ಶಿಗ್ಗಾಂವಿ: ತಾಲೂಕಿನ ಗೊಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ರದ್ದುಪಡಿಸಿರುವ ಎಂಟು ಕೋರ್ಸಗ ಳನ್ನು ಮುಂದುವರಿಸುವಂತೆ ಆಗ್ರಹಿಸಿ ಹಾಗೂ ಸರದಿ ಅನಿರ್ದಿಷ್ಟಾವಧಿ ಉಪವಾಸ ಧರಣಿ ನಡೆಸುತ್ತಿರುವ ಅತಿಥಿ ಉಪನ್ಯಾಸಕರ ಹೋರಾಟವನ್ನು ಬೆಂಬಲಿಸಿ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್ಎಫ್ಐ) ಮತ್ತು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ (ಡಿವೈಎಫ್ಐ) ಹಾವೇರಿ ಜಿಲ್ಲಾ ಸಮಿತಿಗಳ ನೇತೃತ್ವದಲ್ಲಿ ಶುಕ್ರವಾರ ಧರಣಿ ನಡೆಸಲಾಯಿತು.
ಪ್ರತಿಭಟನೆ ಉದ್ದೇಶಿಸಿ ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಮಾತನಾಡಿ, ಏಕಾಏಕಿ ಎಂಟು ಕೋರ್ಸಗಳನ್ನು ರದ್ದುಪಡಿಸಿರುವ ಕ್ರಮಕ್ಕೆ ಹೊಣೆ ಯಾರು ಎಂಬುದನ್ನು ಸ್ಪಷ್ಪಪಡಿಸಬೇಕು. ಆಡಳಿತ ಮಂಡಳಿಯ ಲೋಪದೋಷಗಳಿಂದ ವಿವಿ ಅಭಿವೃದ್ಧಿ ಕುಂಠಿತವಾಗಿದ್ದು, ರಾಜ್ಯ ಸರ್ಕಾರ ಈ ಕುರಿತು ಗಮನ ಹರಿಸಬೇಕು ಎಂದು ಒತ್ತಾಯಿಸಿದರು.
ವಿದ್ಯಾರ್ಥಿಗಳ ಸಮಸ್ಯೆ ಪರಿಹರಿಸಲು ಒತ್ತಾಯ: ಎಸ್ಎಫ್ಐ ರಾಜ್ಯ ಉಪಾಧ್ಯಕ್ಷ ಬಸವರಾಜ ಎಸ್. ಮಾತನಾಡಿ, ಅತಿಥಿ ಉಪನ್ಯಾಸಕರನ್ನು ಹಲವು ವರ್ಷಗಳಿಂದ ನೇಮಕ ಮಾಡಿಕೊಂಡು, ಯಾವುದೇ ನೋಟಿಸ್ ನೀಡದೆ ದಿಢೀರ್ ಕೆಲಸದಿಂದ ಬಿಡುಗಡೆ ಮಾಡಿರುವುದು ಸರಿಯಲ್ಲ. ವಾರ್ಷಿಕ ಅವಧಿ ಮುಗಿಯುವವರೆಗೆ ಅವರನ್ನು ಸೇವೆಯಲ್ಲಿ ಮುಂದುವರಿಸಬೇಕು. ಬಾಕಿ ವೇತನ ಬಿಡುಗಡೆ ಸೇರಿದಂತೆ ಉಪವಾಸ ಧರಣಿ ನಿರತ ಉಪನ್ಯಾಸಕರ ಬೇಡಿಕೆಗಳನ್ನು ಈಡೇರಿಸಲು ಆಡಳಿತ ಮಂಡಳಿ ಹಾಗೂ ಉನ್ನತ ಶಿಕ್ಷಣ ಇಲಾಖೆ ಮುಂದಾಗಬೇಕು ಎಂದು ಹೇಳಿದರು.ಪ್ರಗತಿಪರ ಚಿಂತಕ ಮಂಜುನಾಥ ಕರ್ಜಗಿ ಮಾತನಾಡಿದರು.
ಕಾಲೇಜು ಶುಲ್ಕ ಹಾಗೂ ವಿದ್ಯಾರ್ಥಿ ವೇತನದ ಗೊಂದಲಗಳ ಕುರಿತು ವಿದ್ಯಾರ್ಥಿಗಳಿಗೆ ಸ್ಪಷ್ಟ ಮಾಹಿತಿ ನೀಡಬೇಕು. ಈ ಕುರಿತು ನೋಟಿಸ್ ಪ್ರಕಟಿಸಿ, ಯಾವುದೇ ವಿದ್ಯಾರ್ಥಿ ವಿದ್ಯಾರ್ಥಿ ವೇತನದಿಂದ ವಂಚಿತನಾಗದಂತೆ ಕ್ರಮ ಕೈಗೊಳ್ಳಬೇಕು ಎಂದರು.