ಕನ್ನಡಪ್ರಭ ವಾರ್ತೆ ಕೋಲಾರ
ವಿಧಾನಸೌಧದಲ್ಲಿ ಕುಳಿತಿರುವ ಕಳ್ಳರು ಕೋಟಿಗಟ್ಟಲೆ ಲೂಟಿ ಮಾಡುತ್ತಿದ್ದಾರೆ, ಅವರಿಗೆ ಊರು ಉದ್ಧಾರ ಮಾಡುವ ಕಾಳಜಿಯಿಲ್ಲ, ಸಮಾಜದಲ್ಲಿನ ವ್ಯವಸ್ಥೆ ಸರಿಪಡಿಸಲು ಹೋರಾಟಗಳನ್ನು ರೂಪಿಸಬೇಕು ಎಂದು ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಹೇಳಿದರು.ನಗರದ ಸ್ಕೌಟ್ಸ್ ಭವನದಲ್ಲಿ ಕರವೇಯಿಂದ ವಿವಿಧ ಘಟಕಗಳ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಕನ್ನಡ ನಾಡು, ನುಡಿ, ಜಲದ ವಿಚಾರದಲ್ಲಿ ರಾಜೀಯಾಗುವ ಪ್ರಶ್ನೆಯಿಲ್ಲ, ಮಂಚೂಣಿಯಲ್ಲಿ ನಿಂತು ಹೋರಾಟ ನಡೆಸಿದ್ದು ರಕ್ಷಣಾ ವೇದಿಕೆ ಎಂದರು.
ನನಗೇನು ಜೈಲು, ಕೇಸು ಹೊಸದಲ್ಲ, ಡಿ.೨೭ರಂದು ಬೆಂಗಳೂರಿನಲ್ಲಿ ಬಹುದೊಡ್ಡ ಹೋರಾಟ ನಡೆಸಿದ್ದೇವೆ, ಸರ್ಕಾರವು ಹುನ್ನಾರ ನಡೆಸಿ ನನ್ನನ್ನು ಸೇರಿ ಕಾರ್ಯಕರ್ತರನ್ನು ಬಂಧಿಸಿ ಜೈಲಿಗೆ ಕಳುಹಿಸಿತು, ಇದರಿಂದ ನಮಗೇನು ನಷ್ಟವಾಗಿಲ್ಲ, ಪೊಲೀಸರು ಭಯದಿಂದ ಶೂನ್ಯ ಟ್ರಾಫಿಕ್ನಲ್ಲಿ ನ್ಯಾಯಾಲಯಕ್ಕೆ ಕರೆದುಕೊಂಡು ಹೋಗಿ, ಕರೆದುಕೊಂಡು ಬರುತ್ತಿದ್ದರು ಎಂದು ಹೇಳಿದರು.ಹೋರಾಟದ ಸಲುವಾಗಿ ರಾಜಧಾನಿಯಲ್ಲಿ ಕನ್ನಡ ರಾರಾಜಿಸಲು ೨೫ ವರ್ಷ ಬೇಕಾಯಿತು, ಬಿಬಿಎಂಪಿ ಆಯುಕ್ತರು ಕರೆ ಮಾಡಿ ೯೦ ಭಾಗ ಕನ್ನಡೀಕರಣ ಆಗಿದೆ, ವಾರದಲ್ಲಿ ಶೇ.೧೦೦ ಸಾಧನೆಯಾಗಲಿದೆ ಎಂದು ತಿಳಿಸಿದ್ದರು, ನಮ್ಮ ಹೋರಾಟದ ಪ್ರತಿಫಲ ಹೇಗಿರುತ್ತದೆ ಎಂಬುದಕ್ಕೆ ಇಂತಹ ಸಾಕಷ್ಟು ಉದಾಹರಣೆಗಳು ಇವೆ ಎಂದು ತಿಳಿಸಿದರು.
