ಮುಕ್ತ, ನ್ಯಾಯಸಮ್ಮತ ಚುನಾವಣೆಗೆ ಶ್ರಮಿಸಿ: ಲಕ್ಷ್ಮೀ ಸೂಚನೆ

KannadaprabhaNewsNetwork | Published : Apr 23, 2024 12:51 AM

ಸಾರಾಂಶ

ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಮೇ 7ರಂದು ಚುನಾವಣೆ ನಡೆಯುತ್ತಿದೆ. ಚುನಾವಣೆಯನ್ನು ಮುಕ್ತ, ನ್ಯಾಯ ಸಮ್ಮತವಾಗಿ ನಡೆಸಲು ಹಾಗೂ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾದಲ್ಲಿ ತಕ್ಷಣ ಚುನಾವಣಾಧಿಕಾರಿಗಳು ಕ್ರಮ ಕೈಗೊಳ್ಳಲು ಸ್ವತಂತ್ರರು ಎಂದು ಚುನಾವಣಾ ಆಯೋಗದ ಸಾಮಾನ್ಯ ವೀಕ್ಷಕರಾದ ಎಂ.ಲಕ್ಷ್ಮೀ ದಾವಣಗೆಯಲ್ಲಿ ಹೇಳಿದ್ದಾರೆ.

- ಎಂಸಿಸಿ ಉಲ್ಲಂಘನೆ ವಿರುದ್ಧ ಶೀಘ್ರ ಕ್ರಮ ಜರುಗಿಸಲು ಚುನಾವಣಾಧಿಕಾರಿಗಳು ಸ್ವತಂತ್ರರು

- - - ಕನ್ನಡಪ್ರಭ ವಾರ್ತೆ, ದಾವಣಗೆರೆ ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಮೇ 7ರಂದು ಚುನಾವಣೆ ನಡೆಯುತ್ತಿದೆ. ಚುನಾವಣೆಯನ್ನು ಮುಕ್ತ, ನ್ಯಾಯ ಸಮ್ಮತವಾಗಿ ನಡೆಸಲು ಹಾಗೂ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾದಲ್ಲಿ ತಕ್ಷಣ ಚುನಾವಣಾಧಿಕಾರಿಗಳು ಕ್ರಮ ಕೈಗೊಳ್ಳಲು ಸ್ವತಂತ್ರರು ಎಂದು ಚುನಾವಣಾ ಆಯೋಗದ ಸಾಮಾನ್ಯ ವೀಕ್ಷಕರಾದ ಎಂ.ಲಕ್ಷ್ಮೀ ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಚುನಾವಣಾಧಿಕಾರಿಗಳು, ಸಹಾಯಕ ಚುನಾವಣಾಧಿಕಾರಿಗಳು, ಸ್ವೀಪ್ ಅಧ್ಯಕ್ಷರು, ನೋಡಲ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಆಯಾ ಕ್ಷೇತ್ರವಾರು ಚುನಾವಣಾ ಅಂಕಿ ಅಂಶ ಹಾಗೂ ಮಾದರಿ ನೀತಿ ಸಂಹಿತೆ ಅನುಷ್ಠಾನ ಕಾರ್ಯಸೂಚಿಯ ಬಗ್ಗೆ ಮಾಹಿತಿ ಪಡೆದು ಅವರು ಮಾತನಾಡಿದರು.

ನೀತಿ ಸಂಹಿತೆ ಉಲ್ಲಂಘನೆ ಮಾಹಿತಿ ಇದ್ದಲ್ಲಿ ಚುನಾವಣಾಧಿಕಾರಿಗಳ ಗಮನಕ್ಕೆ ತರಲಾಗುತ್ತದೆ. ಎಲ್ಲ ತಂಡದವರು ಕ್ರಿಯಾಶೀಲರಾಗಿ ಕೆಲಸ ಮಾಡಬೇಕು. ಮತದಾರರ ಮೇಲೆ ಯಾವುದೇ ಆಮಿಷ, ಒತ್ತಡ ಇಲ್ಲದಂತೆ ಮತದಾನದಲ್ಲಿ ಸ್ವಯಂಪ್ರೇರಿತರಾಗಿ ಭಾಗವಹಿಸುವಂತಹ ವಾತಾವರಣ ಕಲ್ಪಿಸಬೇಕು ಎಂದರು.

ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಮಾತನಾಡಿ, ಚುನಾವಣೆಯಲ್ಲಿ ಪಾರದರ್ಶಕತೆ, ಮುಕ್ತ, ನ್ಯಾಯಸಮ್ಮತ, ನಿಯಮಬದ್ಧ ಹಾಗೂ ಸಕ್ರಿಯವಾಗಿ ಚುನಾವಣಾ ಕರ್ತವ್ಯ ನಿರ್ವಹಿಸಬೇಕು. ಚುನಾವಣಾ ನಿಯಮ ಉಲ್ಲಂಘನೆ ಆಗದಂತೆ ನೋಡಿಕೊಳ್ಳಬೇಕು. ಚುನಾವಣಾ ಕರ್ತವ್ಯದಲ್ಲಿ ಉದಾಸೀನತೆ, ಎಂಸಿಸಿ ಅನುಷ್ಠಾನದಲ್ಲಿ ಲೋಪದೋಷ ಕಂಡುಬಂದಲ್ಲಿ ಚುನಾವಣಾ ವೀಕ್ಷಕರು ಆಯೋಗಕ್ಕೆ ನಿರ್ದಾಕ್ಷೀಣ್ಯವಾಗಿ ವರದಿ ಮಾಡಲಿದ್ದು, ತಪ್ಪಿತಸ್ಥರು ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ವೀಕ್ಷಕರಿಗೆ ಮಾಹಿತಿ:

ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಹರಪನಹಳ್ಳಿ ಸೇರಿದಂತೆ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳು ಸೇರಲಿವೆ. 8 ಕ್ಷೇತ್ರಗಳ ಸಹಾಯಕ ಚುನಾವಣಾಧಿಕಾರಿಗಳು ಕ್ಷೇತ್ರದಲ್ಲಿನ ಮತಗಟ್ಟೆಗಳು, ಇದರಲ್ಲಿ ಕ್ರಿಟಿಕಲ್, ವಲ್ನೆರೆಬಲ್, ಒಂದಕ್ಕಿಂತ ಹೆಚ್ಚು ಇರುವ ಕ್ಲಸ್ಟರ್ ಮತಗಟ್ಟೆ ಮತ್ತು 3ಕ್ಕಿಂತ ಹೆಚ್ಚು ಒಂದೇ ಕಡೆ ಇರುವ ಮತಗಟ್ಟೆಗಳ ವಿವರ ನೀಡಿದರು. ಮತ್ತು ಎಂ.ಸಿ.ಸಿ. ಅನುಷ್ಠಾನಕ್ಕೆ ಸಂಬಂಧಿಸಿದಂತೆ ವಾರ್ ರೂಂ ಮೂಲಕ ಅಕ್ರಮ ಚಟುವಟಿಕೆಗಳ ಮೇಲೆ ನಿಗಾ ವಹಿಸಿರುವ ಬಗ್ಗೆ ಮಾಹಿತಿ ನೀಡಿದರು.

ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ನೀತಿ ಸಂಹಿತೆ ಸಂದರ್ಭ ರಸ್ತೆ ಬದಿಯ ಇಲಾಖೆ ಜಾಗೃತಿ ಕಾರ್ಯಾಚರಣೆ ಹೆಚ್ಚಿಸಿ, ವಾಹನಗಳ ತಪಾಸಣೆ ಹೆಚ್ಚಿಸಲಾಗಿದೆ. ವಸ್ತುಗಳ ಸಂಗ್ರಹಣಾ ಗೋಡೌನ್‌ಗಳ ಶೋಧನೆ ಮೂಲಕ ಉಚಿತ ಕೊಡುಗೆಗಳ ಮೇಲೆ ಸಂಪೂರ್ಣ ಕಣ್ಗಾವಲು ವಹಿಸಲಾಗಿದೆ ಎಂದರು.

ಮನೆಯಿಂದ ಮತದಾನ:

ನೋಡಲ್ ಅಧಿಕಾರಿ ಭಾವನ ಮಾತನಾಡಿ, 85 ವರ್ಷ ಮೇಲ್ಪಟ್ಟ ಹಾಗೂ ವಿಶೇಷಚೇತನರು ಮನೆಯಿಂದಲೇ ಮತದಾನ ಮಾಡಲು ಅವಕಾಶ ಇದೆ. 85 ವರ್ಷ ಮೇಲ್ಪಟ್ಟ 1458 ಮತದಾರರು ಮತ್ತು 804 ವಿಶೇಷಚೇತನರು ಮನೆಯಿಂದಲೇ ಮತದಾನ ಮಾಡುವರು. ಅಗತ್ಯ ಸೇವೆಯಡಿ ಬರುವ 915 ಗೈರು ಮತದಾರರು ಸೌಲಭ್ಯ ಕೇಂದ್ರದಲ್ಲಿ ಮತದಾನ ಮಾಡುವರು ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷರಾದ ಸುರೇಶ್ ಬಿ. ಇಟ್ನಾಳ್ ಹಾಗೂ ಸಹಾಯಕ ಚುನಾವಣಾಧಿಕಾರಿ ಉಪಸ್ಥಿತರಿದ್ದರು.

- - -

-22ಕೆಡಿವಿಜಿ31ಃ:

ದಾವಣಗೆರೆಯಲ್ಲಿ ಚುನಾವಣಾ ಆಯೋಗ ಸಾಮಾನ್ಯ ವೀಕ್ಷಕರಾದ ಎಂ.ಲಕ್ಷ್ಮೀ ಚುನಾವಣಾಧಿಕಾರಿಗಳು, ಸಹಾಯಕ ಚುನಾವಣಾಧಿಕಾರಿಗಳು, ಸ್ವೀಪ್ ಅಧ್ಯಕ್ಷರು, ನೋಡಲ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

Share this article