ಕನ್ನಡಪ್ರಭ ವಾರ್ತೆ ಸಕಲೇಶಪುರ
ಪೂರ್ವಿಕರು ಸಂಸ್ಕಾರ ಸಂಸ್ಕೃತಿ ಉಳಿಸಿ ಬೆಳೆಸುವ ಉದ್ದೇಶದಿಂದ ಭೂಮಿ ದಾನ ನೀಡಿ ಮಠ ಕಟ್ಟಿ, ಸ್ವಾಮೀಜಿಗಳ ನೇಮಿಸುವ ಮೂಲಕ ಪೂಜೆ ಪುನಸ್ಕಾರಗಳನ್ನು ನಡೆಸಲಾಗುತಿತ್ತು. ಆದರೆ, ಇಂದು ಸ್ವಾಮೀಜಿಗಳಿಲ್ಲದ ಮಠ ಹಾಳುಸುರಿಯುತ್ತಿದ್ದು ಪೂಜೆಪುನಸ್ಕಾರಗಳು ನಿಂತೇ ಹೋಗಿವೆ. ದರ್ಪದ ಮೂಲಕ ಭಕ್ತರಿಗೆ ಮಠಕ್ಕೆ ಪ್ರವೇಶವಿಲ್ಲದಂತೆ ಮಾಡಲಾಗಿದೆ. ಭಕ್ತರಿಗಿಲ್ಲದ ಮಠ ಯಾವ ಪುರುಷಾರ್ಥಕ್ಕೆ. ಆದ್ದರಿಂದ, ಮಠವನ್ನು ಗ್ರಾಮಸ್ಥರ ಸುಪರ್ದಿಗೆ ನೀಡಬೇಕು ಇಲ್ಲಿ ಹಿಂದಿನಂತೆ ಧಾರ್ಮಿಕ ಕಾರ್ಯಗಳು ನಡೆಸುವ ಮೂಲಕ ಮಠವನ್ನು ಹಿಂದಿನ ಸ್ಥಿತಿಗೆ ಕೊಂಡೊಯ್ಯಲಾಗುವುದು ಎಂಬ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹೋರಾಟ ನಡೆಸಲಾಗುತ್ತಿದೆ ಎಂಬುದು ಗ್ರಾಮಸ್ಥರ ವಾದ. ನರಿಕೂಗು ಗಿರಿಮುಟ್ಟದಾಗಿದೆ:
ಕಳೆದ ಒಂದು ದಶಕದಿಂದ ಗ್ರಾಮಸ್ಥರು ತಾವೇ ಚಂದಾ ಹಾಕಿಕೊಂಡು ಮಠದ ಉಳಿವಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಮಠದ ಉಳಿವಿಗಾಗಿ ನಮ್ಮೊಂದಿಗೆ ಕೈಜೋಡಿಸಿ ಎಂದು ರಾಜ್ಯದ ಹಿರಿಯ ವೀರಶೈವ-ಲಿಂಗಾಯಿತ ಮುಖಂಡರಿಗೆ ಮನವಿ ಮಾಡಿದ್ದರೂ ಮುರುಘ ಮಠದ ಹೆಸರು ಕೇಳಿದ ತಕ್ಷಣ ಕ್ಷಮಿಸಿ ಎಂಬ ಉತ್ತರ ದೊರೆಯುತ್ತಿದೆ. ಇದರಿಂದಾಗಿ ಪ್ರಬಲ ಮಠದ ವಿರುದ್ದ ಗ್ರಾಮಸ್ಥರು ನಡೆಸುತ್ತಿರುವ ಹೋರಾಟ ನರಿಕೂಗು ಗಿರಿಮುಟ್ಟದಂತಾಗಿದೆ.ತೀವ್ರಮಟ್ಟದ ಪ್ರತಿರೋಧ:ಇತ್ತೀಚೆಗೆ ಮಠದ ಸುಮಾರು ೧೨ ಎಕರೆ ಭೂಮಿಯನ್ನು ಒಂದೇ ಕುಟುಂಬದ ಮೂವರಿಗೆ ಮಠದ ನಿರ್ವಹಣೆ ಮಾಡಿದ್ದಾರೆ ಎಂಬ ಕಾರಣ ನೀಡಿ ಗುತ್ತಿಗೆ ನೀಡಲಾಗಿದೆ. ಇದರಿಂದ, ಕೆರಳಿದ ಗ್ರಾಮಸ್ಥರು ಅಕ್ರಮವಾಗಿ ಮಠದ ಆಸ್ತಿಯನ್ನು ಕಂಡಕಂಡವರಿಗೆ ನೀಡುತ್ತಿರುವುದನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿದ್ದು ಪ್ರಸಕ್ತ ವರ್ಷ ಆಡಳಿತಾಧಿಕಾರಿಗಳಿಗೆ ಕಾಫಿ ಕೊಯ್ಲು ನಡೆಸಲು ಅವಕಾಶ ನೀಡಿರಲಿಲ್ಲ. ಆದರೆ, ಮುರುಘಾ ಮಠದ ಆಡಳಿತಾಧಿಕಾರಿಗಳು ನೂರಾರು ಪೊಲೀಸ್ ಹಾಗೂ ತಮ್ಮ ಖಾಸಗಿ ಬೆಂಬಲಿಗರ ಪಡೆಯನ್ನು ಮಠದ ಸುತ್ತ ನಿಯೋಜಿಸುವ ಮೂಲಕ ಮೂರೇ ದಿನದಲ್ಲಿ ಕಾಫಿ ಕೊಯ್ಲು ನಡೆಸಿ ಕೊಂಡೊಯ್ಯದಿದ್ದಾರೆ. ಇತ್ತೀಚೆಗೆ ಗ್ರಾಮಸ್ಥರ ವಿರೋಧದ ನಡುವೆಯೂ ಮಠದ ಜಮೀನಿನಲ್ಲಿರುವ ನೂರಾರು ಮರಗಳನ್ನು ಕಡಿದು ಸಾಗಿಸಲಾಗಿದೆ. ಗ್ರಾಮಸ್ಥರು ನೀಡಿದ ದೂರಿನನ್ವಯ ಯಸಳೂರು ಅರಣ್ಯ ಇಲಾಖೆ ಅಕ್ರಮ ಮರ ಕಡಿತದ ವಿರುದ್ದ ಮಠದ ಆಡಳಿತಾಧಿಕಾರಿಗಳ ವಿರುದ್ದ ದೂರು ದಾಖಲಿಸಿದ್ದರು. ಇದರ ನಂತರವು ಮಠದ ಜಮೀನಿನಲ್ಲಿರುವ ಮರಗಳನ್ನು ಕಡಿದು ಸಾಗಿಸುವ ಪ್ರಯತ್ನ ನಡೆಸಲಾಗಿದೆ ಆದರೆ, ಇದಕ್ಕೆ ತೀವ್ರಮಟ್ಟದ ವಿರೋಧ ವ್ಯಕ್ತಿಪಡಿಸಿರುವ ಗ್ರಾಮಸ್ಥರು ಮಠದಲ್ಲಿರುವ ಪ್ರತಿಯೊಂದು ಬೆಲೆಬಾಳುವ ವಸ್ತುಗಳನ್ನು ಮಾರಾಟ ಮಾಡುವುದನ್ನೆ ಕಾಯಕವನ್ನಾಗಿ ಮಾಡಿಕೊಂಡಿರುವ ಆಡಳಿತಾಧಿಕಾರಿಗಳು ಮಠವನ್ನು ಸಂಪೂರ್ಣ ನಾಶದ ಅಂಚಿಗೆ ತಲುಪಿಸಿದ್ದಾರೆ ಎಂಬ ಆರೋಪ ಮಾಡುತ್ತಿದ್ದಾರೆ. ಆಡಳಿತಾಧಿಕಾರಿಗಳ ವಾದವೇ ಬೇರೆ:
ಮಠದ ಸಾಕಷ್ಟು ಜಮೀನನ್ನು ಗ್ರಾಮದ ಹಲವರು ಒತ್ತುವರಿ ಮಾಡಿಕೊಂಡು ಕಾಫಿ ತೋಟ ಬೆಳೆದಿದ್ದರೆ ಮತ್ತಷ್ಟು ಜನರು ಗುತ್ತಿಗೆ ಪಡೆದಿದ್ದಾರೆ. ಇದರಿಂದಾಗಿ ಗ್ರಾಮಸ್ಥರ ಒಡೆತನಕ್ಕೆ ಮಠ ಬಂದರೆ ಜಮೀನು ತೆರವು ಮಾಡಬೇಕಾಗುತ್ತದೆ ಎಂಬ ಭಯದಿಂದ ಮಠ ಉಳಿಸಿ ಎಂಬ ಗ್ರಾಮಸ್ಥರ ಹೋರಾಟದಲ್ಲಿ ಕೈ ಜೋಡಿಸುತ್ತಿಲ್ಲ ಬದಲಾಗಿ ಪರೋಕ್ಷವಾಗಿ ಆಡಳಿತಾಧಿಕಾರಿಗಳಿಗೆ ಬೆಂಬಲ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.
ಮಠ ಹಾಳಾಗುತ್ತಿದೆ ಎಂಬುದರಲ್ಲಿ ಅರ್ಥವಿಲ್ಲ. ಉತ್ತಮವಾಗಿ ಕಾಫಿ ತೋಟ ನಿರ್ವಹಣೆ ಮಾಡಲಾಗುತ್ತಿದೆ. ಅಲ್ಲದೆ ಮಠದ ಪುರತಾನ ಕಟ್ಟಡವನ್ನು ಸುಮಾರು ೫೦ ಲಕ್ಷ ರು. ವೆಚ್ಚದಲ್ಲಿ ಅಭಿವೃದ್ದಿಗೊಳಿಸಲಾಗುತ್ತಿದೆ. ಮೋಕ್ಷಪತಿ ಸ್ವಾಮೀಜಿ, ಚಂಗಡಿಹಳ್ಳಿಮಠದ ಉಸ್ತುವಾರಿ *ಹೇಳಿಕೆ - ಮಠವೆಂದರೆ ಧಾರ್ಮಿಕ ಘಮಲು ಇರುವ ಸ್ಥಳ ಇಲ್ಲಿ ಪೂಜೆ, ಪುನಸ್ಕಾರ,ಹೋಮ ಹವನ ನಡೆಯಬೇಕು, ಇಲ್ಲಿ ಮಠದ ಹೆಸರಿನಲ್ಲಿ ಕಾಫಿ ತೋಟವನ್ನು ಮಾತ್ರ ನಿರ್ವಹಿಸಲಾಗುತ್ತಿದೆ. ಆದ್ದರಿಂದ ಮಠವನ್ನು ಭಕ್ತಾದಿಗಳಿಗೆ ನೀಡಿ ಎಂಬ ಬೇಡಿಕೆ ಮುಂದಿಟ್ಟುಕೊಂಡು ಹೋರಾಟ ಮಾಡುತ್ತಿದ್ದೆವೆ. ಸಂತೋಷ್, ಚಂಗಡಿಹಳ್ಳಿ, ಮಠದ ಭಕ್ತ (11ಎಚ್ಎಸ್ಎನ್3ಎ)