ಕನ್ನಡಪ್ರಭ ವಾರ್ತೆ ಮಾಲೂರು
ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಪದವಿ ಪಡೆಯುವುದೇ ಮೂಲ ಉದ್ದೇಶವಾಗಿರಬಾರದು. ಶೈಕ್ಷಣಿಕ ವ್ಯಾಸಂಗದ ಜೊತೆಗೆ ಮುಂದಿನ ಭವಿಷ್ಯಕ್ಕೆ ಅಗತ್ಯವಿರುವ ಕೌಶಲಗಳನ್ನು ಬೆಳೆಸಿಕೊಳ್ಳಬೇಕು ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯದ ಉಪಕುಲಪತಿ ನಿರಂಜನ ವಾನಹಳ್ಳಿ ಹೇಳಿದರು.ಪಟ್ಟಣದ ವೈಟ್ ಗಾರ್ಡನ್ ಬಡಾವಣೆಯಲ್ಲಿರುವ ಮಾನಸ ಪದವಿ ಕಾಲೇಜು ಸಭಾಂಗಣದಲ್ಲಿ ಐಸಿಎಂಎ ಹಾಗೂ ಮಾನಸ ಪದವಿ ಕಾಲೇಜು ಸಹಯೋಗದಲ್ಲಿ ಪದವಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಮೆಗಾ ಕೆರಿಯರ್ ಕೌನ್ಸಲಿಂಗ್ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಉದ್ಯೋಗ ಕೌಶಲ ಬೆಳೆಸಿಕೊಳ್ಳಿ
ವಿದ್ಯಾರ್ಥಿಗಳು ಪದವಿ ಪಡೆಯುವ ವೇಳೆ ಕೇವಲ ಅಂಕಗಳಿಗಾಗಿ ಮಾತ್ರ ವ್ಯಾಸಂಗ ಮಾಡದೆ ವಿದ್ಯಾರ್ಥಿ ನಂತರದ ಜೀವನದಲ್ಲಿ ತಾವು ಉದ್ಯೋಗ ಕ್ಷೇತ್ರದ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು ಒಬ್ಬ ವಿದ್ಯಾರ್ಥಿಯು ಕೌಶಲ್ಯಗಳನ್ನು ಬೆಳೆಸಿಕೊಂಡಲ್ಲಿ ಯಾವುದೇ ಕ್ಷೇತ್ರದಲ್ಲಿ ಪ್ರಗತಿ ಹೊಂದಲು ಸಾಧ್ಯವಾಗುತ್ತದೆ. ಕೌಶಲ್ಯ ತರಬೇತಿ ನೀಡುವ ಕಾರ್ಯಗಾರಗಳು ವಿದ್ಯಾರ್ಥಿಗಳು ಬದುಕು ಕಟ್ಟಿಕೊಳ್ಳಲು ಸಹಾಯಕವಾಗುತ್ತದೆ ಎಂದರು.ಪದವಿ ಪಡೆಯುವುದರ ಜೊತೆಗೆ ವಿಶ್ವವಿದ್ಯಾನಿಲಯಗಳು ಉದ್ಯೋಗ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಉದ್ಯೋಗ ಪಡೆಯುವದು ಹೇಗೆ ಎಂಬುದರ ಬಗ್ಗೆ ಕೌಶಲ್ಯಗಳನ್ನು ಬೆಳೆಸುವ ತರಬೇತಿ ಕಾರ್ಯಕ್ರಮಗಳನ್ನು ಸಹ ಏರ್ಪಡಿಸಲಾಗುತ್ತಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು.ಮೆಗಾ ಕೆರಿಯರ್ ಕೌನ್ಸೆಲಿಂಗ್
ವಿದ್ಯಾರ್ಥಿಗಳಿಗೆ ಕೌಶಲ್ಯಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಐಸಿಎಂಗೆ ತಂಡವು ಕಾಲೇಜುಗಳಲ್ಲಿ ಕೌಶಲ್ಯ ತರಬೇತಿ ಅಂತಹ ಮೆಗಾ ಕೆರಿಯರ್ ಕೌನ್ಸೆಲಿಂಗ್ ಕಾರ್ಯಕ್ರಮಗಳನ್ನು ಆಯೋಜಿಸಿ ನುರಿತ ಅನುಭವಿ ಸಂಪನ್ಮೂಲ ವ್ಯಕ್ತಿಗಳಿಂದ ಉದ್ಯೋಗಕ್ಕೆ ಸಂಬಂಧಿಸಿದ ಕೌಶಲ್ಯಗಳ ವಿದ್ಯಾರ್ಥಿಗಳು ಹಾಗೂ ಯುವಕರು ಹೇಗೆ ಬೆಳೆಸಿಕೊಳ್ಳಬೇಕು ಎಂಬುದರ ಬಗ್ಗೆ ಉಪನ್ಯಾಸವನ್ನು ನೀಡುತ್ತಾ ಉತ್ತಮ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿದೆ ಎಂದರು.ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಪದವಿ ವಿದ್ಯಾರ್ಥಿಗಳು ಕೌಶಲ್ಯಗಳ ಬಗ್ಗೆ ಹೆಚ್ಚಿನ ಜಾಗೃತಿ ಪಡೆದುಕೊಂಡು ವಿದ್ಯಾಭ್ಯಾಸದ ನಂತರ ಉದ್ಯೋಗದ ಆಯ್ಕೆಗೆ ಅನುಕೂಲವಾಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ಐಸಿಎಂಎ ಅಧ್ಯಕ್ಷ ದೇವರಾಜು, ನಿರ್ದೇಶಕ ಜಿ ಸಿ ರಾವ್, ಕೋಲಾರ ಪದವಿ ಕಾಲೇಜಿನ ವಾಣಿಜ್ಯಶಾಸ್ತ್ರದ ಮುಖ್ಯ ಅಧೀಕ್ಷಕ ಮುರಳಿಧರ್, ಐಸಿಎಂಎ ಅಭಿಜಿತ್ ರಾಜೀವ್, ಮಾನಸ ಕಾಲೇಜಿನ ಪ್ರಾಂಶುಪಾಲ ಮಾರ್ಕೊಂಡಪ್ಪ, ಇನ್ನಿತರರು ಹಾಜರಿದ್ದರು.