ಕನ್ನಡಪ್ರಭ ವಾರ್ತೆ ನಾಗಮಂಗಲ
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೈಗೆ ಕಪ್ಪು ಪಟ್ಟಿಧರಿಸಿ ತಾಲೂಕಿನ 50ಕ್ಕೂ ಹೆಚ್ಚು ಗ್ರಾಮ ಆಡಳಿತ ಅಧಿಕಾರಿಗಳು ಪಟ್ಟಣದ ತಾಲೂಕು ಆಡಳಿತ ಸೌಧದ ಮುಂಭಾಗದಲ್ಲಿ 2ನೇ ಹಂತದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಿದರು.ತಾಲೂಕು ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಅಧ್ಯಕ್ಷ ಈರಣ್ಣ ದಾನಸೂರ ಮಾತನಾಡಿ, ಸರ್ಕಾರದ ಯಾವುದೇ ಯೋಜನೆಗಳು ಮತ್ತು ಸವಲತ್ತುಗಳು ಜನರಿಗೆ ಸಿಗಬೇಕೆಂದರೆ ಗ್ರಾಮ ಆಡಳಿತ ಅಧಿಕಾರಿಗಳ ಪಾತ್ರ ಬಹುಮುಖ್ಯವಾಗಿದೆ. ಕಂದಾಯ ಇಲಾಖೆಯ ಆಧಾರ ಸ್ಥಂಭವಾಗಿರುವ ನಾವು ಮೂಲ ಸೌಲಭ್ಯಗಳ ಕೊರತೆ ನಡುವೆಯೂ ಜನಸಾಮಾನ್ಯರ ಹಿತ ಕಾಯುವ ಉದ್ದೇಶದಿಂದ ದುಡಿಯುತ್ತಿದ್ದೇವೆ ಎಂದರು.
ಸಾರ್ವಜನಿಕರಿಗೆ ನೇರವಾಗಿ ಸರ್ಕಾರದ ಸೇವೆ ನೀಡುತ್ತಿರುವ ಗ್ರಾಮ ಆಡಳಿತ ಅಧಿಕಾರಿಗಳಿಗೆ ಸೂಕ್ತ ಕಚೇರಿ ಇಲ್ಲ. ಮಹಿಳಾ ಗ್ರಾಮ ಆಡಳಿತ ಅಧಿಕಾರಿಗಳಿಗೆ ಸುರಕ್ಷತಾ ಸೌಲಭ್ಯವಿಲ್ಲ. ಯಾವುದೇ ಸೇವಾ ಬಡ್ತಿ ಇಲ್ಲದೆ ನಮ್ಮದೇ ಮೊಬೈಲ್, ಕರೆನ್ಸಿ, ಡೇಟಾ, ವಾಹನ ಬಳಸಿಕೊಂಡು ಕೆಲಸ ಮಾಡುವುದಾದರೆ ಕುಟುಂಬ ನಿರ್ವಹಣೆ ಜೊತೆಗೆ ನಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವುದಾದರೂ ಹೇಗೆ ಎಂದು ಪ್ರಶ್ನಿಸಿದರು.ವೃಂದದ ನೌಕರರ ಬೇಡಿಕೆ ವಿಚಾರವಾಗಿ ಸರ್ಕಾರ ಯಾವುದೇ ತೃಪ್ತಿಕರ ಕ್ರಮ ಕೈಗೊಳ್ಳುತ್ತಿಲ್ಲ. ಈ ಹಿಂದೆ ಮೊದಲ ಹಂತದ ಮುಷ್ಕರ ನಡೆಸಿದ ವೇಳೆ 3 ತಿಂಗಳಲ್ಲಿ ಬೇಡಿಕೆಗಳನ್ನು ಈಡೇರಿಸುವುದಾಗಿ ನೀಡಿದ್ದ ಭರವಸೆ ಹುಸಿಯಾಗಿದೆ ಎಂದು ದೂರಿದರು.
ಸುಸಜ್ಜಿತ ಕಚೇರಿ, ಪೀಠೋಪಕರಣ, ಮೊಬೈಲ್ ಫೋನ್, ಸಿಮ್, ಡೇಟಾ, ಗೂಗಲ್ಕ್ರೋಮ್ ಬುಕ್ ಅಥವಾ ಲ್ಯಾಪ್ಟಾಪ್, ಪ್ರಿಂಟರ್, ಸ್ಕ್ಯಾನರ್ ಕಲ್ಪಿಸಬೇಕು. ಹಾಗಾಗಿ ನಮ್ಮ ಎಲ್ಲಾ ಬೇಡಿಕೆಗಳು ಈಡೇರುವ ತನಕ ನಮ್ಮ ಮೊಬೈಲ್ನಲ್ಲಿರುವ 21 ಬಗೆಯ ಆಪ್, ವೆಬ್ ತಂತ್ರಾಂಶಗಳು ಹಾಗೂ ಲೇಖನಿ ಸ್ಥಗಿತಗೊಳಿಸಿ 2ನೇ ಹಂತದ ಅನಿಧಿಷ್ಠಾವಧಿ ಮುಷ್ಕರಕ್ಕೆ ಮುಂದಾಗಿದ್ದೇವೆ. ಇದಕ್ಕಾಗಿ ಒಂದು ತಿಂಗಳ ಕಾಲ ರಜೆ ಹಾಕಿದ್ದೇವೆ ಎಂದರು.ಪ್ರತಿಭಟನೆಯಲ್ಲಿ ಸಂಘದ ಉಪಾಧ್ಯಕ್ಷ ಕೆ.ದೀಪಕ್, ಪ್ರಧಾನ ಕಾರ್ಯದರ್ಶಿ ಬಸವರಜು ಕಂಚೋಳಿ, ರಾಜ್ಯ ಪರಿಷತ್ ಸದಸ್ಯ ಎಚ್.ಸಂತೋಷ್, ಜಿಲ್ಲಾ ಮಹಿಳಾ ಘಟಕದ ಉಪಾಧ್ಯಕ್ಷೆ ಪಿ.ಸೌಮ್ಯ, ಕರ್ಣ, ಮೀನಾಕ್ಷಿ, ಅಜಯ್, ಸುಶೀಲ, ತೇಜಸ್ವಿನಿ, ಭಾರತಿ, ಸದ್ದಾಂ, ಮಣಿಕಂಠ, ಲೋಹಿತ್, ಪ್ರದೀಪ್ಕುಮಾರ್, ಮರಿಸ್ವಾಮಿ, ಗುಂಡೂರಾರ್ ಸೇರಿದಂತೆ ೫೦ಕ್ಕೂ ಹೆಚ್ಚು ಗ್ರಾಮ ಆಡಳಿತ ಅಧಿಕಾರಿಗಳು ಇದ್ದರು.