ಧಾರವಾಡ:
ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ಸದಾಶಿವ ಆಯೋಗದ ವರದಿ ಜಾರಿಗೊಳಿಸುವುದಾಗಿ ಭರವಸೆ ನೀಡಿತ್ತು. ಆದರೆ, ಸರ್ಕಾರ ಬಂದು ಒಂದೂವರೆ ವರ್ಷ ಕಳೆದರೂ ಸಿದ್ದರಾಮಯ್ಯನವರು ಈ ಬಗ್ಗೆ ಕಣ್ಣೆತ್ತಿ ನೋಡುತ್ತಿಲ್ಲ. ನ್ಯಾಯಯುತವಾಗಿ ಒಳ ಮೀಸಲಾತಿ ಹಕ್ಕಿಗಾಗಿ ಅನೇಕ ಹೋರಾಟ ಕೈಕೊಂಡಿರುವ ಸಮುದಾಯದ ಜನರ ತಾಳ್ಮೆ ಪರೀಕ್ಷಿಸುವ ಕೆಲಸವನ್ನು ಸರ್ಕಾರ ಮಾಡಬಾರದು. ಕೂಡಲೇ ನ್ಯಾಯಾಲಯದ ಆದೇಶದಂತೆ ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸಬೇಕೆಂದು ಸಮಿತಿ ಮುಖಂಡರು ಆಗ್ರಹಿಸಿದರು.
ನಗರದ ಕಲಾಭವನದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಬೃಹತ್ ಪಾದಯಾತ್ರೆ ನಡೆಸಿದ ಹೋರಾಟಗಾರರು, ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ನಂತರ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಮಾಜಿ ಸಚಿವ ಹನುಮಂತಪ್ಪ ಅಲ್ಕೋಡ್, ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ, ಮುಖಂಡರಾದ ವೆಂಕಟೇಶ ಸಗಬಾಲ, ಅಶೋಕ ದೊಡ್ಡಮನಿ, ಕರೆಪ್ಪ ಮಾದರ, ಬಸಪ್ಪ ಮಾದರ, ಅರ್ಜುನ ಪತ್ರೆಣ್ಣವರ, ಮೋಹನ ಹಿರೇಮನಿ, ಮಹೇಶ ಹುಲ್ಲೆನ್ನವರ, ಶಂಕರ ದೊಡ್ಡಮನಿ, ಕಲ್ಮೇಶ ಹಾದಿಮನಿ ಮತ್ತಿತರರು ಇದ್ದರು.