಆಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಹರೀಶ್, ಆಂಜಿನಪ್ಪ, ಪುತ್ತೇರಿ ರಾಜು, ಕಿರಣ್, ಸುರೇಶ್ ಬಾಬು, ವೆಂಕಟರಮಣಪ್ಪ, ನಾಗಭೂಷಣ್, ಯಾರಂಘಟ ಗಿರೀಶ್, ಶಕುಂತಲಾ ಶೈಲಜ ರತ್ನಮ್ಮ, ಗೌರಮ್ಮ, ರತ್ನಮ್ಮ, ಚೌಡಮ್ಮ, ವೆಂಕಟಮ್ಮ, ಪವಿತ್ರ, ನಯನ ಇನ್ನಿತರರು ಇದ್ದರು.