ಹಾರೋಹಳ್ಳಿ: ಪರಿಸರ ಕಾಪಾಡುವುದರಲ್ಲಿ ಶಾಲಾ ವಿದ್ಯಾರ್ಥಿಗಳು, ಯುವಕರು ಪಾಲ್ಗೊಳ್ಳಬೇಕು. ಆಗ ಮಾತ್ರ ಪರಿಸರ ಸಂರಕ್ಷಿಸಲು ಸಾಧ್ಯ ಎಂದು ಬೆಂಗಳೂರು ಮಹಾನಗರ ಲಯನ್ಸ್ ಸರ್ವಿಸಸ್ ಫೌಂಡೇಷನ್ ಅಧ್ಯಕ್ಷ ವಿ.ರೇಣುಕುಮಾರ್ ಹೇಳಿದರು.
ಊರಿಗೊಂದು ವನ, ಪ್ರತಿ ಮನೆಗೆ 2 ಗಿಡ, ಮಗುವಿಗೊಂದು ಸಸಿ ಬೆಳೆಸಿ ಪರಿಸರ ಉಳಿಸಿ, ಗಿಡಮರಗಳನ್ನು ಪ್ರೀತಿಯಿಂದ ಬೆಳೆಸಿ, ಸ್ನೇಹಮಹಿಯಂತೆ ಕಾಣಬೇಕು. ಆ ಮರಗಳಲ್ಲಿ ಬರುವ ಶುದ್ಧ ಗಾಳಿ ಸೇವಿಸಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.
ನಮ್ಮ ಫೌಂಡೇಷನ್ ವತಿಯಿಂದ ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ಈ ಶಾಲೆಯನ್ನು ದತ್ತು ಪಡೆದುಕೊಂಡಿದ್ದೇವೆ. ಶಾಲೆಯ ಕಟ್ಟಡದ ಮೇಲ್ಛಾವಣಿ ಸೇರಿದಂತೆ ಇದಕ್ಕೆ ಅಗತ್ಯ ಬಣ್ಣ ಸುಣ್ಣಗಳಿಂದ ಕಂಗೊಳಿಸಲು 6 ಲಕ್ಷ ರು. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳು ಮಾಡಲಾಗುತ್ತಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿರುವ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಗುವುದು ಎಂದರು.ಲಯನ್ಸ್ ಜಿಲ್ಲಾ ಸಸಿ ನೆಡುವ ಕಾರ್ಯಕ್ರಮದ ಅಧ್ಯಕ್ಷ ಮರಸಪ್ಪ ರವಿ ಮಾತನಾಡಿ, ಈಗಾಗಲೇ ಶಾಲಾ ಕಾಲೇಜು, ದೇವಸ್ಥಾನ ರಸ್ತೆ ಬದಿಯಲ್ಲಿ ಸಹಸ್ರಾರು ಗಿಡ ಮರಗಳನ್ನು ನೆಡಲಾಗಿದೆ. ಇಂದು ಶಾಲೆಯಲ್ಲಿ ನೆಡುತ್ತಿರುವ ಗಿಡಗಳ ಪೋಷಣೆ ಉಸ್ತುವಾರಿಯನ್ನು ಶಾಲಾ ಮಕ್ಕಳಿಗೆ ವಹಿಸಲಾಗಿದೆ. ವಿದ್ಯಾರ್ಥಿಗಳು ಪರಿಸರ ಉಳಿಸಿ ಬೆಳೆಸುವ ಮೂಲಕ ಜವಾಬ್ದಾರಿಯನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಈ ವೇಳೆ ಸರ್ವಿಸಸ್ ಫೌಂಡೇಷನ್ ಪದಾಧಿಕಾರಿಗಳಾದ ಕೆ.ಎನ್.ಪಾಟೀಲ್, ಕೆ.ಜಿ.ಶ್ರೀಕಂಠೇಶ್ವರ, ಖಜಾಂಚಿ ಕೆ.ಭಾರತಿ, ಪ್ರಶಾಂತ್, ಕುಮಾರ್, ಸಿ.ಆರ್.ಪಿ ಸುಬ್ರಮಣ್ಯಂ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನಾಗರಾಜು, ಅಶ್ವತ್ ನಾರಾಯಣ್ ಮತ್ತಿತರರು ಉಪಸ್ಥಿತರಿದ್ದರು.
ಹಾರೋಹಳ್ಳಿ ತಾಲೂಕಿನ ಮರಳವಾಡಿ ರಸ್ತೆ ಕರಿಕಲ್ ದೊಡ್ಡಿ ಗೇಟ್ ಬಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಗಿಡಗಳನ್ನು ನೆಡಲಾಯಿತು.