ಸ್ವಾಭಿಮಾನದಿಂದ ಬದುಕಲಿಕ್ಕಾಗಿ ದೊಡ್ಡ ಬಂಡವಾಳ ಇಲ್ಲದೆ ನಡೆಸುವ ವ್ಯಾಪಾರವೇ ಈ ಬೀದಿಬದಿ ವ್ಯಾಪಾರ.
ಕನ್ನಡಪ್ರಭ ವಾರ್ತೆ ಕಾರಟಗಿ
ಯಾರ ಬಳಿಯೂ ಕೈಚಾಚದೆ, ಸ್ವಂತ ಶಕ್ತಿ ಮತ್ತು ಯುಕ್ತಿ ಸ್ವಾಭಿಮಾನದಿಂದ ನಡೆಸುವ ವ್ಯಾಪಾರ ಬೀದಿ ಬದಿ ವ್ಯಾಪಾರ ಎಂದು ಬೀದಿ ಬದಿ ವ್ಯಾಪಾರಿಗಳ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಮಕ್ಬುಲ್ ಸಾಬ್ ಹೂಗಾರ ಹೇಳಿದರು.
ಇಲ್ಲಿನ ಕರೆಪ್ಪತಾತಾನ ಗುಡಿಯಲ್ಲಿ ಸೋಮವಾರ ನಡೆದ ಬೀದಿಬದಿ ವ್ಯಾಪಾರಿಗಳ ಸಭೆಯಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಗುರುತಿನ ಕಾರ್ಡ್ ವಿತರಿಸಿ ಮಾತನಾಡಿದರು.
ಸ್ವಾಭಿಮಾನದಿಂದ ಬದುಕಲಿಕ್ಕಾಗಿ ದೊಡ್ಡ ಬಂಡವಾಳ ಇಲ್ಲದೆ ನಡೆಸುವ ವ್ಯಾಪಾರವೇ ಈ ಬೀದಿಬದಿ ವ್ಯಾಪಾರ. ಉಳ್ಳವರ, ಆಳುವವರ ಬಳಿ ತೆರಳಿ ಕಾಲಕ್ಕೆ ತಕ್ಕಂತೆ ಕೈ ಚಾಚುವ ಗುಣ ಈ ವ್ಯಾಪಾರಿಗಳಲ್ಲಿ ಇಲ್ಲ. ಏನೇ ಇದ್ದರೂ ಬೇಸಿಗೆ, ಮಳೆ ಚಳಿ ಎನ್ನದೇ ಎಲ್ಲ ಕಾಲಕ್ಕೂ ಮೈವೊಡ್ಡಿ ಬೆವರು ಸುರಿಸಿ ಕಷ್ಟ-ಇಷ್ಟ ಪಟ್ಟು ತಮ್ಮ ಬದುಕಿನ ದಾರಿ ಹುಡುಕಿಕೊಂಡವರೇ ಈ ಬೀದಿಬದಿ ವ್ಯಾಪಾರಿಗಳು ಎನ್ನಲು ಹೆಮ್ಮೆ ಆಗುತ್ತದೆ ಎಂದು ಹೇಳಿದರು.
ಬೀದಿ ಬದಿ ವ್ಯಾಪಾರಿ ಆಗುವ ಆಸೆ ಹೊತ್ತು ಯಾರೂ ಹುಟ್ಟಿ ಬೆಳೆದವರಲ್ಲ. ಆದರೆ, ಅವರ ಬದುಕು ಸ್ವಾಭಿಮಾನದ ಸಂಕೇತ. ಬೀದಿ ಬದಿ ವ್ಯಾಪಾರಿಗಳ ರಕ್ಷಣೆಗಾಗಿ ೨೦೧೪ರಲ್ಲಿ ಲೋಕಸಭೆಯಲ್ಲಿ ಬೀದಿ ಬದಿ ವ್ಯಾಪಾರಿಗಳ ಹಿತ ರಕ್ಷಣಾ ಕಾಯ್ದೆ ಜಾರಿಗೆ ಬಂತು. ಈ ವ್ಯಾಪಾರಿಗಳನ್ನು ಏಕಾಏಕಿ ಎತ್ತಂಗಡಿ ಮಾಡುವುದನ್ನು ಅದು ನಿಷೇಧಿಸುತ್ತದೆ. ಬೀದಿ ಬದಿ ವ್ಯಾಪಾರಿಗಳು ಹಳ್ಳಿಯ ರೈತರ ಮಿತ್ರರಾಗಿದ್ದಾರೆ. ರೈತರು ಬೆಳೆದ ಫಲವನ್ನು ಬೀದಿ ಬದಿಯಲ್ಲಿ ಮಾರುವುದರಿಂದ ರೈತರಿಗೂ ಅನುಕೂಲ ಸಿಕ್ಕಂತಾಗಿದೆ ಎಂದರು.
ತಾಲೂಕು ಬೀದಿಬದಿ ವ್ಯಾಪಾರಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಅಮರೇಶ ಬಿಜಕಲ್ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಎಚ್. ಚಾಂದಸಿಂಗ್ ರಜಪೂತ್, ಉಪಾಧ್ಯಕ್ಷ ಬಸನಗೌಡ ಆರ್ಟಿಸಿ, ಕಾರ್ಯದರ್ಶಿ ರುದ್ರಮುನಿ, ಜಿಲ್ಲಾ ಪ್ರ. ಕಾರ್ಯದರ್ಶಿ ಮೌನೇಶ ಕೊಪ್ಪಳ, ಮುತ್ತಣ್ಣ ಮಾದಿನೂರು, ಚಂದ್ರಕಾಂತ ಸಜ್ಜನ್, ಬಸವರಾಜ ಉಪನಾಳ, ಹನುಮಮ್ಮ, ತಿಪ್ಪಮ್ಮ ರಜಪೂತ್, ತುಳಜಾರಾಮಸಿಂಗ್, ಲಕ್ಷ್ಮೀ, ಹನುಮಮ್ಮ, ಹಿಮಾಮ್ಭೀ, ಅಂಬಮ್ಮ, ಹುಸೇನ್ಪಾಷ್ ಬೇವಿನಗಿಡ, ಯಮನಪ್ಪ, ಕೃಷ್ಣಪ್ಪ, ಬಸವರಾಜಪ್ಪ, ಅಮರೇಶಪ್ಪ, ಶರಣಬಸವ, ಮುಸ್ತಾಫ್ ಇದ್ದರು. ಖಾದರಬಾಷ್ ಕಾರ್ಯಕ್ರಮ ನಿರ್ವಹಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.