ಕನಕಪುರ: ತಾಲೂಕಿನ ಕುರುಬರಹಳ್ಳಿಯಲ್ಲಿ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಅನುಕುಮಾರ್ ರೈತ ಸಂಘವನ್ನು ಪುನಃಶ್ಚೇತನಗೊಳಿಸಿ ಪದಾಧಿಕಾರಿಗಳಿಗೆ ಹಸಿರು ಶಾಲು ಹೊದಿಸಿ ಸಂಘಟನೆಯ ಸದಸ್ಯರನ್ನಾಗಿ ನೇಮಕ ಮಾಡಿ ಜವಾಬ್ದಾರಿ ನೀಡಿದರು. ಬಳಿಕ ಮಾತನಾಡಿದ ಅವರು, ರಾಜ್ಯ ರೈತ ಸಂಘ ಮತ್ತು ದಲಿತ ಸಂಘಟನೆಗಳು ರಾಜ್ಯದಲ್ಲಿ ಬಲವರ್ಧನೆ ಆದಾಗ ಮಾತ್ರ ಆಳುವ ಸರ್ಕಾರಗಳು, ಬಂಡವಾಳಶಾಹಿಗಳು ಹಾಗೂ ಭೂಗಳ್ಳರಿಗೆ ಅಂಕುಶ ಹಾಕಿ ನಿಯಂತ್ರಣದಲ್ಲಿ ಇಡಬಹುದು. ಇಲ್ಲವಾದರೆ ಬಂಡವಾಳಶಾಹಿಗಳು ಸರ್ಕಾರಿ ಜಮೀನನ್ನು ದೋಚಿ ಬಡವರ ಭೂಮಿಯನ್ನು ಕಸಿದುಕೊಂಡು ದೇಶವನ್ನು ಬರಿದು ಮಾಡಿ ಬಿಡುತ್ತಾರೆ ಎಂದು ಹೇಳಿದರು. ದಮ್ಮ ದೀವಿಗೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ್ ಮಾತನಾಡಿ, ರಾಜ್ಯದಲ್ಲಿ ರೈತ ಸಂಘಟನೆ ಪ್ರತಿರೋಧದ ಶಕ್ತಿಯಾಗಿ ನಿಂತಿದೆ. ದುರ್ಬಲ ಸಮುದಾಯಗಳ ಅಂತರಂಗದ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತಿರುವ ರೈತ ಸಂಘ ಆಹಾರ ಭದ್ರತೆಯನ್ನು ಸಂರಕ್ಷಿಸಲು ಒಂದು ಕಾಲದಲ್ಲಿ ಹೋರಾಟಗಳನ್ನು ನಡೆಸಿ ಸರ್ಕಾರಕ್ಕೆ ಸಲಹೆ ನೀಡುವ ಜವಾಬ್ದಾರಿಯುತ ಸಂಘಟನೆಯಾಗಿ ನೆಲೆ ನಿಂತಿತ್ತು ಎಂಬುದು ಗಮನಾರ್ಹ. ಇದನ್ನು ಕೆಲ ರಾಜಕಾರಣಿಗಳ ಪಿತೂರಿ ಮತ್ತು ಚಿತಾವಣೆಯಿಂದ ತಮ್ಮ ರಾಜಕೀಯ ಸ್ಥಾನಮಾನಗಳಿಗೆ ಅಡ್ಡಿ ಉಂಟು ಮಾಡುತ್ತದೆ, ಚುನಾವಣಾ ಸಂದರ್ಭದಲ್ಲಿ ಪ್ರತಿರೋಧದ ಶಕ್ತಿಯಾಗಿ ಪ್ರಭಾವಿ ಅಭ್ಯರ್ಥಿಗಳ ವಿರುದ್ಧ ಸ್ಪರ್ಧೆ ಮಾಡುತ್ತದೆ ಎಂಬ ಕಾರಣದಿಂದ ರಾಜಕಾರಣದಿಂದ ದೂರವಿಡಲು ರೈತ ಸಂಘಟನೆ ಮತ್ತು ಅದರೊಳಗಿನ ಕೆಲ ಚಮಚ ನಾಯಕರನ್ನು ಬಳಸಿಕೊಂಡು ನೈಜ ರೈತ ಸಂಘಟನೆಯನ್ನು ಛಿದ್ರಛಿದ್ರ ಮಾಡಿದ್ದಾರೆ. ಹಲವು ವರ್ಷಗಳಿಂದ ತನ್ನ ಶಕ್ತಿ ಸಾಮರ್ಥ್ಯ ಕಳೆದುಕೊಂಡಿರುವ ರೈತ ಸಂಘಟನೆ ಹಲವು ಬಣಗಳಾಗಿ ಒಡೆದಿದೆ. ಪರಸ್ಪರ ಕಚ್ಚಾಡುವ ಗುಂಪುಗಳಾಗಿ, ಒಬ್ಬ ನಾಯಕ ಮತ್ತೊಬ್ಬ ನಾಯಕನ ಮೇಲೆ ಕೆಸರೆರಚಾಡುವ ಸಣ್ಣ ಸಣ್ಣ ಗುಂಪುಗಳಾಗಿ ರೈತ ಸಂಘಟನೆ ತನ್ನ ಸೈದ್ಧಾಂತಿಕ ಸಂಸ್ಥಾಪಕ ನಾಯಕ ಪ್ರೊ. ಎಂ.ಡಿ.ನಂಜುಂಡಸ್ವಾಮಿ, ವಡ್ದರ್ಸೆ ರಘುರಾಮಶೆಟ್ಟಿ ಸುಂದರ, ಪ್ರೊ.ಬಿ.ಕೃಷ್ಣಪ್ಪ, ದೇವನೂರು ಮಹಾದೇವ, ಕೆ.ಎಸ್.ಪುಟ್ಟಣ್ಣಯ್ಯ, ಗಣೇಶ್ ಮೊದಲಾದ ರೈತ ನಾಯಕರು ಮತ್ತು ಅವರ ಸಿದ್ಧಾಂತಗಳನ್ನು ಗಾಳಿಗೆ ತೂರಿ ಸ್ವಹಿತಾಸಕ್ತಿ ಮತ್ತು ಸ್ವಾರ್ಥದ ಪರಾಕಷ್ಟೆ ತಲುಪಿದ ಪರಿಣಾಮ ರಾಜ್ಯದಲ್ಲಿ ರೈತ ಸಂಘಟನೆ ತನ್ನ ಅಸ್ತಿತ್ವ ಕಳೆದುಕೊಂಡಿದೆ. ಇನ್ನೂ ಮುಂದಾದರೂ ರೈತ ಸಂಘಟನೆಗೆ ಬಲಿಷ್ಟದ ನಾಯಕತ್ವದ ಅಗತ್ಯವಿದೆ ಎಂದು ಹೇಳಿದರು.
ಕನಕಪುರ ತಾಲೂಕಿನ ಕುರುಬರಹಳ್ಳಿಯಲ್ಲಿ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಅನುಕುಮಾರ್
ನೇತೃತ್ವದಲ್ಲಿ ನೂತನ ಪದಾಧಿಕಾರಿಗಳ ನೇಮಕ ಮಾಡಲಾಯಿತು.