ಚನ್ನಪಟ್ಟಣ: ಕುವೆಂಪು ಕನ್ನಡ ಸಾಹಿತ್ಯದ ಮೇಲ್ಪಂಕ್ತಿಯ ಕವಿ. ಕನ್ನಡ ನಾಡು, ನುಡಿ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆ ಅಪಾರ ಎಂದು ಕನ್ನಡ ಭಾಷಾ ಅಧ್ಯಾಪಕ ಯೋಗೇಶ್ ಚಕ್ಕೆರೆ ಹೇಳಿದರು.
ವಿಶ್ವಮಾನವ ಸಂದೇಶ ಸಾರಿದ ಕುವೆಂಪು ಅವರ ವಿಚಾರಪ್ರೇರಕ ಕೃತಿಗಳನ್ನು ಓದಿ, ಅರ್ಥೈಸಿಕೊಂಡು ಅದರಲ್ಲಿನ ಅಂಶಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಲ್ಲಿ ವಿದ್ಯಾರ್ಥಿಗಳು ಉತ್ತಮ ಬದುಕು ಕಟ್ಟಿಕೊಳ್ಳಬಹುದು. ಕುವೆಂಪು ಯುವಜನರಿಗೆ ಎಂದೆಂದಿಗೂ ಸ್ಫೂರ್ತಿದಾಯಕ ವ್ಯಕ್ತಿಯಾಗಿ ನಿಲ್ಲುತ್ತಾರೆ, ಸರ್ವಧರ್ಮ ಸಮನ್ವಯತೆಯನ್ನು ಜಗತ್ತಿಗೆ ಸಾರಿದ ಅವರ ತತ್ವ ಆದರ್ಶಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಶಿಕ್ಷಕ ಮಧುಸೂದನ್ ಮಾತನಾಡಿ, ಕುವೆಂಪು ಅವರು ನುಡಿದಂತೆ ನಡೆದರು,ತಮ್ಮ ಕೃತಿಗಳಲ್ಲಿ ಬರೆದಿದ್ದನ್ನು ತಮ್ಮ ಜೀವನದಲ್ಲಿ ಪಾಲಿಸಿದರು. ಪ್ರಾಮಾಣಿಕತೆ ಮತ್ತು ಸರಳತೆ ರೂಢಿಸಿಕೊಂಡ ಅವರು ಎಲ್ಲರಲ್ಲೂ ಪ್ರೀತಿ ಮತ್ತು ಕರುಣೆ ಬಯಸಿದರು. ಮನುಷ್ಯತ್ವದಲ್ಲಿ ನಂಬಿಕೆ ಹೊಂದಿದ್ದ ಅವರು ವಿಶ್ವಮಾನವನಾಗಿ ರೂಪುಗೊಳ್ಳಲು ಪ್ರೇರೇಪಿಸಿದರು. ಸೌಹಾರ್ದ, ಭಾತೃತ್ವಕ್ಕೆ ಹೆಚ್ಚಿನ ಒತ್ತು ನೀಡಿದ ಕುವೆಂಪು ಅವರ ವೈಚಾರಿಕ ಚಿಂತನೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರತಿಯೊಬ್ಬರು ಪ್ರಯತ್ನಿಸಬೇಕು ಎಂದರು.ಕಾರ್ಯಕ್ರಮದಲ್ಲಿ ಶಿಕ್ಷಕರಾದ ಬಿ. ಕೆ. ಲತಾ, ವಿಶ್ವನಾಥ ಸಿಂಗ್, ಪುಟ್ಟಮ್ಮ, ವಸಂತರಾಜ್ , ಪ್ರಥಮದರ್ಜೆ ಸಹಾಯಕ ಶಶಿಕುಮಾರ್ ಮೊದಲಾದವರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಕುವೆಂಪು ಗೀತೆಗಳ ಗಾಯನ ನಡೆಸಿಕೊಟ್ಟರು.
(ಫೋಟೋ ಕ್ಯಾಫ್ಷನ್)