ಆಜ್ಞೆ ಮಾಡುವವರೆಲ್ಲ ಬೇಕಾದರೆ ವಿಧಾನ ಸೌಧದಲ್ಲಿ ಕುಳಿತುಕೊಳ್ಳಲಿ, ಕನ್ನಡ ಅಭಿಮಾನದ ತಂಟೆಗೆ ಬಂದರೆ ಸುಮ್ಮನಿರಲ್ಲ, ಕನ್ನಡದ ನಾಮಫಲಕ ಹೋರಾಟ ಕೇವಲ ಬೆಂಗಳೂರಿಗೆ ಸಿಮೀತವಾಗಿರಲ್ಲ, ಮೂವತ್ತು ಜಿಲ್ಲೆಗಳಲ್ಲೂ ನಡೆಯುತ್ತದೆ. ಕರವೇ ಕಾರ್ಯಕರ್ತರು ನಿಜವಾದ ಹೋರಾಟಗಾರರು, ಸಿನಿಮಾಗಳಲ್ಲಿ ನಟಿಸಿಕೊಂಡು, ಹೊಟ್ಟೆ ಪಾಡಿಗಾಗಿ ಹೋರಾಟ ನಡೆಸುವವರಲ್ಲ ಎಂದರು.ಪೊಲೀಸರು ಬಂಧಿಸಿದ ಎರಡು ದಿನ ಊಟ ಕೊಡಲಿಲ್ಲ, ಜಾಮೀನು ಮಂಜೂರಾದರೂ ಸಂಚು ರೂಪಿಸಿ ಪುನಃ ಬಂಧಿಸಿದರು. ಚಿಕ್ಕಜಾಲ ಠಾಣೆಯಲ್ಲಿ ಒಂದೇ ದಿನ ೯ ಪ್ರಕರಣ ದಾಖಲಿಸಿದರು, ಬಂಧಿಸಲು ಮುಂದಾದಾಗ ವಕೀಲರು ನಮ್ಮ ಪರವಾಗಿ ನಿಂತರು, ಹೋರಾಟದ ಸಮಯದಲ್ಲಿ ನಮ್ಮನ್ನು ಬಂಧಿಸಿ ಕರವೇ ಹೋರಾಟವನ್ನು ಇಡೀ ದೇಶ, ವಿದೇಶಕ್ಕೆ ಪರಿಚಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ರನ್ನು ಅಭಿನಂಧಿಸುತ್ತೇನೆ, ಕರವೇಯ ತಾಕತ್ತನ್ನು ಅವರು ತೋರಿಸಿಕೊಟ್ಟಿದ್ದಾರೆ, ಸರ್ಕಾರಕ್ಕೆ ಹೆದರಲು ಸಾಧ್ಯವಿಲ್ಲ, ಪ್ರತಿ ಜಿಲ್ಲೆಯಲ್ಲಿಯೂ ಬಲಿಷ್ಠವಾಗಬೇಕು, ಕೇವಲ ಪದಾಧಿಕಾರಿಯಾಗಿ ನೇಮಕ ಪಡೆದು ಕೂರಬೇಡಿ, ಪ್ರತಿಯೊಬ್ಬರಲ್ಲೂ ಹೋರಾಟದ ಕಿಚ್ಚು ಹತ್ತಬೇಕು ಎಂದರು.
ಜಿಲ್ಲಾಧ್ಯಕ್ಷ ಮೇಡಿಹಾಳ ರಾಘವೇಂದ್ರ ಮಾತನಾಡಿ, ಕೋಲಾರ ಜಿಲ್ಲೆಯು ಆಂಧ್ರ, ತಮಿಳುನಾಡು ಗಡಿಯಲ್ಲಿದೆ, ಆದರೂ ಸಹ ಕನ್ನಡಕ್ಕೆ ಧಕ್ಕೆ ಉಂಟಾಗದಂತೆ ಹೋರಾಟಗಳನ್ನು ರೂಪಿಸಲಾಗುತ್ತಿದೆ ಎಂದರು.ಕೆಜಿಎಫ್ನ ಪ್ರತಿಷ್ಠಿತ ಬೆಮೆಲ್ ಸಂಸ್ಥೆಯಲ್ಲಿ ಕನ್ನಡಿಗರನ್ನು ವಂಚಿಸಿ ಬೇರೆ ರಾಜ್ಯದವರಿಗೆ ಕೆಲಸ ನೀಡಲಾಗುತ್ತಿದೆ, ಹೊರಗುತ್ತಿಗೆ ಆಧಾರದ ಮೇಲೂ ಕನ್ನಡಿಗರಿಗೆ ಆದ್ಯತೆ ನೀಡುತ್ತಿಲ್ಲ, ಇದರ ವಿರುದ್ಧ ದೊಡ್ಡ ಮಟ್ಟದಲ್ಲಿ ಹೋರಾಟ ರೂಪಿಸಲಾಗುವುದು ಎಂದು ಹೇಳಿದರು.
