ವಿದ್ಯಾರ್ಥಿಗಳು ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಿ: ಹಾಕಪ್ಪ ಆರ್. ಲಮಾಣಿ

KannadaprabhaNewsNetwork | Published : Jun 3, 2024 12:30 AM

ಸಾರಾಂಶ

ಉಡುಪಿ ತಾ.ಪಂ. ಸಭಾಂಗಣದಲ್ಲಿ ಹಿಂ. ವರ್ಗಗಳ ಕಲ್ಯಾಣ ಇಲಾಖೆಗೆಯ ವತಿಯಿಂದ ಉಡುಪಿ ತಾಲೂಕಿನ ವಿದ್ಯಾರ್ಥಿನಿಲಯಗಳಲ್ಲಿ ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ ವ್ಯಾಸಾಂಗ ಮಾಡಿ ಶೇ. 90ಕ್ಕೂ ಮೇಲ್ಪಟ್ಟು ಅಂಕ ಗಳಿಸಿರುವ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಸರ್ಕಾರವು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅನುಕೂಲವಾಗುವಂತೆ ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದೆ. ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹಿಂದುಳಿದ ವರ್ಗಗಳ ಜಿಲ್ಲಾ ಅಧಿಕಾರಿ ಹಾಕಪ್ಪ ಆರ್. ಲಮಾಣಿ ಹೇಳಿದರು.

ಅವರು ಶುಕ್ರವಾರ ಉಡುಪಿ ತಾ.ಪಂ. ಸಭಾಂಗಣದಲ್ಲಿ ಹಿಂ. ವರ್ಗಗಳ ಕಲ್ಯಾಣ ಇಲಾಖೆಗೆಯ ವತಿಯಿಂದ ಉಡುಪಿ ತಾಲೂಕಿನ ವಿದ್ಯಾರ್ಥಿನಿಲಯಗಳಲ್ಲಿ ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ ವ್ಯಾಸಾಂಗ ಮಾಡಿ ಶೇ. 90ಕ್ಕೂ ಮೇಲ್ಪಟ್ಟು ಅಂಕ ಗಳಿಸಿರುವ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ರಾಜ್ಯಮಟ್ಟದಲ್ಲಿಯೇ ಉಡುಪಿ ಜಿಲ್ಲೆಯು ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದಿದ್ದು, ಇದಕ್ಕೆ ವಿದ್ಯಾರ್ಥಿಗಳ ಹಾಗೂ ಉಪನ್ಯಾಸಕರ ಪರಿಶ್ರಮವೇ ಕಾರಣ. ಮುಂದಿನ ದಿನಗಳಲ್ಲಿಯೂ ಸಹ ಉಡುಪಿ ಜಿಲ್ಲೆಯು ಶೇಕಡ ನೂರರಷ್ಟು ಫಲಿತಾಂಶವನ್ನು ಪಡೆದು ಜಿಲ್ಲೆಯ ಹೆಗ್ಗಳಿಕೆಯನ್ನು ದುಪ್ಪಟ್ಟುಗೊಳಿಸಬೇಕು ಎಂದರು.

ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಮಹಾಲಕ್ಷ್ಮೀ ಬೋಳಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಿಟ್ಟೂರು ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಅನುಸೂಯ, ಉಡುಪಿ ಸರ್ಕಾರಿ ಪಪೂ ಕಾಲೇಜಿನ ಉಪನ್ಯಾಸಕ ನಾಗರಾಜ್, ಸರ್ಕಾರಿ ಬಾಲಕಿಯರ ಪಪೂ ಕಾಲೇಜಿನ ಉಪನ್ಯಾಸಕಿ ಛಾಯಾ ಶೆಟ್ಟಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು. ನಿಲಯ ಮೇಲ್ವಚಾರಕಿ ಸುಜಾತ ಸ್ವಾಗತಿಸಿದರು. ಶ್ರೀಕಾಂತ್ ಗುನಗ ನಿರೂಪಿಸಿದರು. ವಸಂತಿ ಕುಮಾರಿ ಎನ್.ಎಸ್. ವಂದಿಸಿದರು.

* ಸಾಧಕ ವಿದ್ಯಾರ್ಥಿಗಳು

ನಿಟ್ಟೂರು ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿ ದೇವರಾಜ್, ಹಿರಿಯಡ್ಕ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದ ಲಿಂಗರಾಜು ಮತ್ತು ಬಾಗಣ್ಣ, ಬಡಗಬೆಟ್ಟು ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದ ಗೋವರ್ಧನ್, ಬಲೈಪಾದೆ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದ ಗಗನ್ ಮತ್ತು ಚಿರಂಜೀವಿ, ಬನ್ನಂಜೆ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದ ಆಯೆಷಾ, ಆದಿ ಉಡುಪಿ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದ ಮಂಜುಳ, ಕಿನ್ನಿಮೂಲ್ಕಿ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದ ದೀಪಿಕಾ ಹಾಗೂ ಪ್ರಿಯಾಂಕಾ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

Share this article