ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ನವಜಾತ ಶಿಶುಗಳ ಆರೈಕೆ ಸೇವೆ ಬಲಪಡಿಸಿ

KannadaprabhaNewsNetwork | Published : Mar 12, 2024 2:01 AM

ನವಜಾತ ಶಿಶುಗಳ ಆರೈಕೆಯ ಸೇವೆಯನ್ನು ಬಲಪಡಿಸಿ, ಶಿಶು ಮರಣ ಪ್ರಮಾಣ ತಗ್ಗಿಸಿ.

ಚಿತ್ರದುರ್ಗ: ನವಜಾತ ಶಿಶುಗಳ ಆರೈಕೆಯ ಸೇವೆಯನ್ನು ಬಲಪಡಿಸಿ, ಶಿಶು ಮರಣ ಪ್ರಮಾಣ ತಗ್ಗಿಸಿ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಹೇಳಿದರು.

ಚಿತ್ರದುರ್ಗ ತಾಲೂಕಿನ ದೊಡ್ಡ ಸಿದ್ದವ್ವನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಭಾಂಗಣದಲ್ಲಿ ಸೋಮವಾರ ಪ್ರಧಾನಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನ ಕಾರ್ಯಕ್ರಮದಲ್ಲಿ ತಾಯಂದಿರ ಸಭೆ ಉದ್ದೇಶಿಸಿ ಮಾತನಾಡಿದರು.

ಚಿತ್ರದುರ್ಗ ತಾಲೂಕಿನ ಅಂಕಿ ಅಂಶ ಪರಿಶೀಲಿಸಿ ನೋಡಿದಾಗ ಈ ವರ್ಷದಲ್ಲಿ ಶಿಶು ಮರಣ ದೊಡ್ಡಸಿದ್ದವ್ವನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹೆಚ್ಚು ಕಂಡು ಬಂದಿದೆ. ಶಿಶು ಮರಣದ ಪ್ರಮುಖ ಕಾರಣವೆಂದರೆ ಜನ್ಮ ದೋಷಗಳು, ಜನನ ಉಸಿರುಕಟ್ಟುವಿಕೆ, ನ್ಯುಮೋನಿಯಾ, ಶಿಶುವಿನ ಸೋಂಕು, ಅತಿಸಾರ, ಮಲೇರಿಯಾ, ದಡಾರ, ಅಪೌಷ್ಟಿಕತೆ, ವಿರೂಪಗಳು, ಭ್ರೂಣದ ಅಸಹಜ ಪ್ರಸುತಿ, ಟರ್ಮ್ ಹೆರಿಗೆ ತೊಡಕುಗಳು ಕಾರಣಗಳಾಗಿವೆ ಎಂದರು.

ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಜಾನಕಿ ಮಾತನಾಡಿ, ಮನೆ ಆಧಾರಿತ ನವಜಾತ ಶಿಶುವಿನ ಆರೈಕೆ ಭೇಟಿಯ ದಿನಗಳಂದು ಬಾಣಂತಿಯರನ್ನು ಆಶಾ ಕಾರ್ಯಕರ್ತೆಯರು ಭೇಟಿ ಮಾಡಬೇಕು. ಪ್ರಸವದ ನಂತರದ ಆರೈಕ, ತಾಯಿ ಪೌಷ್ಟಿಕಾಹಾರ, ಎದೆ ಹಾಲುಣಿಸುವುದು, ಅವಶ್ಯಕ ನವಜಾತ ಶಿಶು ಆರೈಕೆ, ಕುಟುಂಬ ಯೋಜನೆ ಸೇವೆಗಳು ಅನಾರೋಗ್ಯದ ಆರಂಭಿಕ ಲಕ್ಷಣಗಳನ್ನು ಗುರುತಿಸಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳ ಗಮನಕ್ಕೆ ತರಬೇಕು ಎಂದರು.

ಪ್ರಾಥಮಿಕ ಆರೋಗ್ಯ ಕೇಂದ್ರ ಡಿ.ಎಸ್.ಹಳ್ಳಿ, ಡಾ.ಶಮೈಲಾ ಮಾತನಾಡಿ, ಮೊದಲ 6 ತಿಂಗಳು ಕೇವಲ ತಾಯಿ ಎದೆ ಹಾಲು, 6 ತಿಂಗಳ ನಂತರ ಪೂರಕ ಆಹಾರ ಹಾಗೂ 2 ವರ್ಷಗಳ ತನಕ ಸ್ತನ್ಯಪಾನ ಮುಂದುವರೆಸಬೇಕು ಎಂದರು.

ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀಧರ್, ಹಿರಿಯ ಆರೋಗ್ಯ ಸುರಕ್ಷತಾಧಿಕಾರಿ ರೇಣುಕಮ್ಮ, ಆರೋಗ್ಯ ನಿರೀಕ್ಷಣಾಧಿಕಾರಿ ಮಾರುತಿ, ಆರೋಗ್ಯ ಸುರಕ್ಷತಾ ಅಧಿಕಾರಿಗಳಾದ ಅನಿತಾ, ರೇಖಾ, ರತ್ನಮ್ಮ ಮಂಜುಳಾ, ಆಶಾ ಕಾರ್ಯಕರ್ತೆಯರು ಗರ್ಭಿಣಿ ಮಹಿಳೆಯರು ಬಾಣಂತಿಯರು ಪಾಲ್ಗೊಂಡಿದ್ದರು.