ಕಾರಟಗಿ: ಪ್ರಸಕ್ತ ದಿನಗಳಲ್ಲಿ ರೈತರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದು. ಕೇಂದ್ರ ಮತ್ತು ರಾಜ್ಯ ಸರ್ಕಾರ ಬರೀ ಆಶ್ವಾಸನೆ ನೀಡುತ್ತಿವೆ.ಇವುಗಳ ನಡುವೆ ಕೃಷಿಕರ ಸಮಸ್ಯೆ ಪರಿಹಾರಕ್ಕಾಗಿ ಹೋರಾಡಲು ರೈತರು ಮುಂದಾಗಬೇಕಾಗಿದ್ದು, ಸಂಘಟನೆಗೆ ಹೆಚ್ಚು ಒತ್ತು ನೀಡುವ ಮೂಲಕ ಗ್ರಾಮ ಘಟಕಗಳನ್ನು ಹುಟ್ಟು ಹಾಕಬೇಕು ಎಂದು ರೈತ ಸಂಘದ ತಾಲೂಕಾಧ್ಯಕ್ಷ ನಾರಾಯಣ ಈಡಿಗೇರ ಹೇಳಿದರು.
ರೈತ ಸಂಘಟನೆಗೆ ಕಾರಣರಾದ ಪ್ರೋ.ನಂಜುಂಡಸ್ವಾಮಿ ಇಂದು ಈ ಸಮಾರಂಭದಲ್ಲಿ ಸ್ಮರಿಸಬೇಕು. ಸಂಘಟನೆ ಇಲ್ಲದಿದ್ದರೆ ರೈತರಿಗೆ ಬಲ ಬರುವುದಿಲ್ಲ. ಸಂಘಟನೆಗಳು ಬಲಿಷ್ಟವಾದರೆ ರೈತರು ಸದೃಢರಾಗುತ್ತಾರೆ.ಈ ನಿಟ್ಟಿನಲ್ಲಿ ಪ್ರತಿ ತಾಲೂಕಿನ ಪ್ರತಿ ಗ್ರಾಮಗಳಲ್ಲೂ ರೈತ ಸಂಘದ ಘಟಕಗಳಿದ್ದರೆ ರೈತರಿಗೆ ಭೀಮಬಲ ಬರುತ್ತದೆ. ಈ ನಿಟ್ಟಿನಲ್ಲಿ ರೈತ ಮಿತ್ರರು ರೈತರ ಸಂಘಟನೆಗಳಿಗೆ ಹೆಚ್ಚು ಒತ್ತು ನೀಡಿ ಗ್ರಾಮ ಘಟಕ ಆರಂಭಿಸಲು ಮುಂದಾಗಬೇಕು. ಪ್ರೊ. ನಂಜುಂಡಸ್ವಾಮಿ ಮಾರ್ಗದರ್ಶನಲ್ಲಿ ಮುನ್ನಡೆಯೋಣ ಎಂದರು.
ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಹನುಮಂತ್ಪ ನಾಯಕ ಮಾತನಾಡಿ, ರೈತರು ಎಷ್ಟೆ ಬೆಳೆ ಬೆಳೆದರೂ ಕೂಡ ಸಾಲದ ಸುಳಿಯಲ್ಲಿ ಸಿಲುಕಬೇಕಾದ ಅನಿವಾರ್ಯತೆ ಬಂದೊದಗಿದೆ. ಈ ಭಾರಿ ಕ್ರಸ್ಟ್ಗೇಟ್ ದುರಸ್ಥಿ ನಿಮಿತ್ತ ಎರಡನೇ ಬೆಳೆಗೆ ನೀರಿಲ್ಲದೆ ಈ ಬಾರಿ ರೈತರು ತೀವ್ರ ಸಂಕಷ್ಟ ಎದುರಿಸಬೇಕಾಗಿದೆ. ಸರ್ಕಾರ ರೈತರು ಬೆಳೆದ ಬೆಳೆಗೆ ಸೂಕ್ತ ಬೆಂಬಲ ಬೆಲೆ ನಿಗದಿಪಡಿಸಿ ರೈತರ ಸಮಸ್ಯಗೆ ಸ್ಪಂದನೆ ಮಾಡಿ ರೈತರ ಹಿತ ಕಾಪಾಡಬೇಕು ಎಂದರು.ರೈತ ಸಂಘಟನೆಯ ಖಾಜಾಹುಸೇನ್ ಮುಲ್ಲಾ ಮಾತನಾಡಿ, ಪಟ್ಟಣದಲ್ಲಿ ರೈತ ಸಂಘಟನೆಗೆ ಯಾವುದೇ ಸೂರು ಇರಲಿಲ್ಲ. ಈಗ ವಿಶೇಷ ಎಪಿಎಂಸಿ ಯಾರ್ಡನಲ್ಲಿ ರೈತರ ಭವನಕ್ಕೆ ಅವಕಾಶ ನೀಡಿದ್ದು ಸಂತೋಷದ ಸಂಗತಿ. ರೈತ ಸಮುದಾಯ ಭವನಗಳು ರೈತರು ಒಂದೆಡೆ ಸೇರಿ ಚರ್ಚಿಸಲು ಮತ್ತು ಮಾಹಿತಿ ವಿನಿಮಯ ಮಾಡಿಕೊಳ್ಳಲು ವೇದಿಕೆಯಾಗಿ ಕಾರ್ಯ ನಿರ್ವಹಿಸುತ್ತವೆ ಎಂದರು.