ಕೋಲಾರ ಜಿಲ್ಲಾ ಕರವೇ ಪದಾಧಿಕಾರಿಗಳ ಆಯ್ಕೆ:ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಕಾರ್ಯದರ್ಶಿಯಾಗಿ ಜನ್ನಘಟ್ಟ ನವೀನ್, ಕೋಲಾರ ತಾಲೂಕು ಗೌರವಾಧ್ಯಕ್ಷರಾಗಿ ಪಿ.ಸುರೇಶ್, ಎಂ.ಮುನಿರಾಜು, ಡಿ.ಆರ್.ಚೌಡೇಗೌಡ, ಮಾಲೂರು ತಾಲೂಕು ಅಧ್ಯಕ್ಷರಾಗಿ ಎನ್.ವಿ.ಶಶಿಕುಮಾರ್, ಉಪಾಧ್ಯಕ್ಷ ಎನ್.ವಿ.ಶಂಕರ್, ಸಂಚಾಲಕರಾಗಿ ಜಬೀವುಲ್ಲಾ ಬೇಗ್, ವಿ.ಶಿವಕುಮಾರ್, ಜಿಲ್ಲಾ ರೈತ ಘಟಕದ ಅಧ್ಯಕ್ಷರಾಗಿ ವಿ.ಕೆ.ಶಂಕರ್ರೆಡ್ಡಿ, ಉಪಾಧ್ಯಕ್ಷರಾಗಿ ಬಿ.ಎಚ್.ಸಂಪತ್ ಕುಮಾರ್, ಕೋಲಾರ ತಾಲೂಕು ಕಾರ್ಮಿಕ ಘಟಕದ ಅಧ್ಯಕ್ಷರಾಗಿ ಡಿ.ವಿ.ಮಂಜುನಾಥ್, ಮಾಲೂರು ನಗರಾಧ್ಯಕ್ಷರಾಗಿ ಸಿ.ಎನ್.ನವೀನ್, ಉಪಾದ್ಯಕ್ಷರಾಗಿ ಮಾದೇಗೌಡ, ಕಾರ್ಯದರ್ಶಿಯಾಗಿ ರಫಿಕ್ ಖಾನ್, ಸಿ.ಪಿ.ಹರೀಶ್, ಕೋಲಾರ ತಾಲೂಕು ಯುವ ಘಟಕದ ಅಧ್ಯಕ್ಷರಾಗಿ ಜಿ.ಕೆ.ವೇಣು, ಕಾರ್ಯದರ್ಶಿಯಾಗಿ ಜೆ.ಎನ್.ಶಿವಾನಂದ್, ಕೋಲಾರ ನಗರ ಘಟಕದ ಅಧ್ಯಕ್ಷರಾಗಿ ಗಣೇಶ್, ಕಾರ್ಮಿಕ ಘಟಕದ ಜಿಲ್ಲಾ ಕಾರ್ಯದರ್ಶಿಯಾಗಿ ಡಿ.ಎನ್.ಆಂಜಿ, ಸಂಚಾಲಕರಾಗಿ ಡಿ.ಎಂ.ಶಶಿಕುಮಾರ್, ಸುಗಟೂರು ಹೋಬಳಿ ಅಧ್ಯಕ್ಷರಾಗಿ ಎಸ್.ವಿ.ನಾಗರಾಜ್, ವೇಮಗಲ್ ಹೋಬಳಿ ಅಧ್ಯಕ್ಷ ಬಿ.ವಿ.ಚಲಪತಿ, ರೈತ ಘಟಕದ ಕೋಲಾರ ತಾಲೂಕು ಅಧ್ಯಕ್ಷರಾಗಿ ವಿ.ಸುರೇಶ್, ಮುಳಬಾಗಿಲು ತಾಲೂಕು ಅಧ್ಯಕ್ಷರಾಗಿ ಆರ್.ರಾಮ್ಕುಮಾರ್, ಶ್ರೀನಿವಾಸಪುರ ತಾಲೂಕು ಅಧ್ಯಕ್ಷರಾಗಿ ಎಸ್.ಎನ್.ಅಯ್ಯಪ್ಪ, ಬಂಗಾರಪೇಟೆ ಅಧ್ಯಕ್ಷರಾಗಿ ಎಸ್.ವಿಜಯ್ಕುಮಾರ್, ಹುತ್ತೂರು ಹೋಬಳಿ ರೈತ ಘಟಕದ ಅಧ್ಯಕ್ಷರಾಗಿ ಹೆಚ್.ಎಂ.ರಮೇಶ್, ಹೋಳೂರು ಹೋಬಳಿ ಎನ್.ಶಿವಾನಂದ್ರನ್ನು ಆಯ್ಕೆ ಮಾಡಲಾಯಿತು.ರಾಜ್ಯ ಪ್ರಧಾನ ಕಾರ್ಯದರ್ಶಿ ಸಣ್ಣೀರಪ್ಪ, ರಾಜ್ಯ ಸಂಘಟನಾ ಕಾರ್ಯದರ್ಶಿ ಅಬ್ಬಿಗೆರೆ ವಿನೋದ್, ಜಿಲ್ಲಾ ಗೌರವಾಧ್ಯಕ್ಷ ಮುನಿರಾಜು, ಕೋದಂಡಪ್ಪ, ಮದಿರಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುನಿರಾಜು, ಬಂಗಾರಪೇಟೆ ತಾಲೂಕು ಅಧ್ಯಕ್ಷ ರಾಮಪ್ರಸಾದ್, ಮಾಲೂರು ತಾಲೂಕು ಅಧ್ಯಕ್ಷ ಶ್ರೀನಿವಾಸ್, ಮುಳಬಾಗಿಲು ತಾಲೂಕು ಅಧ್ಯಕ್ಷ ಹುಸೇನ್ ಇದ್ದರು.