ಸಂಡೂರು: ಕಾಂಗ್ರೆಸ್ ಪಕ್ಷವನ್ನು ಬೂತ್, ಮಂಡಲ್, ಬ್ಲಾಕ್ ಮಟ್ಟದಲ್ಲಿ ಬಲಪಡಿಸುವ ಉದ್ದೇಶದೊಂದಿಗೆ ಕಾಂಗ್ರೆಸ್ ಪಕ್ಷದಿಂದ ದೇಶದಾದ್ಯಂತ ಸಂಘಟನ್ ಸೃಜನ್ ಅಭಿಯಾನವನ್ನು ಆರಂಭಿಸಲಾಗಿದೆ ಎಂದು ಪಕ್ಷದ ವೀಕ್ಷಕ ಅರುಣ್ ಯಾದವ್ ತಿಳಿಸಿದರು.
ಅಭಿಯಾನವು ಗುಜರಾತ್ ರಾಜ್ಯದಿಂದ ಆರಂಭವಾಗಿದೆ. ಈ ಬಾರಿ ಪಕ್ಷದ ಬ್ಲಾಕ್, ಬೂತ್ ಮಟ್ಟದ ಕಾರ್ಯಕರ್ತರು, ಜನ ಸಾಮಾನ್ಯರು ಹಾಗೂ ಎನ್ಜಿಒಗಳೊಂದಿಗೆ ಚರ್ಚೆ ಮಾಡಿ, ಅವರಿಂದ ಅಭಿಪ್ರಾಯಗಳನ್ನು ಸಂಗ್ರಹಿಸಿ ಪಕ್ಷದ ಜಿಲ್ಲಾಧ್ಯಕ್ಷರನ್ನು ಆಯ್ಕೆ ಮಾಡಲಾಗುವುದು ಎಂದರು.
ಶಾಸಕಿ ಅನ್ನಪೂರ್ಣ ಈ ತುಕಾರಾಂ ಮಾತನಾಡಿ, ಗ್ರಾಮೀಣ ಜನರು ನೇರವಾಗಿ ಪಕ್ಷದ ಅಧ್ಯಕ್ಷರನ್ನು ಸಂಪರ್ಕಿಸುವ ರೀತಿಯಲ್ಲಿ ಪಕ್ಷವನ್ನು ಬಲಪಡಿಸಬೇಕಿದೆ. ಗ್ರಾಮೀಣ ಭಾಗದ ಜನರ ಧ್ವನಿ ಪಕ್ಷದ ಅಧ್ಯಕ್ಷರಿಗೆ ತಲುಪುತ್ತಿರಲಿಲ್ಲ. ಪ್ರತಿ ಕಾರ್ಯಕರ್ತರ ಧ್ವನಿಗೂ ಬೆಲೆ ಕೊಡುವ ಕೆಲಸವಾಗಬೇಕಿದೆ. ಪಕ್ಷದ ವೀಕ್ಷಕರು ಜನಾಭಿಪ್ರಾಯವನ್ನು ಸಂಗ್ರಹಿಸಿ, ಯಾರು ಸಕ್ರಿಯವಾಗಿ ಪಕ್ಷ ಸಂಘಟನೆಯಲ್ಲಿ ಪಾಲ್ಗೊಂಡಿದ್ದಾರೋ ಅಂತಹವರಿಗೆ ಹೆಚ್ಚಿನ ಸ್ಥಾನಮಾನ ನೀಡುವರು.ಯುವ ಜನತೆ ಪಕ್ಷದಿಂದ ದೂರ ಸರಿಯುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಯುವಜನತೆಯನ್ನೂ ಪಕ್ಷಕ್ಕೆ ಸೇರಿಸಿಕೊಂಡು ಪಕ್ಷವನ್ನು ಬಲಪಡಿಸಲು ಶ್ರಮಿಸೋಣ. ಅವರ ವಿಚಾರಧಾರೆಗೆ ಪುಷ್ಠಿ ನೀಡೋಣ. ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಮುಂತಾದವರ ಆಶಯದಂತೆ ಪಕ್ಷ ಹಾಗೂ ದೇಶ ಕಟ್ಟುವ ಕಾರ್ಯವನ್ನು ಕೈಗೊಳ್ಳೋಣ. ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಈಗಾಗಲೇ ಎಸ್ಐಆರ್ ಪ್ರಕ್ರಿಯೆ ಶೇ.೧೦೦ ಮುಕ್ತಾಯವಾಗಿದೆ. ತೋರಣಗಲ್ಲು ಭಾಗದಲ್ಲಿ ಮಾತ್ರ ವಲಸಿಗರಿಂದಾಗಿ ಸ್ವಲ್ಪ ತೊಂದರೆಯಾಗಿದೆ. ಅದನ್ನೂ ಸರಿಪಡಿಸಲಾಗುತ್ತಿದೆ ಎಂದರು.