ಕನ್ನಡಪ್ರಭ ವಾರ್ತೆ ತುಮಕೂರುಉತ್ತಮ ಅಂಕದ ಜೊತೆಗೆ, ಬದುಕಿಗೆ ಬೇಕಾದ ಜೀವನದ ಕೌಶಲ್ಯ ಕಲಿತು ಮಾನವೀಯ ಗುಣಗಳೊಂದಿಗೆ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಬಾಳುವಂತೆ ಪಾವಗಡದ ಶ್ರೀರಾಮಕೃಷ್ಣ ಸೇವಾಶ್ರಮದ ಮುಖ್ಯಸ್ಥ ಡಾ.ಜಪಾನಂದಜೀ ಮಹಾರಾಜ್ ತಿಳಿಸಿದ್ದಾರೆ. ನಗರದ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಆಯೋಜಿಸಿದ್ದ 2026-27ನೇ ಸಾಲಿನ ಸಾಂಸ್ಕೃತಿಕ, ಕ್ರೀಡೆ, ಎನ್ಎಸ್ಎಸ್ ಘಟಕಗಳ ಉದ್ಘಾಟನಾ ಸಮಾರಂಭ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ತಂದೆ, ತಾಯಿ, ಗುರು, ಹಿರಿಯರನ್ನು ಗೌರವಿಸುವ, ಸಮಾಜದ ಬಗ್ಗೆ ಕಳಕಳಿ ಹೊಂದಿರುವ ಮಕ್ಕಳು ನೀವಾಗಬೇಕು ಎಂದು ಕಿವಿ ಮಾತು ಹೇಳಿದರು. ಈ ಕಾಲೇಜಿನ ಬಗ್ಗೆ ಮೊದಲು ನಿಮಗೆ ಹೆಮ್ಮೆ ಇರಲಿ. ದೇಶ ನಿಮಗೆ ಎಲ್ಲವನ್ನು ಕೊಟ್ಟಿದೆ. ಹಾಗಾಗಿ ನೀವು ದೇಶಕ್ಕಾಗಿ ಕೊಡುವಂತಹ ಮಕ್ಕಳಾಗಿ ತಯಾರಾಗಿ, ಶಾಲೆಯ ಸಚ್ಛತೆಯ ಜೊತೆಗೆ, ನಿಮ್ಮ ಮನಸ್ಸನ್ನು ಸ್ವಚ್ಛಗೊಳಿಸಿಕೊಳ್ಳಿ, ಈ ಕಾಲೇಜನ್ನು ಉಳಿಸಿ, ಬೆಳಸುವ ಜವಾಬ್ದಾರಿ ಪ್ರತಿ ವಿದ್ಯಾರ್ಥಿಯದು. ನಿಮ್ಮ ಕಲಿಕೆ ಮತ್ತಷ್ಟು ಸುಗಮಗೊಳಿಸಲು ನಮ್ಮ ಸಂಸ್ಥೆ ವತಿಯಿಂದ ಐದು ಲಕ್ಷ ರು.ಗಳ ಸ್ಮಾರ್ಟ್ ಬೋರ್ಡ್ ನೀಡುತ್ತಿದ್ದೇನೆ. ಇದರ ಸಮರ್ಥ ಬಳಕೆಯಾದರೆ ಮತ್ತೊಂದು ನೀಡುವುದಾಗಿ ಡಾ. ಜಪಾನಂದಜೀ ತಿಳಿಸಿದರು. ತುಮಕೂರು ನಗರ ಶಾಸಕ ಜಿ.ಬಿ.ಜೋತಿಗಣೇಶ್ , ಪಿಯು ಡಿಡಿಪಿಐ ರಾಧಾ.ಎಂ.ಎಸ್, ತುಮಕೂರು ವಿವಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು, ಎಚ್.ಜಿ.ಚಂದ್ರಶೇಖರ್, ಪ್ರಾಂಶುಪಾಲ ರಾಜಕುಮಾರ್ , ಡಾ.ಆರ್.ಎಲ್.ರಮೇಶ್ ಬಾಬು, ಬಿ.ಆರ್.ನಟರಾಜಶೆಟ್ಟಿ, ವಸಂತಕುಮಾರ್, ಪುಷ್ಪಾವತಿ, ಆರ್, ಡಾ.ಲೋಕೇಶ್, ಜಿ.ಎಚ್,, ನಾಗರಾಜು.ಕೆ, ರವಿ.ಬಿ.ಆರ್, ಡಾ.ಗಂಗಾಂಬಿಕೆ ಇತರರಿದ್ದರು.